Home ಮುಖಪುಟ ಸುದ್ದಿ ಗುಂಡಿಕ್ಕಿ ಕೊಲೆ ಆರೋಪಿ ಸೆರೆ

ಗುಂಡಿಕ್ಕಿ ಕೊಲೆ ಆರೋಪಿ ಸೆರೆ

ಶಿವಮೊಗ್ಗ,ಸೆ.೭-ಶಿವಮೊಗ್ಗ ನಗರದ ಹೊರವಲಯ ರಾಮಿನಕೊಪ್ಪದಲ್ಲಿ ನಡೆದಿದ್ದ ಸೀಗೆಹಟ್ಟಿ ನಿವಾಸಿ ಕುಳ್ಳಿ ಕಿರಣ್ (೩೨) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಖ್ಯ ಆರೋಪಿ ಕಾಲಿಗೆ ಪೊಲೀಸರು ಗುಂಡಿಕ್ಕಿ ಇಂದು ವಶಕ್ಕೆ ಪಡೆದಿದ್ದಾರೆ.


ಉಮೇಶ್ ನಾಯ್ಕ್ ಆರೋಪಿಯಾಗಿದ್ದಾನೆ. ಈತನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ದಾಳಿಯಿಂದ ಗಾಯಗೊಂಡ ಪೊಲೀಸ್ ಸಿಬ್ಬಂದಿ ತಮ್ಮಣ್ಣರನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಉಳಿದಂತೆ ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ಪು ಅಲಿಯಾಸ್ ಬಾಬು ರಾಜೇಂದ್ರ, ಸುನೀಲ್, ಭುವನ್ ಹಾಗೂ ಮನೋಜ್ ಎಂಬ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಎನ್ ಆರ್ ಪುರ ರಸ್ತೆಯ ಲಿಂಗಾಪುರ ಗ್ರಾಮದ ಬಳಿ ಉಮೇಶ್ ನಾಯ್ಕ್ ನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿ ಕರೆತರುವ ವೇಳೆ, ಮುಖ್ಯ ಆರೋಪಿಯು ಲೀಡಿಂಗ್ ಚೈನ್ ನಿಂದ ಪೊಲೀಸ್ ಪೇದೆ ಮೇಲೆ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ.
ಈ ವೇಳೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಅವರು ಆರೋಪಿ ಕಾಲಿಗೆ ಗುಂಡಿಕ್ಕಿ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.


ದಾಳಿಯ ಮುನ್ಸೂಚನೆ ನೀಡಿದ್ದ ಪೊಲೀಸರು


ಕುಳ್ಳಿ ಕಿರಣನ ಮೇಲೆ ರೌಡಿ ತಂಡವೊಂದರಿಂದ ದಾಳಿಯಾಗುವ ಮುನ್ಸೂಚನೆಯ ಮಾಹಿತಿ ಅರಿತಿದ್ದ ದೊಡ್ಡಪೇಟೆ ಠಾಣೆ ಪೊಲೀಸರು, ಕುಳ್ಳಿ ಕಿರಣನಿಗೆ ಎಚ್ಚರಿಕೆಯಿಂದಿರುವಂತೆ ಹಲವು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದರು. ಪೊಲೀಸರು ನೀಡಿದ್ದ ಎಚ್ಚರಿಕೆ ಕಡೆಗಣಿಸಿದ್ದೆ ಕುಳ್ಳಿ ಕಿರಣನ ಜೀವಕ್ಕೆ ಎರವಾಗುವಂತಾಗಿದೆ ಎಂಬ ಮಾಹಿತಿಗಳು ಹರಿದಾಡುತ್ತಿವೆ. ಆದರೆ ಇದು ಅಧಿಕೃತವಾಗಿಲ್ಲ.

ಹಣಕಾಸಿನ ವ್ಯವಹಾರವೇ ಕೃತ್ಯಕ್ಕೆ ಕಾರಣ : ಎಸ್ಪಿ

‘ಕುಳ್ಳಿ ಕಿರಣನು ಮುಖ್ಯ ಆರೋಪಿ ಉಮೇಶ್ ನಾಯ್ಕ್ ಗೆ ೫೦ ಸಾವಿರ ರೂ. ಕೊಟ್ಟಿದ್ದ. ಸದರಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಿರಣನ ಹತ್ಯೆ ನಡೆದಿರುವ ಮಾಹಿತಿ ಲಭ್ಯವಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.