
ಆಳಂದ:ಮೇ.೧೮: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಸೃಷ್ಟಿ ಮಲ್ಲಿಕಾರ್ಜುನ್ ಪಾಟೀಲ್ ಅವರಿಗೆ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಭಾರತ ನಗರದ ಶ್ರೀ ಸಿದ್ಧಾರೂಢ ಮಠದಲ್ಲಿ ಜಿಲ್ಲಾ ಪಂಚಸೇನಾ ಸಮಿತಿಯಿಂದ ಆಯೋಜಿಸಲಾದ ಸಮಾರಂಭದಲ್ಲಿ, ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ವಿದ್ಯಾರ್ಥಿನಿಗೆ ರುದ್ರಾಕ್ಷಿ ಮಾಲೆ ಧರಿಸಿಸಿ, ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರ ನೀಡಿ ಆಶೀರ್ವದಿಸಿದರು.
ಕರ್ನಾಟಕದಲ್ಲಿ ಕಲಾ ವಿಭಾಗದಲ್ಲಿ ರಾಜ್ಯ ರ್ಯಾಂಕ್ ಪಡೆದ ಮೊಟ್ಟಮೊದಲ ಲಿಂಗಾಯತ ಪಂಚಮಸಾಲಿ ವಿದ್ಯಾರ್ಥಿ ಎಂಬ ಹೆಗ್ಗಳಿಕೆಗೆ ಸೃಷ್ಟಿ ಪಾಟೀಲ್ ಪಾತ್ರರಾಗಿದ್ದು, ಇದು ಇಡೀ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀಗಳು ಹೇಳಿದರು.
ಈ ಸಮಾರಂಭದಲ್ಲಿ ಜಿಲ್ಲಾ ಪಂಚಸೇನಾ ಅಧ್ಯಕ್ಷ ಸೋಮಶೇಖರ್ ಮುಲಗೆ, ತಾಳಿಕೋಟೆಯ ಬಾಪೂಗೌಡ ಪಾಟೀಲ್, ಅಪ್ಪುಗೌಡ ಪಾಟೀಲ್, ವಿದ್ಯಾರ್ಥಿನಿಯ ತಂದೆ-ತಾಯಿ ಮತ್ತು ಪಾಟೀಲ್ ಅನೇಕ ಗಣ್ಯರು ಉಪಸ್ಥಿತರಿದ್ದರು.























