
ಸಂಜೆವಾಣಿ ವಾರ್ತೆ,
ವಿಜಯಪುರ, ಮೇ. ೧೮: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಅಸ್ಮಿತೆ. ಕನ್ನಡಿಗರ ಸಾಂಘಿಕ ಶಕ್ತಿಯ ಪ್ರತಿರೂಪದಂತಿದ್ದು, ಅತ್ಯಂತ ಪ್ರಾಂಜಲ ಮನಸ್ಸಿನಿಂದ ಜ್ಞಾನ ದಾಸೋಹ ಕಾರ್ಯದ ಮೂಲಕ ನಿರಂತರವಾಗಿ ದತ್ತಿಗೋಷ್ಠಿಗಳನ್ನು ನಡೆಸುವ
ಮೂಲಕ ಜಿಲ್ಲಾ ಕಸಾಪ ಕಾರ್ಯ ಇಡೀ ಕನ್ನಡ ನಾಡಿಗೆ ಚಿರಪರಿಚಿತವಾಗಿದೆ. ವಿಶ್ವ ತಾಯಂದಿರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಇಂದಿನ ದತ್ತಿಗೋಷ್ಠಿ ಅತ್ಯಂತ ವೈವಿಧ್ಯಮಯವಾಗಿ ಮೂಡಿ ಬಂದಿದ್ದು, ತಾಯಿ
ಪ್ರೀತಿ,ತ್ಯಾಗ,ತಾಳ್ಮೆ, ನಿಸ್ವಾರ್ಥತೆಯ ಪ್ರತಿರೂಪವಾಗಿ
ಹೊರಹೊಮ್ಮಿದ್ದಾಳೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಜ್ಯಪಾಲ ಚವ್ಹಾಣ ಅಭಿಪ್ರಾಯಪಟ್ಟರು.
ರವಿವಾರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ.ಎಂ.ಎಸ್ ಖೇಡ ದತ್ತಿ, ದಿ.ಕೆ.ಜಿ ಬಾಗಿ ದತ್ತಿ, ದಿ. ಕುಂತಿದೇವಿ ಚಂದಪ್ಪ ಅಕ್ಕಲಕೋಟ ದತ್ತಿ ಹಾಗೂ ಹುಚ್ಚಪ್ಪ ಫಕೀರಪ್ಪ ಇಮ್ರಾಪುರ ದತ್ತಿ ಹೀಗೆ ವಿವಿಧ ದತ್ತಿಗೋಷ್ಠಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಜಿಲ್ಲೆಯಲ್ಲಿ ಕಸಾಪ ಅತ್ಯಂತ ಕ್ರಿಯಾಶೀಲವಾಗಿ ಸಾಹಿತ್ಯದ ಚಟುವಟಿಕೆಗಳನ್ನು ನಡೆಸುವ ಮೂಲಕ ನಾಡು-ನುಡಿಯ ಗೌರವ ಹೆಚ್ಚಿಸುವ ಕಾರ್ಯ ಮಾಡುತ್ತಿರುವುದು ಇಡೀ ಜಿಲ್ಲೆಯ ಘನತೆ,
ಗೌರವವನ್ನು ಹೆಚ್ಚಿಸಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಡಚಣ ಸಂಗಮೇಶ್ವರ ಪದವಿ
ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಎಂ.ಎಸ್ ಮಾಗಣಗೇರಿ ಮಾತನಾಡಿ, ದತ್ತಿದಾನಿಗಳನ್ನು ಸ್ಮರಿಸುವುದು ನಮ್ಮೆಲ್ಲರ ಧ್ಯೇಯವಾಗಬೇಕು. ಅವರು ತಮ್ಮ ತ್ಯಾಗದ ಫಲವಾಗಿ ಇಟ್ಟ
ದತ್ತಿಗೆ ಪ್ರತಿವಾರವೂ ಸಹ ನಾವು ಸಾಕ್ಷಿಯಾಗಿ ಜ್ಞಾನ ದಾಸೋಹ ಪಡೆದುಕೊಳ್ಳುವಲ್ಲಿ ನಿಜವಾಗಿಯೂ ಕನ್ನಡ ಸಾಹಿತ್ಯ ಪರಿಷತ್ ಶ್ರಮ ಸಾರ್ಥಕ ಎನಿಸಿದೆ ಎಂದರು.
