
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಆ.004 ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ 80ನೇ ಸ್ವಾತಂತ್ರ್ಯೋತ್ಸವದ ಪೂರ್ವಭಾವಿ ಸಭೆಗೆ ಕೆಲವು ಇಲಾಖೆಯ ಅಧಿಕಾರಿಗಳು ಗೈರು ಹಾಜರಿ ಕಂಡು ಶಾಸಕ ಕೆ.ನೇಮಿರಾಜ್ ನಾಯ್ಕ್ ಕೂಡಲೇ ನೋಟೀಸ್ ನೀಡುವಂತೆ ತಹಶೀಲ್ದಾರ್ ಗೆ ಸೂಚಿಸಿದರು. ಸಭೆಯ ಅಧ್ಯಕ್ಷತೆ ವಹಿಸಿ ಶಾಸಕರು ಮಾತನಾಡಿ ಕೊಟ್ಟೂರಲ್ಲಿ ಧ್ವಜಾರೋಹಣ ಮುಗಿಸಿಕೊಂಡು ಬರುವುದರಿಂದ ಮಕ್ಕಳು ಹಸಿವಿನಿಂದ ಕೂಡಬಾರದು ಅವರಿಗೆ ಟಿಫನ್ನು ವ್ಯವಸ್ಥೆ ಕಲ್ಪಿಸಲಾಗುವುದು. ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಬಸವ ರೆಡ್ಡಿಗೆ ಸೂಚಿಸಿದರು. ವೇದಿಕೆ ಸಿದ್ಧತೆ ಅಚ್ಚುಕಟ್ಟಾಗಿ ನಿರ್ವಹಿಸಲು ಪುರಸಭೆಗೆ ವಹಿಸಲಾಗುವುದು. ಇಲಾಖೆಯ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕಾರ್ಯಕ್ರಮಕ್ಕೆ ಸಾರ್ವಜನಿಕರು ರೈತರು ಸಂಘ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಬೇಕು. ದೇಶದ ಅಭಿಮಾನ ಪ್ರತಿಯೊಬ್ಬರ ರಕ್ತದಲ್ಲೂ ಹರಿಯಬೇಕು. ಎಸ್ ಎಸ್ ಎಲ್ ಸಿ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 5 ಜನ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಪಟ್ಟಣದ ಎಲ್ಲಾ ಬ್ಯಾಂಕುಗಳ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಧ್ವಜಾರೋಹಣ ಮಾಡಬೇಕು ಎಂದು ತಿಳಿಸಿದರು. ಗ್ಯಾರಂಟಿ ಸಮಿತಿಯ ತಾಲೂಕ ಅಧ್ಯಕ್ಷ ಸೊನ್ನದ್ ಗುರು ಬಸವರಾಜ್ ಮಾತನಾಡಿ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ತಂಡಗಳಿಗೆ ಪುಸ್ತಕದ ಜೊತೆಗೆ ಒಂದು ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿದರೆ ಸೂಕ್ತ ಎಂದು ತಿಳಿಸಿದರು. ಪುರಸಭೆಯ ಅಧ್ಯಕ್ಷೆ ರೇಷ್ಮಾ ಸಿಕಂದರ್ ಮಾತನಾಡಿ ಆಗಸ್ಟ್ 15 ದೇಶಕ್ಕೆ ಸ್ವಾತಂತ್ರ್ಯ ದೊರೆತ ದಿನ ನಾವೆಲ್ಲರೂ ಹಬ್ಬದ ರೀತಿಯಲ್ಲಿ ಆಚರಿಸುತ್ತೇವೆ. ಈ ಒಂದು ಆಚರಣೆಯಲ್ಲಿ ರೈತರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದರೆ ಸಂಭ್ರಮ ವಾಗಿರುತ್ತದೆ ಎಂದರು.ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಕವಿತ ಆರ್ ಮಾತನಾಡಿ ವೇದಿಕೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಶಿಷ್ಟಾಚಾರದ ಪ್ರಕಾರ ಆಸೀನರಾಗಿರುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕರು ವಹಿಸಿರುತ್ತಾರೆ ಎಂದರು. ಈ ಸಂದರ್ಭದಲ್ಲಿ ತಾ ಪಂ ಇ ಒ ಪಾಲಯ್ಯನ ಕೋಟೆ ವಿಶ್ವನಾಥ, ಪುರಸಭೆಯ ಮುಖ್ಯಾಧಿಕಾರಿ ಎಂ ಕೆ ಮುಗಳಿ, ಬಿಇಒ ಎಸ್. ಜಗದೀಶ, ಬಿ ಆರ್ ಸಿ ಪ್ರಭಾಕರ, ಅಕ್ಷರ ದಾಸೋಹ ಅಧಿಕಾರಿ ರಾಜಕುಮಾರ ನಾಯ್ಕ್, ಪ್ರಭಾರಿ ಪಿಎಸ್ಐ ಮಾಪತಿ ನಾಯ್ಕ್, ತೋಟಗಾರಿಕೆ ಇಲಾಖೆಯ ಅಧಿಕಾರಿ ವಿಜಯಕುಮಾರ್ ನಿಚ್ಚಾಪುರ, ಇತರರಿದ್ದರು































