
ಕೋಲಾರ,ಸೆ,೧೫- ಕೇವಲ ೨೦ ಲಕ್ಷದಲ್ಲಿ ಆರಂಭವಾದ ಗೋಲ್ಡ್ ಫೀಲ್ಡ್ ಸೊಸೈಟಿ ಇಂದು ೩೦ ಕೋಟಿ ವಹಿವಾಟು ನಡೆಸುತ್ತಿರುವುದು ಬಹುದೊಡ್ಡ ಸಾಧನೆ, ಈ ನಿಟ್ಟಿನಲ್ಲಿ ಠೇವಣಿ,ಷೇರು ಬಂಡವಾಳ ಹೆಚ್ಚಿಸಿ ಮತ್ತಷ್ಟು ರೈತರು,ಬಡವರಿಗೆ ಅಗತ್ಯ ಸಾಲ ಸೌಲಭ್ಯ ಒದಗಿಸುವ ಸಂಕಲ್ಪ ಮಾಡಬೇಕು ಎಂದು ಸೊಸೈಟಿಯ ನಿರ್ದೇಶಕರೂ ಆದ ಸಂಸದ ಎಂ.ಮಲ್ಲೇಶಬಾಬು ಕರೆ ನೀಡಿದರು.
ನಗರದ ಸೊಸೈಟಿಯ ಸಭಾಂಗಣದಲ್ಲಿ ಕರೆಯಲಾಗಿದ್ದ ಗೋಲ್ಡ್ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿಯ ೨೦೨೫-೨೬ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಅವರು ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರವೂ ಸಚಿವ ಅಮಿತಾಷಾ ನೇತೃತ್ವದಲ್ಲಿ ಸಹಕಾರಿ ವ್ಯವಸ್ಥೆ ಬಲಗೊಳಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ, ಸಹಕಾರಿ ವ್ಯವಸ್ಥೆಯಿಂದ ಮಾತ್ರವೇ ಸಮಾಜದ ಆರ್ಥಿಕ ಬಲವರ್ಧನೆ ಸಾಧ್ಯ ಎಂದು ಮನಗಂಡು ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಪ್ರತಿ ಸದಸ್ಯರು ತಲಾ ಐವರಂತೆ ಸದಸ್ಯರನ್ನಾಗಿ ಷೇರು ಬಂಡವಾಳ ಹೆಚ್ಚಿಸಲು ಸಲಹೆ ನೀಡಿದ ಅವರು, ಅತಿ ಹೆಚ್ಚು ಠೇವಣಿ ಸಂಗ್ರಹದ ಮೂಲಕ ಸಂಘವನ್ನು ಗಟ್ಟಿಗೊಳಿಸಿ, ಇಲ್ಲಿ ಉತ್ತಮ ನಿರ್ದೇಶಕರಿದ್ದಾರೆ, ಭ್ರಷ್ಟತೆಗೆ ಅವಕಾಶವಿಲ್ಲ ಎಂದರು.
ಸಂಘದ ಅಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಲ್ಡ್ ಫೀಲ್ಡ್ ಕ್ರೆಡಿಟ್ ಕೋ-ಆಪರೇಟೀವ್ ಸೊಸೈಟಿ ೩ ಕೋಟಿಗೂ ಅಧಿಕ ಠೇವಣಿ ಸಂಗ್ರಹದ ಜತೆಗೆ ೩೦ ಕೋಟಿ ರೂಗಳ ವಹಿವಾಟು ನಡೆಸಿ ೬ ಲಕ್ಷ ರೂ ಲಾಭಗಳಿಸಿದ್ದು, ನಿರಂತರವಾಗಿ ಲಾಭದಲ್ಲೇ ಇದೆ ಎಂದು ತಿಳಿಸಿದರು.
ಸಂಘವನ್ನು ರೈತ,ಬಡವರ ಸ್ನೇಹಿಯಾಗಿಸುವ ಉದ್ದೇಶದಿಂದಲೇ ಆರಂಭಿಸಿದ್ದು ಈವರೆಗೂ ೩.೦೭ ಕೋಟಿ ರೂ ಸಾಲ ವಿತರಿಸಲಾಗಿದ್ದು, ಸಾಲ ಮರುಪಾವತಿಯೂ ಉತ್ತಮವಾಗಿದೆ ೨ ಸಾವಿರಕ್ಕೂ ಹೆಚ್ಚು ಮಂದಿ ಷೇರುದಾರನ್ನು ಹೊಂದಿರುವ ಸಂಘ ಉತ್ತಮ ನಿರ್ವಹಣೆಯ ಮೂಲಕ ಸಾಲದ ಮಿತಿಯನ್ನು ೨ರಂದ ೩ಲಕ್ಷ ರೂವರೆಗೂ ಹೆಚ್ಚಿಸಿ ವಿತರಿಸುತ್ತಿದೆ ಎಂದರು.
