Home ಜಿಲ್ಲೆ ಕಲಬುರಗಿ ಸೇವೆ, ಶಿಕ್ಷಣ ಮತ್ತು ಸಂಸ್ಕಾರವೇ ಶ್ರೇಷ್ಠ ಜೀವನದ ಆಧಾರ : ಶಿವಲೀಲಾ ಧೋತ್ರೆ

ಸೇವೆ, ಶಿಕ್ಷಣ ಮತ್ತು ಸಂಸ್ಕಾರವೇ ಶ್ರೇಷ್ಠ ಜೀವನದ ಆಧಾರ : ಶಿವಲೀಲಾ ಧೋತ್ರೆ

ಕಲಬುರಗಿ:ಆ.3:ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪೂರೆ ಅವರ 105ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಇತಿಹಾಸ ವಿಭಾಗದ ಹಿರಿಯ ಉಪನ್ಯಾಸಕರಾದ ಶ್ರೀಮತಿ ಶಿವಲೀಲಾ ಧೋತ್ರೆ ಅವರು ವಹಿಸಿಕೊಂಡಿದ್ದರು. ಶ್ರೀಮತಿ ಶಿವಲೀಲಾ ಧೋತ್ರೆ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಹಾದೇವಪ್ಪ ರಾಂಪೂರೆ ಯವರ ಜನ್ಮ ಮತ್ತು ಹೋರಾಟದ ಕುರಿತು ತಿಳಿಹೇಳಿದ್ದರು. ಮಹಾರಾಷ್ಟ್ರದ ಸೋಲಾಪೂರಿನ ಕುಂಬಾರಿಯಲ್ಲಿ ಜನಿಸಿ, ಕಾರ್ಯ ಕ್ಷೇತ್ರವನ್ನಾಗಿ ಕಲಬುರಗಿಗೆ ಆಯ್ಕೆ ಮಾಡಿಕೊಂಡು ಈ ಕ್ಷೇತ್ರದಲ್ಲಿ ಶಿಕ್ಷಣ ಕ್ರಾಂತಿಯನ್ನೆ ಹುಟ್ಟಿಹಾಕಿದ ನಾಯಕನೆಂದು ಬಣ್ಣಿಸಿದ್ದರು. ಶಿಕ್ಷಣವೇ ಸಮಾಜದ ಉನ್ನತಿಗೆ ಮೂಲಾಧಾರ ಎಂಬ ದೃಢ ನಂಬಿಕೆಯಿಂದ ಅವರು 1958 ಎಚ್.ಕೆ.ಇ. ಸೊಸೈಟಿಯನ್ನು ಮತ್ತು 1965 ರಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯವನ್ನು ಸ್ಥಾಪಿಸಿ ಜ್ಞಾನ ದೀಪವನ್ನು ಬೆಳಗಿಸಿ ಹೈದ್ರಾಬಾದ ಕರ್ನಾಟಕ ಭಾಗದ ಮದನಮೋಹನ ಮಾಳವಿಯಾ ಎಂದೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು ಎಂದು ಹೇಳಿದ್ದರು. ಮಹಾನ್ ವ್ಯಕ್ತಿಗಳಾದ ಅವರು ಭೌತಿಕವಾಗಿ ನಮ್ಮೊಂದಿಗಿರದಿದ್ದರೂ, ಅವರ ಆದರ್ಶಗಳು, ಚಿಂತನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಇಂದಿಗೂ ಸದಾ ಜೀವಂತವಾಗಿವೆ.
