Home ಜಿಲ್ಲೆ ತುಮಕೂರು ಎಸ್‌ಐಆರ್: ಸೂಕ್ತ ಮಾಹಿತಿ ನೀಡಿ ಮತದಾನದ ಹಕ್ಕು ಪಡೆಯಲು ಕರೆ

ಎಸ್‌ಐಆರ್: ಸೂಕ್ತ ಮಾಹಿತಿ ನೀಡಿ ಮತದಾನದ ಹಕ್ಕು ಪಡೆಯಲು ಕರೆ

ತುಮಕೂರು, ಜು. ೪- ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ವಿಶೇಷ ಮತದಾರರ ಪಟ್ಟಿ ಪರಿಕ್ಷರಣೆ (ಎಸ್.ಐ.ಆರ್.) ನಡೆಯುತ್ತಿದ್ದು, ನಗರದ ೩೫ ವಾರ್ಡ್‌ಗಳ ಜನರು ತಮ್ಮ ಮನೆಯ ಬಳಿ ಬರುವ ಬಿ.ಎಲ್.ಓ.ಗಳು ನೀಡುವ ನೋಂದಣಿ ಫಾರಂಗೆ ಸೂಕ್ತ ಮಾಹಿತಿ ತುಂಬುವ ಮೂಲಕ ತಮ್ಮ ಮತದಾನದ ಹಕ್ಕನ್ನು ಪಡೆಯುವಂತೆ ಮಾಜಿ ಶಾಸಕ ಡಾ. ಎಸ್. ಷಫಿಅಹಮದ್ ಕರೆ ನೀಡಿದರು.


ನಗರದ ಮಕ್ಕಾ ಮಸೀದಿಯಲ್ಲಿ ಹಮ್ಮಿಕೊಂಡಿದ್ದ ಎಸ್.ಐ.ಆರ್. ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಎಸ್.ಐ.ಆರ್.ನಿಂದ ಯಾರು ಸಹ ಮತದಾನದ ಹಕ್ಕು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಪ್ರತಿಯೊಬ್ಬರು ತಮ್ಮ ಹೆಸರನ್ನು ನೊಂದಾಯಿಸುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ನಗರದ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಮ್ಯಾಫಿಂಗ್ ಕಾರ್ಯ ಒಂದು ಹಂತದಲ್ಲಿ ಪೂರ್ಣಗೊಂಡಿದ್ದು, ಜೂನ್ ೩೦ ರಿಂದ ಜುಲೈ ೨೯ ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಬಿಎಲ್‌ಓಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ನೊಂದಣಿ ಫಾರಂ (ಎನಬರೇಷನ್) ನೀಡಲಿದ್ದು, ಮತದಾರರು ಪ್ರಜ್ಞಾಪೂರ್ವಕವಾಗಿ ಫಾರಂ ಓದಿ, ಅರ್ಥ ಮಾಡಿಕೊಂಡು, ತಪ್ಪಿಲ್ಲದಂತೆ ಭರ್ತಿ ಮಾಡಿ ನೀಡಬೇಕಿದೆ. ಸಾರ್ವಜನಿಕರು ಬಿಎಲ್‌ಓಗಳೊಂದಿಗೆ ಸಹಕರಿಸಿ, ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಳಿಸಿಕೊಳ್ಳೋಣ ಎಂದು ಅವರು ಹೇಳಿದರು.


