
ಬೆಂಗಳೂರು, ಜು.೩೧- ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿನ್ನೆ ಕರ್ನಾಟಕಕ್ಕೆ ಆದೇಶಿಸಿರುವ ಬೆನ್ನಲ್ಲೇ ತಮಿಳುನಾಡಿಗೆ ನೀರು ಬಿಡಲ್ಲ ಎಂದು ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಆಗುವವರೆಗೂ ತಮಿಳುನಾಡಿಗೆ ನೀರು ಬಿಡಲ್ಲ.ಕಾವೇರಿ ನೀರು ಹರಿಸುವಂತೆ ಪ್ರಾಧಿಕಾರ ಹೇಳಿದೆ. ಕಳೆದ ೩೦ ವರ್ಷಗಳಿಂದ ವಾದ ಮಾಡಿದ್ದವರೇ ಈಗಲೂ ವಾದ ಮಾಡಿದ್ದಾರೆ. ಆದರೆ ಭಾನುವಾರ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ಕರೆದಿದ್ದಾರೆ. ಹಾಗಾಗಿ ವಿಪಕ್ಷಗಳ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ. ಸರ್ವ ಪಕ್ಷ ಸಭೆ ಆಗುವವರೆಗೂ ನೀರು ಬಿಡಲ್ಲ ಎಂದು ರೆಡ್ಡಿ ತಿಳಿಸಿದ್ದಾರೆ.
ಮಂಡ್ಯದ ಕೆಆರ್ ಎಸ್ ನಲ್ಲಿ ಬಿಜೆಪಿ ನಾಯಕರ ಪ್ರತಿಭಟನೆ ವಿಚಾರವಾಗಿ ಮಾತನಾಡಿ,ನಾವು ರೈತರ ಹಿತಾಸಕ್ತಿ ಗಮನ ಇಟ್ಟುಕೊಂಡು ಮೇಲ್ಮನವಿ ಹೋಗಲಿದ್ದೇವೆ, ಎಲ್ಲಾದರ ಬಗ್ಗೆ ತೀರ್ಮಾನ ಮಾಡಲು ಸರ್ವಪಕ್ಷಗಳ ಸಭೆ ಕರೆದಿದ್ದೇವೆ. ನೆಲ, ಜಲ, ಭಾಷೆ ಬಂದಾಗ ಒಟ್ಟಾಗಿ ಹೋಗಬೇಕು. ಹೀಗಾಗಿ ಬಿಜೆಪಿ ಪ್ರತಿಭಟನೆ ಮಾಡೋ ಅವಶ್ಯಕತೆ ಇರಲಿಲ್ಲ ಎಂದರು.
ನೀರು ಬಿಡುವ ಆದೇಶದ ಹಿನ್ನೆಲೆಯಲ್ಲಿ ಮುಂದೆ ಏನು ಮಾಡಬೇಕು ಎಂದು ಭಾನುವಾರದ ಸಭೆಯಲ್ಲಿ ವಿಪಕ್ಷಗಳ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ. ವರ್ಷಕ್ಕೆ ೪೦ ಟಿಎಂಸಿ ನೀರು ಕುಡಿಯೋಕೆ ಬೇಕು. ಮಳೆ ಬಂದರೆ ಸಮಸ್ಯೆ ಇರೊಲ್ಲ. ಕಳೆದ ವರ್ಷ ಮಳೆ ಬಂದಿತ್ತು ಏನೂ ಸಮಸ್ಯೆ ಆಗಿಲ್ಲ. ಈ ವರ್ಷ ಮಳೆ ಕಡಿಮೆ ಇದೆ. ಸ್ವಲ್ಪ ಮಳೆ ಬಂದಿದ್ದು ನಮಗೆ ಅನುಕೂಲ ಆಗಿತ್ತು. ಮೆಟ್ಟೂರು ಡ್ಯಾಂನಲ್ಲಿ ನೀರು ಇದೆ. ಅವರಿಗೆ ಕುಡಿಯೋ ನೀರಿಗೆ ಸಮಸ್ಯೆ ಇಲ್ಲ. ರಾಜ್ಯಕ್ಕೆ ವಿಜಯ್ ಬರ್ತಾರೆ. ಈ ವಿಚಾರ ಕೂಡ ಚರ್ಚೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಮೇಕೆದಾಟು ಅಣೆಕಟ್ಟು ವಿಚಾರಕ್ಕೆ ಪ್ರತಿಕ್ರಿಯಿಸಿ,ಮೇಕೆದಾಟು ಆPಖ ವಾಪಸ್ ಕಳಿಸಿದ್ದಾರೆ. ಅಲೋಕೇಶನ್ ಆಗಿರೋದಕ್ಕೆ ನೀವು ಡಿಪಿಆರ್ ಕೊಡಿ ಅಂದಿದ್ದಾರೆ. ಒಂದು ವಾರದಲ್ಲಿ ಇದನ್ನ ಸರಿ ಮಾಡಿ ಕಳುಹಿಸುತ್ತೇವೆ ಎಂದು ತಿಳಿಸಿದರು.

































