
ಕಾಳಗಿ:ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಅಂಚೆ ಪ್ರಾದೇಶಿಕ ವಲಯ ಸ್ಥಾಪಿಸಿ, ಕಲಬುರಗಿಯಲ್ಲಿ ಪ್ರಾದೇಶಿಕ ಕೇಂದ್ರ ಕಚೇರಿ ತೆರೆಯುವಂತೆ ಮಾಜಿ ಲೋಕಸಭಾ ಸದಸ್ಯ ಡಾ. ಉಮೇಶ್ ಜಿ. ಜಾಧವ್ ಅವರು ಕೇಂದ್ರ ಅಂಚೆ ಇಲಾಖೆಯ ಕಾರ್ಯದರ್ಶಿ ಸುಬ್ರತ್ ದಾಸ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್ 14ರಂದು ನವದೆಹಲಿಯಲ್ಲಿ ಅಂಚೆ ಇಲಾಖೆಯ ಉಪ ಮಹಾನಿರ್ದೇಶಕರಾದ (ಸ್ಥಾಪನೆ ಮತ್ತು ಯೋಜನೆ) ದುಷ್ಯಂತ್ ಮುದ್ಗಲ್ ಅವರಿಗೆ ಮನವಿ ಪತ್ರ ಹಸ್ತಾಂತರಿಸಲಾಯಿತು.
ಈ ಹಿಂದೆ ಆಗಸ್ಟ್ 11ರಂದು ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಬರೆದಿದ್ದ ಪತ್ರಕ್ಕೆ, ಇಲಾಖೆಯಲ್ಲಿ ನಡೆಯುತ್ತಿರುವ ಪುನರ್ರಚನೆ ಪ್ರಕ್ರಿಯೆಯ ಫಲಿತಾಂಶದ ಆಧಾರದ ಮೇಲೆ ಪ್ರಸ್ತಾವನೆ ಪರಿಶೀಲಿಸಲಾಗುವುದು ಎಂದು ಸಚಿವರು ಆಗಸ್ಟ್ 28ರಂದು ಉತ್ತರಿಸಿದ್ದರು.
ಪ್ರಸ್ತುತ ಉತ್ತರ ಕರ್ನಾಟಕ ಅಂಚೆ ಪ್ರಾದೇಶಿಕ ವಲಯದ ಕೇಂದ್ರ ಕಚೇರಿ ಧಾರವಾಡದಲ್ಲಿದ್ದು, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಕಂದಾಯ ವಿಭಾಗಗಳ ಒಟ್ಟು 14 ಜಿಲ್ಲೆಗಳು ಹಾಗೂ 16 ಅಂಚೆ ವಿಭಾಗಗಳು ಇದರ ವ್ಯಾಪ್ತಿಗೆ ಬರುತ್ತವೆ. ದಕ್ಷಿಣ ಕರ್ನಾಟಕದಲ್ಲಿ ಎರಡು ಪ್ರಾದೇಶಿಕ ವಲಯಗಳಿದ್ದರೆ, ಇಡೀ ಉತ್ತರ ಕರ್ನಾಟಕಕ್ಕೆ ಒಂದೇ ವಲಯವಿದೆ. ಧಾರವಾಡಕ್ಕೆ ಬೀದರ್ನಿಂದ 470 ಕಿ.ಮೀ. ದೂರವಿದ್ದು, ರಸ್ತೆ ಮಾರ್ಗವಾಗಿ 10ರಿಂದ 12 ಗಂಟೆ ಪ್ರಯಾಣ ಬೇಕಾಗುತ್ತದೆ. ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳು 300ರಿಂದ 470 ಕಿ.ಮೀ. ದೂರದಲ್ಲಿವೆ.
ಕಲಬುರಗಿಯಲ್ಲಿ ಪ್ರತ್ಯೇಕ ಪ್ರಾದೇಶಿಕ ವಲಯ ಕಚೇರಿ ಆರಂಭವಾದರೆ ಸ್ಪೀಡ್ ಪೆÇೀಸ್ಟ್, ಪಾರ್ಸೆಲ್, ನೋಂದಾಯಿತ ಮತ್ತು ವಿಮಾ ಅಂಚೆ ಸೇವೆ ಹಾಗೂ ಹಣಕಾಸು ಸೇವೆಗಳ ನಿರ್ವಹಣೆ ಸುಧಾರಿಸಿ, ಆದಾಯವೂ ಹೆಚ್ಚಾಗಲಿದೆ. ಕಲಬುರಗಿಯ ಹೊನ್ನಕಿರಣಗಿಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಪಿಎಂ ಮಿತ್ರ ಜವಳಿ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಅಂಚೆ ಸೇವೆಗಳ ವಿಸ್ತರಣೆಗೆ ಹೆಚ್ಚಿನ ಅವಕಾಶವಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.




























