Home ಮುಖಪುಟ ಸುದ್ದಿ ಜಾರಕಿ ಹೊಳಿ ಬಾವ ಮಂಜುನಾಥ್ ಮನೆ ಮೇಲೆ ಇಡಿ ದಾಳಿ ಅಂತ್ಯ

ಜಾರಕಿ ಹೊಳಿ ಬಾವ ಮಂಜುನಾಥ್ ಮನೆ ಮೇಲೆ ಇಡಿ ದಾಳಿ ಅಂತ್ಯ

ಬೆಂಗಳೂರು,ಜೂ.೨೫-ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ(ಬಾವ) ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ನಿನ್ನೆ ಮುಂಜಾನೆಯಿಂದ ನಡೆದಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳ ಸುದೀರ್ಘ ದಾಳಿ ಕೊನೆಗೂ ಅಂತ್ಯವಾಗಿದೆ.


ಸತತ ೨೪ ಗಂಟೆಗಳ ಕಾಲ ನಡೆಸಿದ ಸುದೀರ್ಘ ಶೋಧ ಕಾರ್ಯದ ಬಳಿಕ ಇಡಿ ಅಧಿಕಾರಿಗಳು ಬೆಳಗಾವಿಯಿಂದ ನಿರ್ಗಮಿಸಿದ್ದಾರೆ. ಅಬಕಾರಿ ಇಲಾಖೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆ ಕೈಗೆತ್ತಿಕೊಂಡಿರುವ ಅಧಿಕಾರಿಗಳು, ಬೆಳಗಾವಿ ನಗರದ ಟಿವಿ ಸೆಂಟರ್‌ನಲ್ಲಿರುವ ಮಂಜುನಾಥ್ ಅವರ ಮುಖ್ಯ ನಿವಾಸ ಸೇರಿದಂತೆ ಜಿಲ್ಲೆಯ ಒಟ್ಟು ಆರು ಕಡೆಗಳಲ್ಲಿ ನಿನ್ನೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು.


ಮಂಜುನಾಥ್ ಅವರಿಗೆ ಸಂಬಂಧಿಸಿದ ಬೆಂಗಳೂರು, ಮೈಸೂರು ಸೇರಿದಂತೆ ಒಟ್ಟು ೧೦ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಲಾಗಿದೆ,ದಾಳಿಯ ವೇಳೆ ಲಭ್ಯವಾಗಿರುವ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಇಡಿ ಅಧಿಕಾರಿಗಳ ತಂಡವು ನಗರಕ್ಕೆ ಆಗಮಿಸಿದ್ದು, ಸಂಪೂರ್ಣ ವರದಿಯನ್ನು ನಿರ್ದೇಶಕರಿಗೆ ಸಲ್ಲಿಸಲಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಅವರ ಆಪ್ತರಾಗಿರುವ ಗೋವಾ ಮೂಲದ ’ಲೋಬೋ’ ಎಂಬುವವರಿಗಾಗಿ ಇಡಿ ಅಧಿಕಾರಿಗಳು ಬೆಳಗಾವಿಯಲ್ಲಿ ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಬೆಳಗಾವಿಯಲ್ಲಿ ಲೋಬೋ ಪತ್ತೆಯಾಗದ ಹಿನ್ನೆಲೆಯಲ್ಲಿ, ಅವರನ್ನು ವಶಕ್ಕೆ ಪಡೆಯಲು ಇಡಿಯ ಎರಡು ವಿಶೇಷ ತಂಡಗಳು ಈಗಾಗಲೇ ಗೋವಾಗೆ ರವಾನೆಯಾಗಿವೆ ಎಂದು ಮೂಲಗಳು ತಿಳಿಸಿವೆ.


ಸರ್ಕಾರಿ ಸಂಬಳ ಪಡೆಯುತ್ತಲೇ ಕೋಟ್ಯಂತರ ರೂಗಳ ಅಕ್ರಮ ನಡೆಸಿರುವ ಗಂಭೀರ ಆರೋಪ ಮಂಜುನಾಥ್ ಮೇಲಿದೆ. ಆದಾಯಕ್ಕಿಂತ ಅಧಿಕವಾಗಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಸಂಪಾದನೆ, ಅಬಕಾರಿ ಇಲಾಖೆಯ ಉನ್ನತ ಹುದ್ದೆಯಲ್ಲಿದ್ದುಕೊಂಡೇ ಬೇರೆಯವರ ಹೆಸರಿನಲ್ಲಿ ನೂರಕ್ಕೂ ಹೆಚ್ಚು ಬಾರ್ ಲೈಸೆನ್ಸ್ ಹೊಂದಿರುವ ಆರೋಪ, ದೇಶದ ಗಡಿ ದಾಟಿ ನಡೆದಿರುವ ಆರ್ಥಿಕ ವಹಿವಾಟುಗಳು, ಹವಾಲಾ ಮಾರ್ಗಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.


ಜೈಲು ಸೇರಿದ್ದ ಮಂಜುನಾಥ್:


ವೈ. ಮಂಜುನಾಥ್ ವಿವಾದಗಳಿಗೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ೨೦೦೯ರಿಂದ ೨೦೧೩ರವರೆಗೆ ಮೈಸೂರಿನಲ್ಲಿ ಅಬಕಾರಿ ಡಿಸಿ ಆಗಿದ್ದ ಅವಧಿಯಲ್ಲಿ ಲಂಚದ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರು ಇವರನ್ನು ಬಂಧಿಸಿದ್ದರು. ಆ ವೇಳೆ ೧೫ ದಿನಗಳ ಕಾಲ ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಇವರು ಬಿಡುಗಡೆಯಾಗಿ ಬಂದಾಗ, ಇವರ ಅಭಿಮಾನಿಗಳು ಜೈಲಿನಿಂದ ಬರೋಬ್ಬರಿ ೨ ಕಿಲೋಮೀಟರ್ ದೂರ ಇವರನ್ನು ಹೆಗಲ ಮೇಲೆ (ತೋಳಿನಲ್ಲಿ) ಎತ್ತಿಕೊಂಡು ಮೆರವಣಿಗೆ ಮಾಡಿದ್ದರು. ಈ ಘಟನೆ ಆಗ ಇಡೀ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಹಾಗೂ ಸುದ್ಧಿಗೆ ಗ್ರಾಸವಾಗಿತ್ತು.