ಸಂಘದಲ್ಲಿ ಯಾವುದೇ ದುಂದುವೆಚ್ಚಕ್ಕೆ ಅವಕಾಶ ನೀಡುತ್ತಿಲ್ಲ, ಸಂಘವನ್ನು ಬೆಳೆಸುವ ಉದ್ದೇಶ ಎಲ್ಲಾ ನಿರ್ದೇಶಕರದ್ದಾಗಿದೆ, ಈ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕೆಲಸ ಮಾಡೋಣ ಎಂದು ತಿಳಿಸಿದ ಅವರು ಗೃಹ ನಿರ್ಮಾಣದಡಿ ಲೇಔಟ್ ಮಾಡುವ ಕುರಿತು ಚಿಂತನೆ ಇದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಧ್ಯಾಪಕಿ ಡಾ.ಶ್ಯಾಮಲಾ ಗೋಪಾಲಕೃಷ್ಣ, ಸಮಾಜಮುಖಿ ಕೆಲಸ ಮಾಡಿ, ಆರೋಗ್ಯ ತಪಾಸಣಾ ಶಿಬಿರ, ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಯಾಗಾರ, ರೈತರಿಗೆ ಬೆಳೆ ಪದ್ದತಿ ಕುರಿತು ತಜ್ಞರಿಂದ ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಆಯೋಜಿಸಲು ಸಲಹೆ ನೀಡಿದರು.
ಸಂಘ ಆರಂಭಿಸುವಾಗ ೨೦ ಲಕ್ಷ ಡಿಪಾಜಿಟ್ ಕಟ್ಟಲು ಸ್ವಂತ ಹಣ ನೀಡಿದ ಗೋಪಾಲಕೃಷ್ಣ ಹಗೂ ನಿರ್ದೇಶಕರ ಕಾರ್ಯವನ್ನು ಸ್ಮರಿಸಿ, ಸಾಲ ಪಡೆದವರಿಗೆ ಪಡೆಯುವಾಗ ಇರುವ ಖುಷಿಯೇ ವಾಪಸ್ಸು ನೀಡುವಾಗಲು ಇರಬೇಕು ಎಂದರು.
ಸಂಘದ ಉಪಾಧ್ಯಕ್ಷ ರಂಗಯ್ಯ ಆಯವ್ಯಯ ಮಂಡಿಸಿ ಪ್ರಸ್ತುತ ಸಾಲಿನಲ್ಲಿ ಸಂಘ ನಡೆಸಿದ ವಹಿವಾಟು, ಲಾಭಾಂಶ ಗಳಿಕೆ ಮತ್ತು ಮುಂದಿನ ವರ್ಷದ ಅಂದಾಜು ಪಟ್ಟಿಯ ಕುರಿತು ಮಾಹಿತಿ ನೀಡಿದರು. ೨೦ ಲಕ್ಷದಿಂದ ಸಂಘ ೩೦ ಕೋಟಿ ವಹಿವಾಟು ನಡೆಸುವ ಶಕ್ತಿ ಪಡೆಯಲು ಕಾರಣರಾದ ಎಲ್ಲಾ ನಿರ್ದೇಶಕರು, ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.
ನಿರ್ದೇಶಕರಾದ ಸುಬ್ಬಾರೆಡ್ಡಿ ಷೇರು ಬಂಡವಾಳ ಹೆಚ್ಚಿಸಲು ಸಲಹೆ ನೀಡಿದರೆ, ಮತ್ತೊಬ್ಬ ನಿರ್ದೇಶಕರಾದ ಲೋಕೇಶಮೂರ್ತಿ, ಸಂಘದಿಂದ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಚರ್ಚಿಸಿದ್ದು, ಈ ವರ್ಷ ಕಾರ್ಯಗತ ಮಾಡುತ್ತೇವೆ ಎಂದರು.
ಮತ್ತೊಬ್ಬ ಸದಸ್ಯ ಆಂಜನೇಯ ರೆಡ್ಡಿ ಗೃಹ ನಿರ್ಮಾಣ ಸೊಸೈಟಿ ಆರಂಭಿಸಲು ಸಲಹೆ ನೀಡಿದರು.ನಿರ್ದೇಶಕರಾದ ಬಿ.ಜಿ.ಶ್ರೀದೇವಿ ಪ್ರಾರ್ಥಿಸಿ, ಶ್ರೀರಾಮ್ ಸ್ವಾಗತಿಸಿ,ನಿರೂಪಿಸಿದ ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಎಸ್.ಎಂ.ನಾರಾಯಣಸ್ವಾಮಿ, ಸಿ.ನಾಗರಾಜ, ಎಂ.ಲೋಕೇಶಮೂರ್ತಿ,ಎ.ಎಸ್.ನಂಜುಂಡಗೌಡ,ಕೆ.ಎಂ.ಸುಬ್ಬಾರೆಡ್ಡಿ, ಎಸ್.ವಿ.ನಾರಾಯಣರೆಡ್ಡಿ, ಮುಖಂಡ ಬಣಕನಹಳ್ಳಿ ನಟರಾಜ್, ಸಂಘದ ಡಿಎಂ.ಶ್ರೀಕಾಂತ್ ವಂದಿಸಿದರು. ಸೂಪರ್ ವೈಸರ್ ವಿ.ನಾರಾಯಣಸ್ವಾಮಿ, ಪಿಗ್ಮಿಸಂಗ್ರಹಕಾರ ವೆಂಕಟರಾಮೇಗೌಡ ಮತ್ತಿತರರಿದ್ದರು.
































