Home ಮುಖಪುಟ ಸುದ್ದಿ ಮಮತಾಗೆ ಶಾಕ್: ಟಿಎಂಸಿ ಸಂಸದ ಪ್ರಕಾಶ್ ಚಿಕ್ ಬರಾಕ್ ರಾಜೀನಾಮೆ

ಮಮತಾಗೆ ಶಾಕ್: ಟಿಎಂಸಿ ಸಂಸದ ಪ್ರಕಾಶ್ ಚಿಕ್ ಬರಾಕ್ ರಾಜೀನಾಮೆ

ಹೊಸದೆಹಲಿ.ಜೂ೧೧: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಭಿನ್ನಮತ ತಾರಕಕ್ಕೇರಿದ್ದು, ಕೇವಲ ಒಂದೇ ವಾರದಲ್ಲಿ ಪಕ್ಷಕ್ಕೆ ಮೂರನೇ ಭಾರಿ ಆಘಾತ ಎದುರಾಗಿದೆ. ಟಿಎಂಸಿಯ ಹಿರಿಯ ರಾಜ್ಯಸಭಾ ಸಂಸದ ಪ್ರಕಾಶ್ ಚಿಕ್ ಬರಾಕ್ ಅವರು ಇಂದು ತಮ್ಮ ಸಂಸದ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

ಸುಖೇಂದು ಶೇಖರ್ ರಾಯ್ ಮತ್ತು ಸುಸ್ಮಿತಾ ದೇವ್ ಅವರ ಬೆನ್ನಲ್ಲೇ ಈಗ ಪ್ರಕಾಶ್ ಚಿಕ್ ಬರಾಕ್ ಕೂಡ ಹೊರನಡೆದಿರುವುದು ಮಮತಾ ಬ್ಯಾನರ್ಜಿ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ. ಗುರುವಾರ ಬೆಳಿಗ್ಗೆ ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾದ ಬರಾಕ್, ತಮ್ಮ ರಾಜೀನಾಮೆ ಪತ್ರವನ್ನು ಔಪಚಾರಿಕವಾಗಿ ಹಸ್ತಾಂತರಿಸಿದ್ದಾರೆ.

“ನಾನು ನನ್ನ ರಾಜ್ಯಸಭಾ ಸದಸ್ಯತ್ವಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಗೌರವಾನ್ವಿತ ಸಭಾಪತಿಗಳು, ಉಪಸಭಾಪತಿಗಳು ಹಾಗೂ ರಾಜ್ಯಸಭಾ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು,” ಎಂದು ಪ್ರಕಾಶ್ ಚಿಕ್ ಬರಾಕ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕಾಶ್ ಚಿಕ್ ಬರಾಕ್ ರಾಜೀನಾಮೆಯಿಂದಾಗಿ ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಸದಸ್ಯರ ಬಲ ಕೇವಲ ೧೦ಕ್ಕೆ ಕುಸಿದಿದೆ. ಅಷ್ಟೇ ಅಲ್ಲದೆ, ಮುಂದಿನ ಒಂದು ವಾರದೊಳಗೆ ಟಿಎಂಸಿಯ ಇನ್ನೂ ಮೂವರು ರಾಜ್ಯಸಭಾ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ವರದಿ ಮಾಡಿದ್ದು, ಪಕ್ಷದ ಬಿಕ್ಕಟ್ಟು ಮತ್ತಷ್ಟು ಆಳವಾಗುವ ಮುನ್ಸೂಚನೆ ಸಿಕ್ಕಿದೆ.

ಪಶ್ಚಿಮ ಬಂಗಾಳದ ಉತ್ತರ ಭಾಗದ ಅಲಿಪುರ್ದುವಾರ್ ಜಿಲ್ಲೆಯವರಾದ ಪ್ರಕಾಶ್ ಚಿಕ್ ಬರಾಕ್, ಸಿಲಿಗುರಿ ವಲಯದ ಪ್ರಭಾವಿ ಬುಡಕಟ್ಟು (ಗಿರಿಜನ) ನಾಯಕರಾಗಿದ್ದಾರೆ. ಆಗಸ್ಟ್ ೨೦೨೩ ರಲ್ಲಿ ಟಿಎಂಸಿ ಟಿಕೆಟ್‌ನಿಂದ ಅವಿರೋಧವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಅವರು, ತಮ್ಮ ಸಮುದಾಯದಿಂದ ಮೇಲ್ಮನೆಗೆ ಆಯ್ಕೆಯಾದ ಮೊದಲ ಬುಡಕಟ್ಟು ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಟಿಎಂಸಿ ಇವರನ್ನು ಅಲಿಪುರ್ದುವಾರ್ ಜಿಲ್ಲಾ ಅಧ್ಯಕ್ಷರನ್ನಾಗಿಯೂ ನೇಮಿಸಿತ್ತು. ಸಂಸತ್ತಿನಲ್ಲಿ ಚಹಾ ತೋಟದ ಕಾರ್ಮಿಕರ ಹಕ್ಕುಗಳು, ಪಿಎಫ್ ಸೌಲಭ್ಯಗಳು ಮತ್ತು ಸಾಮಾಜಿಕ ಯೋಜನೆಗಳ ಪರವಾಗಿ ಇವರು ಸದಾ ಧ್ವನಿ ಎತ್ತುತ್ತಿದ್ದರು.

ಕಳೆದ ಸೋಮವಾರವಷ್ಟೇ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಪಕ್ಷ ಹಾಗೂ ರಾಜ್ಯಸಭೆಗೆ ರಾಜೀನಾಮೆ ನೀಡಿದ್ದರು. ಅದರ ಬೆನ್ನಲ್ಲೇ ಬುಧವಾರ ಮಾಜಿ ಕಾಂಗ್ರೆಸ್ ನಾಯಕಿ ಹಾಗೂ ಟಿಎಂಸಿ ಸಂಸದೆಯಾಗಿದ್ದ ಸುಸ್ಮಿತಾ ದೇವ್ ತಮ್ಮ ಸ್ಥಾನಕ್ಕೆ ಕದನ ವಿರಾಮ ಘೋಷಿಸಿ ಹೊರನಡೆದಿದ್ದರು. ಇದೀಗ ೨೪ ಗಂಟೆಗಳ ಒಳಗಾಗಿ ಬರಾಕ್ ಕೂಡ ರಾಜೀನಾಮೆ ನೀಡಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲೂ ಟಿಎಂಸಿ ಶಾಸಕಾಂಗ ಪಕ್ಷದಲ್ಲಿ ಅಭೂತಪೂರ್ವ ಬಂಡಾಯ ಎದ್ದಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಶೋವಂದೇಬ್ ಚಟ್ಟೋಪಾಧ್ಯಾಯ ಅವರನ್ನು ತಿರಸ್ಕರಿಸಿರುವ ಬರೋಬ್ಬರಿ ೫೮ ಶಾಸಕರು, ಬಂಡಾಯ ನಾಯಕ ರಿತಬ್ರತ ಬ್ಯಾನರ್ಜಿ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಬೆಂಬಲಿಸಿದ್ದಾರೆ. ಇದು ಟಿಎಂಸಿ ಇತಿಹಾಸದಲ್ಲೇ ಮಮತಾ ಬ್ಯಾನರ್ಜಿ ಎದುರಿಸುತ್ತಿರುವ ಅತ್ಯಂತ ದೊಡ್ಡ ಆಂತರಿಕ ಸವಾಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.