
ಸಂಜೆವಾಣಿ ನ್ಯೂಸ್
ಮೈಸೂರು ಆ.25:- ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2.0ರಡಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 15.50 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ಹರೀಶ್ ಗೌಡ ಗುದ್ದಲಿಪೂಜೆ ನೆರವೇರಿಸಿದರು.
ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-4ರ ವ್ಯಾಪ್ತಿಯಲ್ಲಿ ಬೆಳಗ್ಗೆ 9.30ಕ್ಕೆ ವಾರ್ಡ್ ನಂ.21ರ ಚದುರಂಗ ರಸ್ತೆಯಲ್ಲಿ (ಜೆ.ಸಿ. ಕಾಲೇಜು ರಸ್ತೆ) ಹುಣಸೂರು ರಸ್ತೆಯಿಂದ ಬೋಗಾದಿ ರಸ್ತೆವರೆಗೆ 12.50 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗೆ ದಿವಂಗತ ಶಂಕರನಾಗ್ ವೃತ್ತದಲ್ಲಿ ಚಾಲನೆ ನೀಡಿದರು.
ನಂತರ ವಾರ್ಡ್ ನಂ.6ರ ನಂದಗೋಕುಲ ಬಡಾವಣೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಡ್ಡರಸ್ತೆಗಳಲ್ಲಿ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ, ಇಡಬ್ಲ್ಯುಎಸ್ ಬಡಾವಣೆ ರಸ್ತೆಗಳಲ್ಲಿ ಚರಂಡಿ ಹಾಗೂ ಉದ್ಯಾನವನ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-2.0ರಡಿ ಮೈಸೂರು ನಗರಕ್ಕೆ 250 ಕೋಟಿ ರೂ. ಅನುದಾನ ಬಂದಿದ್ದು, ಅದರಲ್ಲಿ ಚಾಮರಾಜ ಕ್ಷೇತ್ರಕ್ಕೆ 85 ಕೋಟಿ ರೂ. ನೀಡಲಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದು, ಗುಣಮಟ್ಟದ ಮತ್ತು ಕನಿಷ್ಠ 20 ವರ್ಷ ಬಾಳಿಕೆ ಬರುವ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಲಿಕೆಯ ಎಸ್ಇ ಸಿಂಧು, ಇಇ ಶ್ರೀನಿವಾಸ್, ಮಾಜಿ ಮಹಾಪೌರರಾದ ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಮಾಜಿ ಸದಸ್ಯ ಜೆ.ಗೋಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


































