
ಆಳಂದ: ಸಿದ್ಧರೂಢರು ಸೇರಿದಂತೆ ಶರಣರು ಹಾಕಿಕೊಟ್ಟ ಆಧ್ಯಾತ್ಮಿಕ ಹಾಗೂ ಮಾನವೀಯತೆಯ ಮಾರ್ಗ ಪರಂಪರೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಬದುಕು ಪಾವನವಾಗುತ್ತದೆ ಎಂದು ಶರಣಮಂಟಪದ ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರು ಹೇಳಿದರು.
ಪಟ್ಟಣದ ಶರಣನಗರದಲ್ಲಿರುವ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ನಡೆದ 20ನೇ ವರ್ಷದ ಜಪಯಜ್ಞದ ಸಮಾರೋಪ ಸಮಾರಂಭ ಹಾಗೂ 1,500 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಅವರು ಭಕ್ತರಿಗೆ ಆಶೀರ್ವಚನ ನೀಡಿದರು.
ಸಿದ್ಧರೂಢ ಶರಣರು ಹಾಗೂ ಹಿಂದಿನ ಶರಣ ಮಹನೀಯರು ಸಮಾಜಕ್ಕೆ ತೋರಿಸಿಕೊಟ್ಟ ಸನ್ಮಾರ್ಗ, ಭಕ್ತಿ, ಶ್ರದ್ಧೆ ಮತ್ತು ಸೇವಾ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಶರಣರು ಸಾರಿದ ಸರಳತೆ, ಸತ್ಯ, ಕಾಯಕ ಮತ್ತು ದಾಸೋಹದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಶರಣರ ಆದರ್ಶಗಳನ್ನು ಅನುಸರಿಸಿ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವುದರಿಂದ ವ್ಯಕ್ತಿಯ ಜೀವನದಲ್ಲಿ ಶಾಂತಿ, ನೆಮ್ಮದಿ ಹಾಗೂ ಸಾರ್ಥಕತೆ ದೊರೆಯುತ್ತದೆ. ಧಾರ್ಮಿಕ ಕಾರ್ಯಕ್ರಮಗಳು ಕೇವಲ ಪೂಜೆ-ಪುನಸ್ಕಾರಗಳಿಗೆ ಸೀಮಿತವಾಗದೆ ಸಮಾಜದಲ್ಲಿ ಸದ್ಭಾವನೆ, ಭಕ್ತಿ, ಪರಸ್ಪರ ಸಹಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವಂತಾಗಬೇಕು ಎಂದು ಶ್ರೀ ಚನ್ನಬಸವ ಪಟ್ಟದೇವರು ಭಕ್ತರಿಗೆ ಸಲಹೆ ನೀಡಿದರು.
1,500 ಮುತ್ತೈದೆಯರಿಗೆ ಉಡಿತುಂಬಿ ಆಶೀರ್ವಾದ
ಜಪಯಜ್ಞದ 20ನೇ ವರ್ಷದ ಸಮಾರೋಪದ ಅಂಗವಾಗಿ ನಡೆದ ಉಡಿತುಂಬುವ ಕಾರ್ಯಕ್ರಮದಲ್ಲಿ ಸುಮಾರು 1,500 ಮುತ್ತೈದೆಯರಿಗೆ ಉಡಿತುಂಬಿ ಆಶೀರ್ವದಿಸಲಾಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಅಕ್ಕಲಕೋಟದ ಶ್ರೀ ಚಿಕ್ಕರಾಮಲಿಂಗ ಸ್ವಾಮಿಗಳು ಆಶೀರ್ವಚನ ನೀಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಮಹಾದೇವಿ ಜಳಜುಳೆ, ಲಲಿತಾ ಷಣ್ಮೂಖ, ಈರಮ್ಮಾ ತಟ್ಟಿ, ಶಾಂತಾಬಾಯಿ ತಟ್ಟಿ, ಶಶಿಕಲಾ ಮುನ್ನೊಳ್ಳಿ, ಲಿಂಗಮ್ಮ ದುದಗಿ, ಕಾಂತಾಬಾಯಿ ಜಗದೆ, ಶರಣಮ್ಮ ಕಳಸೆ, ಮಲ್ಲಮ್ಮ ಗುಳೆದಗುಡ್ಡ, ರಾಜೇಶ್ವರಿ ಸನ್ಮೂಖ, ಧಾನಮ್ಮ ಕಿಣಗಿ, ನಾಗಮ್ಮ ಯಲ್ದೆ, ಸೂರೆಖಾ ಮಸೂಂದೆ, ಅಂಬವ್ವ ಅಟಗಿ, ಪಾರ್ವತಿ ಇಟಾಮಳೆ, ಜೋತಿ ಜುಳಜುಳೆ, ಶರಣಮ್ಮ ಮಾಡಿಯಾಳ, ಶ್ರೀದೇವಿ ಡಬರೆ, ಕಮೀಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ, ಕಾರ್ಯದರ್ಶಿ ಶ್ರೀಶೈಲ ಉಳ್ಳೆ, ಖಜಾಂಚಿ ಭೀಮಣ್ಣ ಶಟ್ಟಗುಂಡೆ, ಡಾ. ಸಿದ್ಧರಾಮ ತಟ್ಟಿ, ರಾಜಶೇಖರ ಕೆ. ತಟ್ಟಿ, ವೀರಭದ್ರ ದುದಗಿ, ಕಾಂತಯ್ಯ ಸ್ವಾಮಿ ಗುಳೆದಗುಡ್ಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆ.13ರಿಂದ ಶರಣ ಮಂಟಪದಲ್ಲಿ ಶ್ರಾವಣ ಪುರಾಣ:
ಪಟ್ಟಣದ ಶರಣನಗರದಲ್ಲಿರುವ ಸದ್ಗುರು ರೇವಣಸಿದ್ಧ ಶಿವಶರಣ ಮಂಟಪದಲ್ಲಿ ಶ್ರಾವಣ ಮಾಸದ ಅಂಗವಾಗಿ ಆ.13ರಿಂದ ಸೆ.12ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಂಟಪದ ಪೀಠಾಧಿಪತಿ ಶ್ರೀ ಚನ್ನಬಸವ ಪಟ್ಟದೇವರ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಪಂಚಕಮಿಟಿ ಅಧ್ಯಕ್ಷ ಸೂರ್ಯಕಾಂತ ತಟ್ಟಿ ಹಾಗೂ ಕಾರ್ಯದರ್ಶಿ ಶ್ರೀಶೈಲ ಉಳ್ಳೆ ಮಾಹಿತಿ ನೀಡಿದ್ದಾರೆ.
ಆ.13ರಿಂದ ಸೆ.12ರವರೆಗೆ ಪ್ರತಿದಿನ ಬೆಳಗಿನ ಜಾವ 5.15ಕ್ಕೆ ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಪ್ರಭಾತಫೇರಿ ನಡೆಯಲಿದೆ. ಬಳಿಕ ಬೆಳಿಗ್ಗೆ 7 ಗಂಟೆಗೆ ಸಾಮೂಹಿಕ ಲಿಂಗಪೂಜೆ ಹಾಗೂ ಸಂಜೆ 7.15ಕ್ಕೆ ಶ್ರಾವಣ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಶ್ರಾವಣ ಮಾಸದ ಪಾವಿತ್ರ್ಯವನ್ನು ಸ್ಮರಿಸುವುದರ ಜತೆಗೆ ಭಕ್ತರಲ್ಲಿ ಆಧ್ಯಾತ್ಮಿಕ ಚಿಂತನೆ, ಧಾರ್ಮಿಕ ಶ್ರದ್ಧೆ ಹಾಗೂ ಶರಣರ ತತ್ವ-ಸಿದ್ಧಾಂತಗಳ ಅರಿವು ಮೂಡಿಸುವ ಉದ್ದೇಶದಿಂದ ಒಂದು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪಂಚಕಮಿಟಿ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.






























