Home ಜಿಲ್ಲೆ ಕಲಬುರಗಿ ಜೀವನಪರ್ಯಂತ ಕಲಿಕೆಯೇ ಕಾನೂನು ವೃತ್ತಿಯ ಶ್ರೇಷ್ಠ ಮಾರ್ಗ: ನ್ಯಾಯಮೂರ್ತಿ ಸಿ.ಎಂ.ಜೋಶಿ

ಜೀವನಪರ್ಯಂತ ಕಲಿಕೆಯೇ ಕಾನೂನು ವೃತ್ತಿಯ ಶ್ರೇಷ್ಠ ಮಾರ್ಗ: ನ್ಯಾಯಮೂರ್ತಿ ಸಿ.ಎಂ.ಜೋಶಿ

ಕಲಬುರಗಿ,ಆ.13: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕಾನೂನು ವಿಭಾಗದ ವತಿಯಿಂದ ಕರ್ನಾಟಕ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರೊಂದಿಗೆ ಕಾನೂನು ವೃತ್ತಿಯ ಪ್ರಾಯೋಗಿಕ ಆಯಾಮಗಳು, ನ್ಯಾಯಾಲಯದ ಶಿಷ್ಟಾಚಾರ, ವೃತ್ತಿಪರ ನೀತಿಶಾಸ್ತ್ರ, ಕಾನೂನು ಸಂಶೋಧನೆ ಹಾಗೂ ನ್ಯಾಯಾಂಗ ವ್ಯವಸ್ಥೆಯಲ್ಲಿ ಕೃತಕ ಬುದ್ಧಿಮತ್ತೆ ಯ ಪಾತ್ರ ಕುರಿತು ಕಾನೂನು ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳು ಮತ್ತು ಯುವ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಜೋಶಿ, ಕೇವಲ ಪಠ್ಯಜ್ಞಾನವು ಸಾಕಾಗುವುದಿಲ್ಲ, ಪ್ರಾಯೋಗಿಕ ಅರಿವು, ಸಮಗ್ರ ತಯಾರಿ ಮತ್ತು ಜವಾಬ್ದಾರಿಯುತ ವಕಾಲತ್ತು ಅತ್ಯಂತ ಅಗತ್ಯವೆಂದು ಹೇಳಿದರು. ನ್ಯಾಯಾಲಯದಲ್ಲಿ ಅನಗತ್ಯ ವಾಗ್ವಾದಗಳಿಗೆ ಬದಲಾಗಿ ವಿಷಯದ ಆಳವಾದ ಅಧ್ಯಯನ, ಸಂಶೋಧನೆ ಮತ್ತು ನೈತಿಕ ಮೌಲ್ಯಾಧಾರಿತ ವೃತ್ತಿಪರತೆಯೇ ಕಾನೂನು ಕ್ಷೇತ್ರದಲ್ಲಿ ಯಶಸ್ಸಿನ ಪ್ರಮುಖ ಆಧಾರವೆಂದು ತಿಳಿಸಿದರು.
ಕಾನೂನು ಪದವಿ ಪೂರ್ಣಗೊಂಡ ನಂತರವೂ ಅಧ್ಯಯನ ಮುಗಿಯುವುದಿಲ್ಲ; ಅಲ್ಲಿಂದಲೇ ನಿಜವಾದ ವೃತ್ತಿಜೀವನ ಆರಂಭವಾಗುತ್ತದೆ, ನಿರಂತರ ಅಧ್ಯಯನ ಮತ್ತು ಜೀವನಪಯರ್ಂತ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕೃತಕ ಬುದ್ಧಿಮತ್ತೆ ಆಧಾರಿತ ಕಾನೂನು ಸಹಾಯಕ ಸಾಧನಗಳ ಅತಿಯಾದ ಹಾಗೂ ವಿಮರ್ಶಾತ್ಮಕವಲ್ಲದ ಬಳಕೆಯ ಬಗ್ಗೆ ಎಚ್ಚರಿಕೆ ನೀಡಿದ ಅವರು, ಕಾನೂನು ಸಂಶೋಧನೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ನಮ್ಮ ಮಾನವೀಯ ವಿವೇಕವನ್ನು, ಪರಿಶೀಲನೆ ಮತ್ತು ನೈತಿಕ ಹೊಣೆಗಾರಿಕೆ ಅತ್ಯಗತ್ಯವೆಂದು ಹೇಳಿದರು.
ಸಂವಾದದ ವೇಳೆ ನ್ಯಾಯಮೂರ್ತಿ ಜೋಶಿ ತಮ್ಮ ಶೈಕ್ಷಣಿಕ ಪಯಣ, ವಕೀಲರಾಗಿ ಹಾಗೂ ನ್ಯಾಯಾಧೀಶರಾಗಿ ಪಡೆದ ಅನುಭವಗಳು, ವೃತ್ತಿಜೀವನದಲ್ಲಿ ಎದುರಿಸಿದ ಸವಾಲುಗಳು ಹಾಗೂ ಯಶಸ್ಸಿನ ಹಿಂದಿರುವ ಕಠಿಣ ಪರಿಶ್ರಮ, ಶಿಸ್ತು ಮತ್ತು ಪ್ರಾಯೋಗಿಕ ಅನುಭವದ ಮಹತ್ವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮವನ್ನು ಕಾನೂನು ವಿಭಾಗದ ಡೀನ್ ಪೆÇ್ರ. ಬಸವರಾಜ ಎಂ. ಕುಬಕಡ್ಡಿ ಸಂಯೋಜಿಸಿದರು. ಕಾನೂನು ವಿಭಾಗದ ಮುಖ್ಯಸ್ಥೆ ಡಾ. ಅನಂತ್ ಡಿ. ಚಿಂಚುರೆ ಸ್ವಾಗತಿಸಿದರು, ವಂದಿತಾ ತಿವಾರಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನೇಶ್ವರ ಟ್ರಸ್ಟ್‍ನ ಕಾರ್ಯಕಾರಿ ಟ್ರಸ್ಟಿಗಳಾದ ಮಹಾದೇವಯ್ಯ ಕರದಳ್ಳಿ, ವಿ.ವಿ.ಯ ಕಾನೂನು ವಿಭಾಗದ ಪ್ರಾಧ್ಯಾಪಕರುಗಳಾದ ಡಾ. ಶಶಿರೇಖಾ ಮಾಳಗಿ, ಡಾ. ಜಗದೀಶ್ ಚಂದ್ರ ಟಿ.ಜಿ., ಡಾ. ರೇಣುಕಾ ಎಸ್. ಗುಬ್ಬೇವಾಡ್, ಡಾ. ಜಯಂತ ಬೋರುವಾ, ಡಾ. ಕೆ.ಎಂ. ಕೃಷ್ಣಶೇಖರ್ ಶರ್ಮಾ, ಪಿ. ವೈಷ್ಣವಿ ನಾರಾಯಣ್ ಹಾಗೂ ಜುನು ದಾಸ್ ಸೇರಿದಂತೆ ಕಾನೂನು ವಿಭಾಗದ ಸಂಶೋಧನಾ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.