Home Uncategorized ವಂಚನೆ: ತಂದೆ ಮಗಳ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

ವಂಚನೆ: ತಂದೆ ಮಗಳ ವಿರುದ್ಧದ ಪ್ರಕರಣ ರದ್ದತಿಗೆ ನಕಾರ

ಬೆಂಗಳೂರು:ಜು.17- ನಕಲಿ ನೇಮಕಾತಿ ಆದೇಶ, ನಕಲಿ ಇಮೇಲ್ ಐಡಿ ಮತ್ತು ನಕಲಿ ತರಬೇತಿ ಕಾರ್ಯಕ್ರಮಗಳ ಮೂಲಕ ಸರ್ಕಾರಿ ಉದ್ಯೋಗದ ಭರವಸೆ ನೀಡಿ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಿದ ಪುತ್ರಿ ಮತ್ತು ಆಕೆಯ ತಂದೆಯ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಶಂಶಾದ್ ಬೇಗಂ ಮತ್ತು ಅವರ ತಂದೆ ಎಂಎ ಮನ್ಸೂರ್ ಅಹ್ಮದ್ ಅವರು ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.


ಅಲ್ಲದೆ, ನಕಲಿ ನೇಮಕಾತಿ ಆದೇಶಗಳು, ನಕಲಿ ಇಮೇಲ್ ಐಡಿಗಳು, ನಕಲಿ ತರಬೇತಿ ಕೇಂದ್ರಗಳು ಅಥವಾ ಸರ್ಕಾರಿ ಇಲಾಖೆಗಳ ಮೂಲಕ ಮುಗ್ಧ, ಮೋಸ ಹೋಗುವ ಜನರನ್ನು ವಂಚಿಸುವ ಅರ್ಜಿದಾರರಿಗೆ ಈ ನ್ಯಾಯಾಲಯ ತನ್ನ ರಕ್ಷಣಾತ್ಮಕ ಕೈಗಳನ್ನು ನೀಡುವುದಿಲ್ಲ. ಒಂದು ಕಡೆ ನಕಲಿಯಾದರೆ ಎಲ್ಲಾ ಕಡೆ ನಕಲಿಯಾಗಲಿದೆ ಎಂದು ಪೀಠ ಹೇಳಿದೆ.


ಉಭಯ ಪಕ್ಷಗಾರರ ವಾದ ಆಲಿಸಿದ ಪೀಠ, ಆರೋಪಿಗಳು ಅಳವಡಿಸಿಕೊಂಡ ಕಾರ್ಯಾಚರಣೆಯ ವಿಧಾನವನ್ನು ದೂರಿನಲ್ಲಿ ಸೂಕ್ಷ್ಮವಾಗಿ ವಿವರಿಸಲಾಗಿದೆ ಮತ್ತು ತನಿಖೆಗೆ ಸಮರ್ಥನೀಯವಾದ ಸಾಕಷ್ಟು ವಸ್ತುಗಳನ್ನು ಬಹಿರಂಗಪಡಿಸಲಾಗಿದೆ.


ಆರೋಪಗಳು ಕೇವಲ ಉದ್ಯೋಗದ ಭರವಸೆಗಳಿಗೆ ಸೀಮಿತವಾಗಿದ್ದರೆ, ವಿಷಯ ಬೇರೆಯದೇ ನೆಲೆಯಲ್ಲಿ ನಿಲ್ಲುತ್ತಿತ್ತು. ಆದರೆ, ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸುವುದು, ನೇಮಕಾತಿ ಆದೇಶಗಳನ್ನು ನಕಲಿ ಮಾಡುವುದು, ಸರ್ಕಾರಿ ಇಲಾಖೆಗಳನ್ನು ನಕಲಿ ಮಾಡುವುದು ಮತ್ತು ಅಭ್ಯರ್ಥಿಗಳನ್ನು ಕಾಲ್ಪನಿಕ ತರಬೇತಿ ಕಾರ್ಯಕ್ರಮಗಳಿಗೆ ಕಳುಹಿಸುವುದು ಮುಂತಾದ ಆರೋಪಗಳು ಪ್ರಾಥಮಿಕವಾಗಿ ಅನುಮಾನಾಸ್ಪದ ಉದ್ಯೋಗಾಕಾಂಕ್ಷಿಗಳನ್ನು ವಂಚಿಸಲು ದೊಡ್ಡ ಪಿತೂರಿ ಬಹಿರಂಗಪಡಿಸಿವೆ ಎಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.


