Home ಸುದ್ದಿ ರಾಷ್ಟ್ರೀಯ ಅಹಂಕಾರವೇ ರಾಜೇಶ್ ಖನ್ನಾ ಪತನಕ್ಕೆ ಕಾರಣ

ಅಹಂಕಾರವೇ ರಾಜೇಶ್ ಖನ್ನಾ ಪತನಕ್ಕೆ ಕಾರಣ

ಮುಂಬೈ, ಆ. 9-ಬಾಲಿವುಡ್‍ನ ಹಿರಿಯ ಖಳನಟ ತೇಜ್ ಸಪ್ರು ಅವರು ಭಾರತದ ಮೊದಲ ಸೂಪರ್‍ಸ್ಟಾರ್ ರಾಜೇಶ್ ಖನ್ನಾ ಅವರೊಂದಿಗಿನ ತಮ್ಮ ಹಳೆಯ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ‘ದಿ ರೆಡಿಫ್’ ಪಾಡ್‍ಕ್ಯಾಸ್ಟ್‍ನಲ್ಲಿ ಮಾತನಾಡಿದ ಅವರು, ರಾಜೇಶ್ ಖನ್ನಾ ಅವರಲ್ಲಿದ್ದ ಅತಿಹೆಚ್ಚಿನ ಅಹಂಕಾರವೇ ಅವರ ವೃತ್ತಿಜೀವನದ ತ್ವರಿತ ಪತನಕ್ಕೆ ಮುಖ್ಯ ಕಾರಣವಾಯಿತು ಎಂದು ಬಹಿರಂಗಪಡಿಸಿದ್ದಾರೆ.


ಸಂದರ್ಶನದಲ್ಲಿ ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದ ಘಟನೆಯನ್ನು ನೆನಪಿಸಿಕೊಂಡ ಸಪ್ರು, “ಚಿತ್ರೀಕರಣದ ವೇಳೆ ಇದ್ದಕ್ಕಿದ್ದಂತೆ ಹಿಂದಿನಿಂದ ಯಾರೋ ನನ್ನನ್ನು ನಿಂದಿಸುತ್ತಿರುವ ಧ್ವನಿ ಕೇಳಿಸಿತು. ತಿರುಗಿ ನೋಡಿದಾಗ ಅದು ರಾಜೇಶ್ ಖನ್ನಾ (ಕಾಕಾಜಿ) ಅವರಾಗಿದ್ದರು. ರಾಜೇಶ್ ಖನ್ನಾ ಅವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ನನಗೆ ಈ ಘಟನೆ ತೀವ್ರ ಆಘಾತ ತಂದಿತ್ತು. ಇದು ಸೆಟ್‍ನಲ್ಲಿ ದೊಡ್ಡ ವಾಗ್ವಾದಕ್ಕೂ ಕಾರಣವಾಯಿತು. ಆದರೆ, ನಂತರದ ದಿನಗಳಲ್ಲಿ ಅವರು ತಮ್ಮ ತಪ್ಪಿನ ಅರಿವಾಗಿ ಕ್ಷಮೆ ಕೇಳಿದ್ದರು” ಎಂದು ತಿಳಿಸಿದ್ದಾರೆ.


ನಾಲ್ಕು ದಶಕಗಳ ವೃತ್ತಿಜೀವನದಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ತೇಜ್ ಸಪ್ರು, ಸೂಪರ್‍ಸ್ಟಾರ್‍ಡಮ್ ಒಬ್ಬ ವ್ಯಕ್ತಿಯನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ವಿವರಿಸಿದ್ದಾರೆ. “ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅಹಂಕಾರ ಬರುವುದು ಸಹಜ. ಆಗಾಗ್ಗೆ ನಮ್ಮ ಸುತ್ತಲಿನ ಜನರೂ ಸೂಪರ್‍ಸ್ಟಾರ್‍ಗಳ ಮನಸ್ಥಿತಿಯನ್ನು ಹಾಳುಮಾಡುತ್ತಾರೆ. ಧರ್ಮೇಂದ್ರ ಮತ್ತು ಜೀತೇಂದ್ರ ಅವರಿಗೆ ಹೋಲಿಸಿದರೆ ರಾಜೇಶ್ ಖನ್ನಾ ಅವರಲ್ಲಿದ್ದ ಅಹಂಕಾರವೇ ಅವರ ವೃತ್ತಿಜೀವನ ಬೇಗನೆ ಕೊನೆಗೊಳ್ಳಲು ಕಾರಣವಾಯಿತು. ಆದಾಗ್ಯೂ, ಅವರಷ್ಟು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ಮತ್ತೊಬ್ಬ ತಾರೆಯನ್ನು ನಾನು ನೋಡಿಲ್ಲ. ಜೊತೆಗೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿದರೆ, ರಾಜೇಶ್ ಖನ್ನಾ ಅವರಿಗಿಂತ ಉದಾರ ಗುಣದ ವ್ಯಕ್ತಿಯನ್ನು ನಾನು ಎಂದಿಗೂ ನೋಡಿಲ್ಲ” ಎಂದು ತೇಜ್ ಸಪ್ರು ನಟನ ಒಳ್ಳೆಯ ಗುಣಗಳನ್ನೂ ಸ್ಮರಿಸಿದ್ದಾರೆ.