
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.11: ಪ್ರತಿಭಾ ಪ್ರದರ್ಶನಕ್ಕೆ ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಮಾಧ್ಯಮಗಳು ವೇದಿಕೆಯಾಗಿ ಮಾರ್ಪಾಟಾಗಿವೆ ಎಂದು ವಿವಿಯ ಕುಲಸಚಿವರಾದ ಪ್ರೊ. ವಿ ಲೋಕೇಶ್ ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ ಬಿ ಆರ್ ಅಂಬೇಡ್ಕರ್ ಸಭಾಭವನದಲ್ಲಿ ದಿ. ರಮಣಿಕ ಗುಪ್ತ ಅವರ ಸ್ಮರಣಾರ್ಥ ಆಯೋಜಿಸಿರುವ 10 ದಿನಗಳ ರಾಷ್ಟ್ರೀಯ ರಂಗಭೂಮಿ ಕಾರ್ಯಾಗಾರದ ಸಮಾರೋಪ ಸಮಾರಂಭವನ್ನು ಪ್ರೊ ಶಾಂತನಾಯ್ಕ್ ಅವರ ರಚಿತ ವೇರಾಳು ನಾಟಕ ದೃಶ್ಯ ಪ್ರದರ್ಶಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಲು ಶ್ರಮವಹಿಸಿ. ವಿವಿಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು. ಹತ್ತು ದಿನಗಳ ಕಾರ್ಯಗಾರವು ಯಶಸ್ವಿಯಾಗಿರುವುದು ಸಂತಸವಾಗಿದೆ ಎಂದರು.
ಸಮಾರೋಪ ನುಡಿಯಲ್ಲಿ ಮಾತನಾಡಿದ ವಿಜಯನಗರ ಜಿಲ್ಲೆಯ, ಎನ್ ಎಸ್ ಡಿ ರಂಗ ನಿರ್ದೇಶಕರಾದ ಸಾಂಬಶಿವ ದಳವಾಯಿ, ಪ್ರತಿಯೊಬ್ಬರು ಸಾಹಿತ್ಯದ ರಸವನ್ನು ಸವಿಯುವ ಮೂಲಕ ಗುರುತಿಸಿಕೊಳ್ಳುಬೇಕು. ಹತ್ತು ದಿನಗಳಲ್ಲಿ ನಾಟಕ ತರಬೇತಿ ಹಾಗೂ ನಾಟಕ ರಚನೆ ಸುಲಭದ ಮಾತಲ್ಲ. ನಾಟಕಕ್ಕೆ ನಿರ್ದಿಷ್ಟವಾದ ಸಮಯ ಬೇಕು. ಇಂತಹ ರಂಗಭೂಮಿ ಕಾರ್ಯಾಗಾರಗಳು ಮೈಸೂರು ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಬಳ್ಳಾರಿಯಲ್ಲಿ ಆಯೋಜಿಸಿದ್ದು ಸಂತಸಕರ ಎಂದರು.
ವಿವಿಯ ಕಲಾ ನಿಕಾಯದ ಡೀನರಾದ ಪ್ರೊ ರಾಬರ್ಟ್ ಜೋಸ್, ಟಿ. ಕೊಟ್ಟ್ರಪ್ಪ ರಂಗಭೂಮಿ ಕಲಾವಿದೆ ವೀಣಾ, ರಂಗ ನಿರ್ದೇಶಕ ಮಹೇಶ್ ವೇದಿಕೆಯಲ್ಲಿದ್ದರು.
ವಿಭಾಗದ ಮುಖ್ಯಸ್ಥರಾದ ಪ್ರೊ ಶಾಂತಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ ಅಣ್ಣಾಜಿ ಕೃಷ್ಣಾರೆಡ್ಡಿ ನಿರೂಪಿಸಿ, ವಂದಿಸಿದರು.
ಈ ಸಂದರ್ಭದಲ್ಲಿ ಪ್ರೊ ಶಾಂತನಾಯ್ಕ್ ಅವರ ರಚಿತ ವೇರಾಳು ನಾಟಕವನ್ನು ಪ್ರದರ್ಶನ ಮಾಡಲಾಯಿತು.
ನಾಟಕ ನಿರ್ದೇಶನ, ಜನಪದ ರಂಗ, ರಂಗಭೂಮಿ ಮತ್ತು ರಂಗಶಿಕ್ಷಣ, ಬಯಲಾಟ ಮೊದಲಾದ ಮಾದರಿಯ ಹತ್ತಕ್ಕೂ ಹೆಚ್ಚು ವಿವಿಧ ಕಾರ್ಯಾಗಾರದ 10 ದಿನಗಳ ಕಾಲ ನಡೆದ 250ಕ್ಕೂ ಅಧಿಕ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳು ಹಾಗೂ ಕಲಾವಿದರು ಉಪಸ್ಥಿತರಿದ್ದರು.
