ಇದಕ್ಕೂ ಮುನ್ನ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬಲಿಪಶುವಾಗಿರುವ ಯಾರೂ ದೂರು ದಾಖಲಿಸಿಲ್ಲ. ಆಪಾದಿತ ಉದ್ಯೋಗ ಹಗರಣಕ್ಕೂ ದೂರುದಾರರಿಗೂ ಯಾವುದೇ ಸಂಬಂಧವಿಲ್ಲ. ಕ್ರಿಮಿನಲ್ ಮೊಕದ್ದಮೆಗಳು ಅರ್ಜಿದಾರರು ಈ ಹಿಂದೆ ಹೂಡಿದ್ದ ಮೊಕದ್ದಮೆಗಳಿಗೆ ಪ್ರತಿ ದೂರುಗಳಾಗಿವೆ. ಆದ್ದರಿಂದ ಪ್ರಕರಣ ರದ್ದುಗೊಳಿಸಬೇಕು ಎಂದು ಮನವಿ ಮಾಡಿದರು.


ಇದಕ್ಕೆ ಆಕ್ಷೇಪಿಸಿದ ಸರ್ಕಾರದ ವಕೀಲರು, ಹಲವು ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆ ನೀಡಿ ಆನ್ಲೈನ್ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಲಾಗಿದೆ. ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸಿ, ನಕಲಿ ನೇಮಕಾತಿ ಆದೇಶಗಳನ್ನು ನೀಡಲಾಗಿದೆ. ಆ ಅಭ್ಯರ್ಥಿಗಳನ್ನು ಕೋಲ್ಕತ್ತಾ ಮತ್ತು ಮಹಾರಾಷ್ಟ್ರದಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಿರ್ದೇಶಿಸಲಾಗಿದೆ. ಬಳಿಕ ಅಭ್ಯರ್ಥಿಗಳಿಗೆ ನೇಮಕಾತಿ ಮತ್ತು ತರಬೇತಿ ಕಾರ್ಯಕ್ರಮಗಳು ಕಾಲ್ಪನಿಕ ಎಂಬುದು ಅರಿವಿಗೆ ಬಂದಿದೆ ಎಂದರು.


ನಕಲಿ ನೇಮಕಾತಿ ಆದೇಶಗಳು, ನಕಲಿ ಸರ್ಕಾರಿ ಇಮೇಲ್ ಐಡಿಗಳು, ನಕಲಿ ಇಲಾಖೆಗಳು ಮತ್ತು ನಕಲಿ ತರಬೇತಿ ವ್ಯವಸ್ಥೆಗಳನ್ನು ಒಳಗೊಂಡ ವಿಸ್ತಾರವಾದ ಜಾಲವನ್ನು ತನಿಖೆಯು ಬಹಿರಂಗಪಡಿಸಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನೇಮಕಾತಿ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಅರ್ಜಿದಾರರು ಕಾಂಗ್ರೆಸ್ ಪಕ್ಷದ ನಾಯಕರೆಂದು ಬಿಂಬಿಸಿಕೊಳ್ಳುವ ಮೂಲಕ ಉದ್ಯೋಗಾಕಾಂಕ್ಷಿಗಳಿಂದ ಸುಮಾರು 5.3 ಕೋಟಿ ರೂ. ಸಂಗ್ರಹಿಸಿದ್ದಾರೆ. ಆದ್ದರಿಂದ ಅರ್ಜಿದಾರರ ವಿರುದ್ಧ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.