
ಚೆನ್ನೈ,ಸೆ.೭-ತಮಿಳುನಾಡು ವಿಧಾನಸಭೆಯ ಸೋಮವಾರದ ಕಲಾಪವು ಆರಂಭವಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿತ ಹಾಗೂ ಸರಣಿ ಹತ್ಯೆಗಳನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಈ ವಿಷಯದ ಕುರಿತು ತಕ್ಷಣ ಚರ್ಚೆ ನಡೆಸಬೇಕೆಂದು ಪಟ್ಟು ಹಿಡಿದು ಘೋಷಣೆಗಳನ್ನು ಕೂಗಿದ ಹಿನ್ನೆಲೆಯಲ್ಲಿ ಸದನದಲ್ಲಿ ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು.
ಈ ಗದ್ದಲದ ನಡುವೆಯೇ ವಿಧಾನಸಭೆಯಲ್ಲಿ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಪೊಲೀಸರು ಎಂದಿಗೂ ಅಧಿಕಾರದ ಕೇಂದ್ರವಾಗಬಾರದು; ಬದಲಿಗೆ ಸಾರ್ವಜನಿಕರ ನಿಜವಾದ ರಕ್ಷಕರಾಗಿ ಸೇವೆ ಸಲ್ಲಿಸಬೇಕು ಎಂದು ಖಡಕ್ಕಾಗಿ ಹೇಳಿದರು. ಪೊಲೀಸರು ಸಜ್ಜನರ ಸ್ನೇಹಿತರಾಗಿ ಮತ್ತು ಅಪರಾಧಿಗಳ ಪಾಲಿಗೆ ಸಿಂಹಸ್ವಪ್ನವಾಗಿ ವರ್ತಿಸಬೇಕು ಎಂದು ಕರೆ ನೀಡಿದ ಅವರು, ಕಾನೂನು ಪ್ರತಿಯೊಬ್ಬರಿಗೂ ಸಮಾನವಾಗಿದೆ ಎಂದು ಒತ್ತಿ ಹೇಳಿದರು. ಅಪರಾಧ ಎಸಗಿದ ವ್ಯಕ್ತಿಯ ರಾಜಕೀಯ ಹಿನ್ನೆಲೆ ಅಥವಾ ಪಕ್ಷದ ಸಂಬಂಧವನ್ನು ಲೆಕ್ಕಿಸದೆ, ಪ್ರತಿಯೊಬ್ಬ ಕ್ರಿಮಿನಲ್ ವಿರುದ್ಧವೂ ಕಾನೂನಿನ ಪ್ರಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಕಳೆದ ಮೂರು ತಿಂಗಳಲ್ಲಿ ನಡೆದ ಅಪರಾಧ ಘಟನೆಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿಗಳು, ಇಂತಹ ಘಟನೆಗಳು ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ. ಇವುಗಳಲ್ಲಿ ಹೆಚ್ಚಿನ ಪ್ರಕರಣಗಳು ಹಳೆಯ ವೈಷಮ್ಯ ಮತ್ತು ಸೇಡಿನ ಹಿನ್ನೆಲೆಯನ್ನು ಹೊಂದಿವೆ ಎಂದು ವಿವರಿಸಿದರು. ಪ್ರತಿಯೊಂದು ಅಪರಾಧದ ಹಿಂದೆ ಹಲವು ಕಾರಣಗಳಿದ್ದರೂ, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವ ಮೂಲಕ ರಾಜಕೀಯ ಲಾಭ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಕೊಯಮತ್ತೂರಿನಲ್ಲಿ ನಡೆದ ಕಾಲೇಜು ವಿದ್ಯಾರ್ಥಿಯ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈವರೆಗೆ ೩೬ ಜನರನ್ನು ಬಂಧಿಸಲಾಗಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಯುವಜನತೆಯ ಭವಿಷ್ಯವನ್ನು ಹಾಳು ಮಾಡುತ್ತಿರುವ ಮಾದಕ ದ್ರವ್ಯ ಜಾಲವನ್ನು ಮೂಲಸಮೇತ ಕಿತ್ತೊಗೆಯಲು ತಮ್ಮ ಸರ್ಕಾರ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಸಿಎಂ ವಿಜಯ್ ಪ್ರಕಟಿಸಿದರು. ಮಾದಕ ವಸ್ತುಗಳ ತಡೆಗೆ ರಾಜ್ಯದ ಎಲ್ಲಾ ೩೭ ಜಿಲ್ಲೆಗಳಲ್ಲಿ ವಿಶೇಷ ಮಾದಕ ದ್ರವ್ಯ ವಿರೋಧಿ ಪಡೆಗಳನ್ನು (ಆಂಟಿ-ಡ್ರಗ್ ಸ್ಕ್ವಾಡ್) ಸ್ಥಾಪಿಸಲಾಗಿದೆ. ಕಳೆದ ಮೂರು ತಿಂಗಳಲ್ಲಿ ಚೆನ್ನೈ ಒಂದರಲ್ಲೇ ಎನ್ಡಿಪಿಎಸ್ ಕಾಯ್ದೆಯಡಿ ೩೩೦ ಪ್ರಕರಣಗಳನ್ನು ದಾಖಲಿಸಿಕೊಂಡು, ೫೫೬ ಜನರನ್ನು ಬಂಧಿಸಲಾಗಿದೆ.
ಸರ್ಕಾರದ ಆಡಳಿತದಲ್ಲಿ ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹಿಷ್ಣುತಾ ನೀತಿಯನ್ನು ತಳಿಯಲಾಗಿದ್ದು, ಪೊಲೀಸ್ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರವು ಅಪರಾಧ ನಡೆದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ, ಅವು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಲು ’ಸಿಂಗಾಪುರ ವಿಶೇಷ ಪಡೆ’ಯನ್ನು ರಚಿಸಲಾಗಿದೆ ಎಂದು ವಿವರಿಸಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸದನಕ್ಕೆ ಭರವಸೆ ನೀಡಿದರು.






























