
ಗ್ಲಾಸ್ಗೊ, ಜು.೨೭-ಗ್ಲಾಸ್ಗೊದಲ್ಲಿ ನಡೆಯುತ್ತಿರುವ ೨೦೨೬ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಬಾಕ್ಸರ್ ಜದುಮಣಿ ಸಿಂಗ್ ಪುರುಷರ ೫೫ ಕೆ.ಜಿ. ವಿಭಾಗದ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಪಾಕಿಸ್ತಾನದ ಸುಮಾಮಾ ರೆಹಮಾನ್ ಅವರನ್ನು ಏಕಪಕ್ಷೀಯವಾಗಿ ಮಣಿಸಿ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ.
ಜದುಮಣಿ ಸಿಂಗ್ ೫-೦ ಅಂತರದ ಸರ್ವಾನುಮತ ತೀರ್ಪಿನ ಮೂಲಕ ಭರ್ಜರಿ ಜಯ ಸಾಧಿಸಿದರು. ಇದಕ್ಕೂ ಮುನ್ನ ಅವರು ಆತಿಥೇಯ ಸ್ಕಾಟ್ಲೆಂಡ್ ನ ಆರೋನ್ ಕಲ್ಲನ್ ಅವರನ್ನು ಸುಲಭವಾಗಿ ಸೋಲಿಸಿ ಗಮನ ಸೆಳೆದಿದ್ದರು.
ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದಲ್ಲಿ ಮೊಳಗಿದ “ಭಾರತ್ ಮಾತಾ ಕಿ ಜೈ” ಘೋಷಣೆಗಳ ನಡುವೆ ಜದುಮಣಿ ಆತ್ಮವಿಶ್ವಾಸದಿಂದ ಕಣಕ್ಕಿಳಿದರು. ಮೊದಲ ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡಿದ ಅವರು ಐವರು ತೀರ್ಪುಗಾರರಲ್ಲಿ ಮೂವರಿಂದ ೧೦-೯ ಅಂಕಗಳನ್ನು ಪಡೆದು ಮುನ್ನಡೆ ಸಾಧಿಸಿದರು.
ಎರಡನೇ ಸುತ್ತಿನಲ್ಲಿ ಇನ್ನಷ್ಟು ಆಕ್ರಮಣಕಾರಿ ಆಟವಾಡಿದ ಜದುಮಣಿ, ರೆಹಮಾನ್ ಅವರನ್ನು ನಿರಂತರವಾಗಿ ಹಿಮ್ಮೆಟ್ಟಿಸಿ ನಿಖರ ಪಂಚ್ಗಳನ್ನು ಸಿಡಿಸಿದರು. ಈ ವೇಳೆ ರೆಹಮಾನ್ ಅವರನ್ನು ನೆಲಕ್ಕುರುಳಿಸಿದ ಜದುಮಣಿಗೆ ರೆಫರಿ ಕೌಂಟ್ ನೀಡಬೇಕಾಯಿತು. ಭಾರತೀಯ ಸೇನೆಯ ೧೧ ಗೋರ್ಖಾ ರೈಫಲ್ಸ್ನ ಹವಾಲ್ದಾರ್ ಆಗಿರುವ ಜದುಮಣಿ ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ಮೆರೆದರು.
ಅಂತಿಮ ಸುತ್ತಿನಲ್ಲೂ ಸಮಚಿತ್ತದಿಂದ ಹೋರಾಡಿದ ಜಾದುಮಣಿ ಸಿಂಗ್, ಸುಲಭ ಗೆಲುವಿನೊಂದಿಗೆ ಕ್ವಾರ್ಟರ್ಫೈನಲ್ ಪ್ರವೇಶಿಸಿ ಭಾರತದ ಪದಕದ ನಿರೀಕ್ಷೆಯನ್ನು ಜೀವಂತವಾಗಿರಿಸಿದ್ದಾರೆ.
ಪ್ರೀತಿ ಪವಾರ್ ಕೂಡ ಕ್ವಾರ್ಟರ್ಫೈನಲ್ಗೆ
ಇದೇ ವೇಳೆ ಮಹಿಳೆಯರ ೫೪ ಕೆ.ಜಿ. ವಿಭಾಗದಲ್ಲಿ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತೆ ಪ್ರೀತಿ ಪವಾರ್ ಕೂಡ ಕ್ವಾರ್ಟರ್ಫೈನಲ್ ಪ್ರವೇಶಿಸಿದ್ದಾರೆ. ಈ ಗೆಲುವಿನೊಂದಿಗೆ ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಖಚಿತಪಡಿಸಿಕೊಳ್ಳಲು ಇನ್ನು ಒಂದು ಗೆಲುವಿನ ಅಂತರದಲ್ಲಿದ್ದಾರೆ. ಕ್ವಾರ್ಟರ್ಫೈನಲ್ನಲ್ಲಿ ಪ್ರೀತಿ ಪವಾರ್ ಉತ್ತರ ಐರ್ಲೆಂಡ್ನ ನಿಕೋಲ್ ಕ್ಲೈಡ್ ಅವರನ್ನು ಎದುರಿಸಲಿದ್ದಾರೆ. ನಿಕೋಲ್ ಕ್ಲೈಡ್, ಘಾನಾದ ನ್ಯಾನ್ಸಿ ಬಾಂಫೋ ಅವರನ್ನು ಸೋಲಿಸಿ ಮುಂದಿನ ಹಂತಕ್ಕೇರಿದ್ದಾರೆ.



