ತುಮಕೂರು ನಗರದ ೩೫ ವಾರ್ಡ್‌ಗಳಿಂದ ೨೩೨ ಬೂತ್‌ಗಳಿದ್ದು, ಪ್ರತಿ ಮನೆಗೆ ಬಿಎಲ್‌ಓಗಳು ಬರುತ್ತಾರೆ. ಆ ಸಂದರ್ಭದಲ್ಲಿ ಜನರು ತಮ್ಮ ಏನೇ ಕೆಲಸ ಇದ್ದರು ಬದಿಗೊತ್ತಿ, ಮತದಾರರ ನೋಂದಣಿ ಫಾರಂ ಭರ್ತಿ ಮಾಡಿ ಸಲ್ಲಿಸುವ ಮೂಲಕ ಲೋಪದೋಷವಿಲ್ಲದ ಮತದಾರರ ಪಟ್ಟಿ ಸಿದ್ದಪಡಿಸಲು ನಾವೆಲ್ಲರೂ ಸರ್ಕಾರದೊಂದಿಗೆ, ಚುನಾವಣಾ ಆಯೋಗದೊಂದಿಗೆ ಕೈಜೋಡಿಸಬೇಕಾಗಿದೆ. ಈಗಾಗಲೇ ಪ್ರತಿ ಬೂತ್‌ಗೆ ಇಬ್ಬರಂತೆ ಬಿಎಲ್‌ಓ ಜತೆಗೆ ಸ್ವಯಂ ಸೇವಕರನ್ನು ಸಹ ನೇಮಕ ಮಾಡಿದೆ. ಅವರ ಸಹಾಯ ಪಡೆದು, ತಪ್ಪಿಲ್ಲದಂತೆ ಮತದಾರರ ನೋಂದಣಿ ಫಾರಂ ಭರ್ತಿ ಮಾಡಿ, ಬಿಎಲ್‌ಒ ಅವರಿಗೆ ತಲುಪಿಸುವ ಜವಾಬ್ದಾರಿ ಪ್ರತಿ ಮತದಾರರದ್ದಾಗಿದೆ ಎಂದರು.


ವಿಧಾನ ಪರಿಷತ್ ಸದಸ್ಯ ಹಾಗೂ ಎಸ್.ಐ.ಆರ್. ಜಿಲ್ಲಾ ಉಸ್ತುವಾರಿ ರಮೇಶಬಾಬು ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ನಗರದ ಬಾರ್‌ಲೈನ್ ರಸ್ತೆಯಲ್ಲಿರುವ ಮಕ್ಕಾ ಮಸೀದಿಯಲ್ಲಿ ಎಸ್.ಐ.ಆರ್. ಕಾರ್ಯಾಗಾರ ಹಮ್ಮಿಕೊಂಡಿದೆ. ನಮ್ಮ ಪಕ್ಷದ ಬಿಲ್.ಎಲ್.ಎ-೨ ಗಳು ಪ್ರತಿ ಮತದಾರರ ಮನೆಗೆ ಭೇಟಿ ನೀಡಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಡಾ. ಎಸ್. ಷಫಿ ಅಹಮದ್ ಅವರ ನೇತೃತ್ವದಲ್ಲಿ ಕಾರ್ಯಾಗಾರ ನಡೆಸಿ, ಮಾಹಿತಿ ನೀಡುವ ಕೆಲಸ ಮಾಡಲಾಗುತ್ತಿದೆ ಎಂದರು.


ಎಪಿಸಿಆರ್‌ನ ಅಡ್ವೊಕೇಟ್ ತಾಹೀರ್ ಹುಸೇನ್ ಅವರು ಪಿಪಿಟಿ ಮೂಲಕ ಎಸ್.ಐ.ಆರ್.ನ ಮತದಾರರ ನೊಂದಣಿ ಫಾರಂ ತುಂಬುವುದು ಹೇಗೆ, ಇದರ ಮಹತ್ವವೇನು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಮುಖಂಡರಾದ ಅಫ್ತಾಬ್ ಅಹಮದ್, ನದೀಮ್ ಪಾಷ (ಚಿಚ್ಚ), ತಾಜುದ್ದೀನ್ ಷರೀಫ್, ಬಿಎಲ್‌ಒ ಕವಿತಾ, ಶಬ್ಬೀರ ಅಹಮದ್, ಅಜ್ಫಲ್‌ಖಾನ್, ಅಬ್ದುಲ್ ಸುಭಾನ್ ಮತ್ತಿತರರು ಪಾಲ್ಗೊಂಡಿದ್ದರು.