Home ಜಿಲ್ಲೆ ಮೈಸೂರು 3ನೇ ದಿನಕ್ಕೆ ಕಾಲಿಟ್ಟ ತನ್ವೀರ್ ಸೇಠ್ ಪರ ಪ್ರತಿಭಟನಾ ಧರಣಿ

3ನೇ ದಿನಕ್ಕೆ ಕಾಲಿಟ್ಟ ತನ್ವೀರ್ ಸೇಠ್ ಪರ ಪ್ರತಿಭಟನಾ ಧರಣಿ

ಸಂಜೆವಾಣಿ ನ್ಯೂಸ್
ಮೈಸೂರು.ಆ.09:
ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೈಸೂರಿನ ಎನ್‍ಆರ್ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರನ್ನು ಕೈ ಬಿಟ್ಟಿರುವ ಕಾರಣ, ಸಿಡಿದೆದ್ದಿರುವ ಕಾಂಗ್ರೆಸ್ ಮುಖಂಡರು ಕೈಗೊಂಡಿರುವ ಪ್ರತಿಭಟನಾ ಧರಣಿ ಶನಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.


ನಗರದ ಎಫ್‍ಟಿಎಸ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್ ನೇತೃತ್ವದಲ್ಲಿ ಶನಿವಾರ ಬೆಳಗ್ಗೆಯಿಂದಲೇ ಜಮಾಯಿಸಿದ ನೂರಾರು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು, ಮೌನ ಪ್ರತಿಭಟನೆ ನಡೆಸಿ, ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗುವ ತನಕ ಜಾಗ ಬಿಟ್ಟು ಕದಲಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.


ಈ ಸಂದರ್ಭದಲ್ಲಿ ಅಜೀಜ್ ಸೇಠ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಎಕ್ಬಾಲ್ ಮಾತನಾಡಿ, ನಮ್ಮ ಮೌನ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ, ನಾವು ಯಾವ ರಸ್ತೆ ತಡೆಯನ್ನೂ ಮಾಡಲ್ಲ, ಯಾರ ವಿರುದ್ಧವೂ ಘೋಷಣೆ ಕೂಗಲ್ಲ, ನಮ್ಮ ಬೇಡಿಕೆ ಕಾಂಗ್ರೆಸ್ ಪಕ್ಷ ನಮ್ಮ ಭಾವನೆಗಳಿಗೆ ಬೆಲೆಕೊಟ್ಟು ತನ್ವೀರ್ ಸೇಠ್ ಅವರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಬೇಕು ಎಂದರು.


ತನ್ವೀರ್ ಸೇಠ್ ಸಜ್ಜನ ರಾಜಕಾರಣಿ, ಮಂತ್ರಿಗಿರಿಗಾಗಿ ಯಾವುದೇ ಲಾಭಿ ಮಾಡಿಲ್ಲ, ಯಾರ ಮನೆ ಬಾಗಿಲಿಗೂ ಹೋಗಿಲ್ಲ ತಮ್ಮ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಮೇಲೆ ನಂಬಿಕೆ ಇಟ್ಟು ಸುಮ್ಮನಿದ್ದರು.


ಸತತ 6 ಬಾರಿ ಜಯಗಳಿಸಿದ್ದಾರೆ. ಮುಂದೆಯೂ ಅವರು ಜಯ ಗಳಿಸುತ್ತಾರೆ. 2ಬಾರಿ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಅವರನ್ನು ಸಂಪುಟದಿಂದ ದೂರ ಇಡಲಾಗಿದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಈ ಹಿಂದೆ ಮೈಸೂರು ಜಿಲ್ಲೆಗೆ ಮುಖ್ಯಮಂತ್ರಿ ಸೇರಿ 3 ಸಚಿವ ಸ್ಥಾನ ನೀಡಲಾಗಿತ್ತು. ಆದರೇ ಈ ಬಾರಿ ಒಂದು ಸ್ಥಾನ ನೀಡಲಾಗಿದೆ. ಇನ್ನೂ ಕೂಡ ನಾವು ಆಶಾಭಾವನೆ ಹೊಂದಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಇದ್ದರು.