
೬ ಮಂದಿ ಹತ್ಯೆ ಪ್ರಕರಣ
ವಿಜಯಪುರ,ಜೂ.೨೨-ಭೀಮಾತೀರದಲ್ಲಿ ೬ ಮಂದಿಯ ಭೀಕರ ಕೊಲೆಯ ಭಯಾನಕ ಘಟನೆ ಸಂಬಂಧ ಪ್ರಕರಣದ ಆರೋಪಿಗೆ ಜಿಲ್ಲಾ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಗುಂಡೇಟು ಬಲಗಾಲಿಗೆ ತಗುಲಿ ಗಾಯಗೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಮಹೇಶ್ ತಳವಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಟ್ಟಿಂಗಿಹಾಳ ಗ್ರಾಮದ ಸುಮಾರು ೧ ಕಿಮೀ ದೂರದಲ್ಲಿ ಇಂದು ಮುಂಜಾನೆ ೫.೩೦ ರ ವೇಳೆ ಆರೋಪಿ ಮಹೇಶ್ ಅಡಗಿರುವ ಸಂಬಂಧ ಬಗ್ಗೆ ಚಡಚಣ ವೃತ್ತ ಸರ್ಕಲ್ ಇನ್ಸ್ ಪೆಕ್ಟರ್ ಪರಶುರಾಮ್ ಮನಗೂಳಿ ಅವರಿಗೆ ಮಾಹಿತಿ ಲಭಿಸಿದೆ.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ಇನ್ಸ್ ಸ್ಪೆಕ್ಟರ್ ಮತ್ತು ಅವರ ಸಿಬ್ಬಂದಿಗಳಾದ ಶೇಖರ್ ಪವಾರ್, ವಿಜಯಕುಮಾರ್ ಬನಸೋಡೆ ಹಾಗೂ ಇನ್ನಿತರರೊಂದಿಗೆ ಸ್ಥಳಕ್ಕೆ ತೆರಳಿದ್ದಾರೆ.
ಆ ಸಂದರ್ಭದಲ್ಲಿ ಪೊಲೀಸರನ್ನು ನೋಡಿದ ಆರೋಪಿ ಮಹೇಶ್ ಚಂದ್ರಕಾಂತ್ ಏಕಾಏಕಿ ಸಿಬ್ಬಂದಿಗಳ ಮೇಲೆ ಕಲ್ಲಿನಿಂದ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಈ ವೇಳೆ ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದರೂ ಬಗ್ಗದ ಮಹೇಶ್ ಕಲ್ಲಿನ ದಾಳಿ ಮುಂದುವರೆಸಿದಾಗ ಆತ್ಮರಕ್ಷಣೆಗೆ ಚಡಚಣ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಪರಶುರಾಮ್ ಮನಗೂಳಿ ಮತ್ತೊಂದು ಗುಂಡು ಹಾರಿಸಿದ್ದು,ಅದು ಬಲಗಾಲಿಗೆ ತಗುಲಿ ಕುಸಿದು ಬಿದ್ದ ಮಹೇಶ್ ನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವೇಳೆ ಚಡಚಣ ಠಾಣೆ ಸಿಬ್ಬಂದಿ ಶೇಖರ್ ಪವಾರ್, ವಿಜಯಕುಮಾರ್ ಬನಸೋಡೆಗೆ ಗಾಯಗಳಾಗಿವೆ. ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಸಿಬ್ಬಂದಿಯನ್ನು ದಾಖಲಿಸಲಾಗಿದೆ.
ಮೇ ೨೯ ರಂದು ಭೀಮಾತೀರದ ಗೋವಿಂದಪುರ ಗ್ರಾಮ ಜಮೀನಿನಲ್ಲಿ ಚಡಚಣದ ನಿರಾಳೆ ಕುಟುಂಬ ೫ ಜನ ಹಾಗೂ ಇನ್ನೋರ್ವ ಸೇರಿ ೬ ಜನರ ಭೀಕರ ಕೊಲೆ ನಡೆದಿತ್ತು.
ಕೊಲೆಗೆ ಆರೋಪಿ ಮಹೇಶ್ ಮತ್ತವನ ಗ್ಯಾಂಗ್ ೧೫ ಲಕ್ಷಕ್ಕೆ ಸುಪಾರಿ ಪಡೆದಿತ್ತು. ೬ ಜನರ ಸಾಮೂಹಿಕ ಹತ್ಯೆಗೆ ಮಹೇಶ್ ತಳವಾರ್ ಹುಡುಗರನ್ನ ಸೇರಿಸಿದ್ದನು, ಕಳೆದ ೨೩ ದಿನಗಳಿಂದ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಮಹೇಶ್ ಈಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.





























