
ಅರಸೀಕೆರೆ, ಜು. ೧೧- ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ನಾಗರಿಕನ ಮತ ಚಲಾವಣೆಯಲ್ಲಿದೆ. ಹೀಗಾಗಿ ೧೮ ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ ಹೇಳಿದರು.
ನಗರಸಭೆ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದ ಪ್ರಮುಖ ರಸ್ತೆಯಾದ ಬಿ ಹೆಚ್ ರಸ್ತೆಯಲ್ಲಿ ಏರ್ಪಡಿಸಿದ್ದ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ೨೦೨೬ ರ ಬೃಹತ್ ಜಾಗೃತಿ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪೌರಾಯುಕ್ತರು, “ಕೇವಲ ಹೊಸದಾಗಿ ಹೆಸರು ಸೇರಿಸುವುದು ಅಷ್ಟೇ ಅಲ್ಲ, ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರಿರುವ ನಾಗರಿಕರು ಸಹ ತಮ್ಮ ಹೆಸರು ಪಟ್ಟಿಯಲ್ಲಿ ಸರಿಯಾಗಿದೆಯೇ ಎಂಬುದನ್ನು ಅತ್ಯಂತ ಜವಾಬ್ದಾರಿಯಿಂದ ಗಮನ ಹರಿಸಬೇಕು. ಯಾವುದೇ ತಪ್ಪುಗಳಿದ್ದಲ್ಲಿ ತಕ್ಷಣವೇ ಇಲಾಖೆಯ ಸದುಪಯೋಗ ಪಡೆದುಕೊಂಡು ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಲು ಮತಗಟ್ಟೆ ಮಟ್ಟದ ಅಧಿಕಾರಿಗಳ ಪಾತ್ರ ದೊಡ್ಡದಾಗಿದೆ ಎಂದು ತಿಳಿಸಿದ ಪೌರಾಯುಕ್ತರು, ಬಿ.ಎಲ್.ಒಗಳು ಕಡ್ಡಾಯವಾಗಿ ನಿರ್ವಹಿಸಬೇಕಾದ ಕರ್ತವ್ಯಗಳ ಕುರಿತು ಕಟ್ಟುನಿಟ್ಟಿನ ಮಾರ್ಗಸೂಚಿ ನೀಡಿದರು:
ಪ್ರತಿ ಬಿ.ಎಲ್.ಒ ತಮಗೆ ನಿಗದಿಪಡಿಸಿದ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಖುದ್ದಾಗಿ ಪರಿಶೀಲಿಸಬೇಕು.
ಹೊಸ ಮತದಾರರ ನೋಂದಣಿ (ನಮೂನೆ-೬) ಅರ್ಹ ಯುವ ಜನರನ್ನು ಗುರುತಿಸಿ, ಅವರಿಂದ ನಮೂನೆ-೬ ಅನ್ನು ಪಡೆದು ಕಡ್ಡಾಯವಾಗಿ ಹೊಸ ಹೆಸರುಗಳನ್ನು ಸೇರ್ಪಡೆಗೊಳಿಸಬೇಕು.
ಮೃತರ, ವಲಸೆ ಹೋದವರ ಹೆಸರು ರದ್ದತಿ (ನಮೂನೆ-೭) ಈಗಾಗಲೇ ಮರಣ ಹೊಂದಿರುವ ಅಥವಾ ಆ ಭಾಗದಿಂದ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವ ಮತದಾರರ ಹೆಸರುಗಳನ್ನು ಸೂಕ್ತ ದಾಖಲೆಗಳೊಂದಿಗೆ ಪರಿಶೀಲಿಸಿ, ನಮೂನೆ-೭ರ ಮೂಲಕ ಪಟ್ಟಿಯಿಂದ ಕೈಬಿಡಬೇಕು. ದೋಷಗಳ ತಿದ್ದುಪಡಿ (ನಮೂನೆ-೮):ಮತದಾರರ ಹೆಸರು, ವಯಸ್ಸು, ವಿಳಾಸ ಅಥವಾ ಭಾವಚಿತ್ರದಲ್ಲಿ ತಪ್ಪುಗಳಿದ್ದರೆ ಅವುಗಳನ್ನು ಸರಿಪಡಿಸಲು ನಮೂನೆ-೮ರ ಮೂಲಕ ತಿದ್ದುಪಡಿ ಮಾಡಬೇಕು ಎಂದರು.
ಯಾವುದೇ ಒಬ್ಬ ಅರ್ಹ ಮತದಾರನೂ ಪಟ್ಟಿಯಿಂದ ಹೊರಗುಳಿಯದಂತೆ ಅತ್ಯಂತ ಜಾಗೃತೆಯಿಂದ ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಬಿ.ಎ.ಲ್.ಒ ಗಳ ಆದ್ಯ ಕರ್ತವ್ಯವಾಗಿದೆ.
ಈ ಬೃಹತ್ ಜಾಗೃತಿ ಅಭಿಯಾನದಲ್ಲಿ ನಗರದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ರಸ್ತೆಯುದ್ದಕ್ಕೂ ಶಿಸ್ತುಬದ್ಧವಾಗಿ ಸಾಗಿದ ವಿದ್ಯಾರ್ಥಿಗಳ ದಂಡು, ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಘೋಷಣೆಗಳನ್ನು ಕೂಗುತ್ತಾ ಸಾಗಿತು.
ವಿದ್ಯಾರ್ಥಿಗಳು ಹಿಡಿದಿದ್ದ ರಂಗುರಂಗಿನ ಜಾಗೃತಿ ಫಲಕಗಳು ರಸ್ತೆಯ ಇಕ್ಕೆಲಗಳಲ್ಲಿದ್ದ ಸಾರ್ವಜನಿಕರ ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಪ್ರಮುಖ ಇಲಾಖೆಗಳ ಅಧಿಕಾರಿಗಳು, ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ನಗರಸಭೆಯ ಸಿಬ್ಬಂದಿ ಪಾಲ್ಗೊಂಡು ಅಭಿಯಾನವನ್ನು ಯಶಸ್ವಿಗೊಳಿಸಿದರು.


































