Home ಜಿಲ್ಲೆ ತುಮಕೂರು ರಸ್ತೆ ಕೆಲಸ ಪೂರ್ಣಗೊಳಿಸಿದ ನಂತರ ಸಂಚಾರಕ್ಕೆ ಅವಕಾಶ ನೀಡಿ: ಜ್ಯೋತಿಗಣೇಶ್

ರಸ್ತೆ ಕೆಲಸ ಪೂರ್ಣಗೊಳಿಸಿದ ನಂತರ ಸಂಚಾರಕ್ಕೆ ಅವಕಾಶ ನೀಡಿ: ಜ್ಯೋತಿಗಣೇಶ್

ತುಮಕೂರು, ಆ. ೧- ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ಬಟವಾಡಿ- ಮಲ್ಲಸಂದ್ರದ ವರೆಗೂ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ತುಮಕೂರು ನಗರದ ರಸ್ತೆಯ ಒಂದು ಭಾಗದಲ್ಲಿ ಸಿಸಿ ಕಾಮಗಾರಿ ನಡೆಯುತ್ತಿದ್ದು, ಈ ಕೆಲಸವು ಪೂರ್ಣಗೊಳಿಸಿದ ನಂತರವೇ ಮತ್ತೊಂದು ಬದಿಯಲ್ಲಿ ಕೆಲಸ ಪ್ರಾರಂಭಿಸಿ ಏಕೆಂದರೆ, ಪ್ರಸ್ತುತ ಕಾಮಗಾರಿಯು ಪ್ರಗತಿಯಲ್ಲಿದ್ದು, ಈ ಸಮಯದಲ್ಲಿ ಸಂಚಾರಕ್ಕೆ ಮುಕ್ತಗೊಳಿಸಿದರೆ ದ್ವಿಚಕ್ರ ವಾಹನ ಸವಾರರು ಬೀಳುವ ಸಾಧ್ಯತೆಗಳು ಹೆಚಾಗಿದ್ದು, ಈ ಕಾರಣದಿಂದ ಒಂದು ಭಾಗದಲ್ಲಿ ರಸ್ತೆ ಅಭಿವೃದ್ಧಿ, ಫುಟ್‌ಬಾತ್ ಅಭಿವೃದ್ಧಿ ಹಾಗೂ ಇತರೆ ಕೆಲಸಗಳ ಪೂರ್ಣಗೊಂಡ ನಂತರವೇ ಸಂಚಾರಕ್ಕೆ ಅವಕಾಶ ಮಾಡಿಕೊಡಿ, ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ತುಮಕೂರು ನಗರದಲ್ಲಿ ನಡೆಯುತ್ತಿರುವ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಜತೆ ಮಾತನಾಡಿದ ಅವರು, ಪ್ರಮುಖ ಸರ್ಕಲ್‌ಗಳಾದ ಶಿವಕುಮಾರಸ್ವಾಮೀಜಿ ಸರ್ಕಲ್, ಭದ್ರಮ್ಮ ಸರ್ಕಲ್, ಲಕ್ಕಪ್ಪ ಸರ್ಕಲ್, ಗುಬ್ಬಿ ಗೇಟ್ ರಿಂಗ್ ರಸ್ತೆಯಲ್ಲಿ ಸಿಸಿ ರಸ್ತೆ ಕಾಮಗಾರಿ ಮಾಡುವ ಸಮಯದಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತದೆ. ಈ ಕಾರಣದಿಂದ ಪೊಲೀಸ್ ಇಲಾಖೆಯ ಸಹಕಾರ ಪಡೆದು ರಸ್ತೆ ಅಭಿವೃದ್ಧಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.


ನಂತರ ಶಾಸಕರು ಭಾರತಿನಗರದ ಮೂಲಕ ದೇವರಾಯಪಟ್ಟಣಕ್ಕೆ ಹೋಗುವ ಅಂಡರ್‌ಪಾಸ್ ಬಳಿ ಸಿಸಿ ರಸ್ತೆಯನ್ನು ರಾ.ಹೆ.ಪ್ರಾಧಿಕಾರದ ವತಿಯಿಂದ ಕಾಮಗಾರಿ ಪ್ರಾರಂಭ ಮಾಡಿದ್ದು, ೨ ತಿಂಗಳು ಕಳೆದರು ಸಹ ಕಾಮಗಾರಿ ಅಪೂರ್ಣಗೊಂಡಿದ್ದು, ರಾತ್ರಿ ವೇಳೆ ಹಲವಾರು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

ನಗರದ ಹನುಮಂತಪುರದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ರಾಷ್ಟ್ರೀಯ ಹೆದ್ದಾರಿಗೆ ಲಿಂಕ್ ಆಗುವ ರಸ್ತೆಯ ಹತ್ತಿರ ಚರಂಡಿ ಕಾಮಗಾರಿಯಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಬೇಕು. ಪುಟ್ಟಸ್ವಾಮಯ್ಯನಪಾಳ್ಯದಿಂದ ಸತ್ಯಮಂಗಲಕ್ಕೆ ಹೋಗುವ ರಸ್ತೆಯಲ್ಲಿ ಹಾಲಿ ಇರುವ ಅಂಡರ್ ಪಾಸ್‌ನ್ನು ಅಭಿವೃದ್ಧಿಪಡಿಸಬೇಕು. ಅಂತರಸನಹಳ್ಳಿಯಿಂದ ಮಧುಗಿರಿ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ರಾ.ಹೆದ್ದಾರಿ ಅಂಡರ್ ಪಾಸ್ ಬಳಿ ಮಳೆ ಬಂದಂತಹ ಸಂದರ್ಭದಲ್ಲಿ ಅಂಡರ್ ಪಾಸ್‌ನಲ್ಲಿ ನೀರು ನಿಂತು ಸಾರ್ವಜನಿಕರು ಓಡಾಡಲೂ ತೊಂದರೆ ಉಂಟಾಗುತ್ತಿದ್ದು, ಸದರಿ ಸಮಸ್ಯೆಯನ್ನು ಬಗೆಹರಿಸಬೇಕು. ರಂಗಾಪುರ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, ಮಳೆ ಬಂದಂತಹ ಸಂದರ್ಭದಲ್ಲಿ ಸರ್ವೀಸ್ ರಸ್ತೆಯ ಎಡಭಾಗದಲ್ಲಿ ಭಾರಿ ಪ್ರಮಾಣದ ಮಳೆ ನೀರು ನುಗ್ಗಿ ಖಾಸಗಿ ಸ್ವತ್ತುಗಳಿಗೆ ತೊಂದರೆ ಉಂಟಾಗುತ್ತಿದ್ದು, ಈ ಕೂಡಲೇ ಸರಿಪಡಿಸಬೇಕು. ಪೊಲೀಸ್ ಇಲಾಖೆ, ತುಮಕೂರು ಮಹಾನಗರಪಾಲಿಕೆ, ಬೆಸ್ಕಾಂ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇವುಗಳೊಂದಿಗೆ ಸಮನ್ವಯತೆಯೊಂದಿಗೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.