ಇಂದು ಅವರ ಪುಣ್ಯಸ್ಮರಣೆಯ ಸಂದರ್ಭದಲ್ಲಿ, ಅವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಶಿಕ್ಷಕರಾಗಿ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ ಉತ್ತಮ ಸಂಸ್ಕಾರಗಳನ್ನು ಬೆಳೆಸುವ ಹೊಣೆಗಾರಿಕೆಯನ್ನೂ ನಿಭಾಯಿಸೋಣ. ವಿದ್ಯಾರ್ಥಿಗಳೇ, ಶಿಕ್ಷಣವನ್ನು ಕೇವಲ ಉದ್ಯೋಗಕ್ಕಾಗಿ ಅಲ್ಲ, ಉತ್ತಮ ವ್ಯಕ್ತಿತ್ವ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪಡೆದುಕೊಳ್ಳಿ ಎಂದು ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಕುಮಾರಿ. ಓಂಕಾರೇಶ್ವರಿ ಮತ್ತು ಕುಮಾರಿ. ಪ್ರತಿಭಾ ಅವರು ಮಾತನಾಡಿ ಒಬ್ಬ ವ್ಯಕ್ತಿಯ ಜೀವನದ ಯಶಸ್ಸು ಅವರು ಎಷ್ಟು ವರ್ಷ ಬದುಕಿದರು ಎಂಬುದರ ಮೇಲೆ ಅಲ್ಲ; ಸಮಾಜಕ್ಕೆ ಅವರು ಎಷ್ಟು ಮೌಲ್ಯಯುತ ಸೇವೆ ಸಲ್ಲಿಸಿದರು ಎಂಬುದರ ಮೇಲೆ ಅಳೆಯಲ್ಪಡುತ್ತದೆ ಇಂಬುದಕ್ಕೆ ಲಿಂಗೈಕ್ಯ ಮಹಾದೇವಪ್ಪ ರಾಂಪೂರೆ ಅವರು ಸಾಕ್ಷಿಯಾಗಿ, ಶಿಕ್ಷಣ, ಸೇವೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ಶ್ರೀ ಮಹಾದೇವಪ್ಪ ರಾಂಪುರೆ ಅವರು ಅಜರಾಮರರಾಗಿದ್ದಾರೆ ಎಂದು ಮಾತನಾಡಿದರು.
ನಂತರ ಪದವಿಪೂರ್ವ ಕಾಲೇಜಿನಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಲಿಂ. ಮಹಾದೇವಪ್ಪ ರಾಂಪೂರೆ ಅವರ 105ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡ ವಿದ್ಯಾರ್ಥಿನಿಯರಿಗೆ ಬಹುಮಾನವನ್ನು ನೀಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ರಾಜೇಂದ್ರ ಕೊಂಡಾ ವಹಿಸಿಕೊಂಡು ಮಾತನಾಡುತ್ತ ಲಿಂ. ಮಹಾದೇವಪ್ಪ ರಾಂಪೂರೆ ಅವರು ಈ ಭಾಗದಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕದೇ ಇದ್ದರೆ ಎಷ್ಟೋ ಬಡ ಜನರಿಗೆ ವಿದ್ಯೆ ದೊರಕುವುದು ಕಷ್ಟವಾಗುತ್ತಿತು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶ್ರೀಮತಿ ವೀರಮ್ಮ ಗಂಗಸಿರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ಮೋಹನರಾಜ ಪತ್ತಾರ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಶ್ರೀಮತಿ ಜಗದೇವಿ ಚಿಕ್ಕೆಗೌಡ, ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದ ಡಾ.ಶಿವರಾಜ ಗೌನಳ್ಳಿ, ಪ್ರಾಧ್ಯಾಪಕರುಗಳಾದ ಡಾ. ವೈಜಿನಾಥ ವರ್ಮಾ, ಡಾ. ಸುಭಾಷಚಂದ್ರ ದೊಡ್ಡಮನಿ, ಡಾ. ರಾಜೇಶ, ಡಾ. ಜ್ಯೋತಿಪ್ರಕಾಶ ದೇಶಮುಖ ಮತ್ತು ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಎಲ್ಲಾ ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಕಾಲೇಜಿನ ಸಂಗೀತ ವಿಭಾಗ ಮುಖ್ಯಸ್ಥರಾದ ಡಾ. ರೇಣುಕಾ ಹಾಗರಗುಂಡಗಿ ಹಾಗೂ ಡಾ. ಮುಕಿ ಮೀಯಾ ಅವರು ವಿದ್ಯಾರ್ಥಿಗಳೊಡಣೆ ಪ್ರಾರ್ಥನಾ ಗೀತೆ ಹಾಡಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀದೇವಿ ಸರಡಗಿ ಎಲ್ಲರನ್ನು ಸ್ವಾಗತಿಸಿ, ನಿರೂಪಿಸಿ ಎಲ್ಲರನ್ನೂ ವಂದಿಸಿದ್ದರು ಎಂದು ಮಹಾವಿದ್ಯಾಲಯದ ನ್ಯಾಕ್ ಸಂಯೋಜಕರಾದ ಡಾ. ಮೋಹನರಾಜ ಪತ್ತಾರ ಪತ್ರಿಕಾ ಪ್ರಕಟಣೆಗಾಗಿ ತಿಳಿಸಿದ್ದಾರೆ.