“ವಿಶ್ವ ತಾಯಂದಿರ ದಿನಾಚರಣೆ” ಕುರಿತು ವಿಶೇಷ ಉಪನ್ಯಾಸ ನೀಡಿದ ಅರ್ಜುಣಗಿ ಸರಕಾರಿ ಪ.ಪೂ ಕಾಲೇಜಿನ ಉಪನ್ಯಾಸಕಿ ಡಾ. ಸವಿತಾ ಝಳಕಿ ಮಾತನಾಡಿ, ಉಪನಿಷತ್ತಿನ ವಾಣಿಯಂತೆ ತಾಯಿಯನ್ನು ದೇವರೆಂದು ಆರಾಧಿಸಿ, ಪೂಜಿಸುವ ಸನಾತನ ಸಂಸ್ಕೃತಿ ನಮ್ಮದು. ನಮ್ಮೆಲ್ಲರ ಸಹನಾಮೂರ್ತಿಯೇ ತಾಯಿ. ಬತ್ತಲಾರದ ಗಂಗೆಯAತೆ ತಾಯಿಯ ಪ್ರೀತಿ ಎಂದಿಗೂ ಕಡಿಮೆಯಾಗಲು ಸಾಧ್ಯವಿಲ್ಲ ಎನ್ನುತ್ತ ತಾಯಿಯ ನಿಸ್ವಾರ್ಥ ಪ್ರೀತಿ, ತ್ಯಾಗ ಮತ್ತು ಮಾರ್ಗದರ್ಶನವನ್ನು ಸ್ಮರಿಸಿ ತಾಯಿಯ ಕುರಿತು ಅನೇಕ ನಿದರ್ಶನಗಳನ್ನು ನೀಡುತ್ತ ಮಾರ್ಮಿಕವಾಗಿ ಉಪನ್ಯಾಸ ನೀಡಿದರು.
“ಜನಪದ ಸಾಹಿತ್ಯದಲ್ಲಿ ಗರತಿಯ ಜೀವನ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ತಾಳಿಕೋಟೆಯ ಜಾನಪದ ಸಾಹಿತಿ, ಶಿವಲೀಲಾ ಮುರಾಳ, ಜನಪದ ಸಾಹಿತ್ಯದಲ್ಲಿ ಗರತಿ ಎಂದರೆ ಗೃಹಿಣಿ. ಸಂಸಾರದ ಕಣ್ಣು ಮತ್ತು ಪಾತಿವೃತ್ಯದ ಸಾಕಾರಮೂರ್ತಿ.ನಿರಕ್ಷರಕುಕ್ಷಿಯಾಗಿದ್ದರೂ ಸಹ ಬದುಕಿನ ಅನುಭವಗಳನ್ನು ಕಾವ್ಯವಾಗಿಸುವಲ್ಲಿ ಈಕೆ ಸಿದ್ಧಹಸ್ತಳು. ಗರತಿಯರು ತಮ್ಮ ದೈ ನಂದಿನ ಕೆಲಸಗಳಾದ ಕುಟ್ಟುವಾಗ, ಬೀಸುವಾಗ, ಭತ್ತ ಒಕ್ಕುವಾಗ, ಮಗುವಿಗೆ ತೊಟ್ಟಿಲು ತೂಗುವಾಗ ಹಾಡಿದ ತ್ರಿಪದಿಗಳೇ ಇಂದು ಜನಪದ ಸಾಹಿತ್ಯದ ಜೀವಾಳವಾಗಿ ಹೊರಹೊಮ್ಮಿದೆ ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಕಾಸ ಖೇಡ, ಎಂ.ಡಿ.ಹೆಬ್ಬಿ, ಶಿವಕುಮಾರ ಬಾಗಿ, ಶಶಿಕಲಾ ಸ್ಥಾವರಮಠ, ಅರ್ಜುನ ಶಿರೂರ ಮುಂತಾದವರು ಮಾತನಾಡಿದರು.
ಸುನಂದಾ ಕೋರಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ ಸ್ವಾಗತಿಸಿ ಗೌರವಿಸಿದರು. ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ನಡೆಸಿಕೊಟ್ಟರು. ಗೌರವ ಕಾರ್ಯದರ್ಶಿ
ಶಿಲ್ಪಾ ಭಸ್ಮೆ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ,
ಜಿ.ಎಸ್.ಬಳ್ಳೂರ, ವಿಜಯಲಕ್ಷ್ಮಿ ಹಳಕಟ್ಟಿ, ಭಾಗೀರಥಿ ಸಿಂಧೆ, ಬಿ.ಎಂ. ಆಜೂರ, ಮಹಾದೇವ ಮೋಪಗಾರ, ಕೆ.ಎಸ್.ಹಣಮಾಣಿ, ಶ್ರೀಕಾಂತ ನಾಡಗೌಡ, ಸುಜ್ಞಾನಿ ಪಾಟೀಲ, ಬಸನಗೌಡ ಬಿರಾದಾರ, ಆಶಾ ಬಿರಾದಾರ, ಪರಮಾನಂದ ದೇವಣಗಾಂವಿ, ಮಲ್ಲಿಕಾರ್ಜುನ ಕೆಳಗಡೆ,
ಬಿ.ಎಸ್.ಕೋನರೆಡ್ಡಿ, ಮಹಾದೇವಿ ತೆಲಗಿ, ಮಲ್ಲಮ್ಮ ಹರಿಜನ ಮತ್ತಿತರರು ಇದ್ದರು.























