Home ಮುಖಪುಟ ಸುದ್ದಿ ಕ್ಯಾಲಿಫೋರ್ನಿಯ:ಭಾರತೀಯ ಮೂಲದ ಮಹಿಳೆ ಹತ್ಯೆ

ಕ್ಯಾಲಿಫೋರ್ನಿಯ:ಭಾರತೀಯ ಮೂಲದ ಮಹಿಳೆ ಹತ್ಯೆ

ಸ್ಯಾಕ್ರಮೆಂಟೊ (ಅಮೆರಿಕ), ಸೆ. ೧೩- ತಿಂಗಳುಗಳ ಕಾಲ ತನ್ನನ್ನು ಹಿಂಬಾಲಿಸುತ್ತಿದ್ದ (ಸ್ಟಾಕಿಂಗ್) ವ್ಯಕ್ತಿಯೊಬ್ಬನ ಗುಂಡಿನ ದಾಳಿಗೆ ೩೮ ವರ್ಷದ ಭಾರತೀಯ ಮೂಲದ ಮಹಿಳೆ ಶಲಿನಿ ಠಾಕೂರ್ ಬಲಿಯಾಗಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ನಡೆದಿದೆ. ಹತ್ಯೆಯ ಬಳಿಕ ಪೊಲೀಸರೊಂದಿಗೆ ನಡೆದ ಮುಖಾಮುಖಿಯಲ್ಲಿ ಆರೋಪಿಯು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ ಹಾಗೂ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಸೆಪ್ಟೆಂಬರ್ ೮ರಂದು ಸ್ಯಾಕ್ರಮೆಂಟೊದ ಶಾಪಿಂಗ್ ಸೆಂಟರ್‌ವೊಂದರಲ್ಲಿ ನಡೆದಿದೆ. ೨೨ ವರ್ಷದ ರೋಹಿತ್ ಎಂಬಾತ ಶಲಿನಿ ಅವರ ಕಾರಿನ ಬಳಿ ತೆರಳಿ, ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಹಿಂಬಾಲಿಸಿ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡೇಟಿನಿಂದ ಶಲಿನಿ ಸ್ಥಳದಲ್ಲೇ ಕುಸಿದುಬಿದ್ದ ಬಳಿಕ, ಆರೋಪಿ ಮತ್ತೊಂದು ಗುಂಡನ್ನು ಸಮೀಪದಿಂದ ಅವರ ತಲೆಗೆ ಹಾರಿಸಿ ಅಲ್ಲಿಂದ ವಾಹನದಲ್ಲಿ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಗುಂಡಿನ ದಾಳಿಯ ಬಳಿಕ ಸಾಕ್ಷಿಗಳು ನೀಡಿದ ವಾಹನದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆರೋಪಿಯ ವಾಹನವನ್ನು ಗುರುತಿಸಿದ್ದಾರೆ. ಸ್ಯಾಕ್ರಮೆಂಟೊದ ವಾಟ್ ಅವೆನ್ಯೂ ಸಮೀಪ ಪೂರ್ವ ದಿಕ್ಕಿನ ಹೈವೇ-೫೦ರಲ್ಲಿ ವಾಹನವನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ರೋಹಿತ್ ವಾಹನ ನಿಲ್ಲಿಸಿ ಪೊಲೀಸರೊಂದಿಗೆ ಹಲವು ಗಂಟೆಗಳ ಕಾಲ ಮುಖಾಮುಖಿ ಪರಿಸ್ಥಿತಿ ನಿರ್ಮಾಣವಾಗಿತ್ತು.

ನಂತರ ವಾಹನದ ಚಾಲಕನ ಸೀಟಿನಲ್ಲಿ ರೋಹಿತ್ ಗುಂಡೇಟಿನಿಂದ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಅದು ಸ್ವಯಂ ಹಾರಿಸಿಕೊಂಡ ಗುಂಡೇಟು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ಆತ ಮೃತಪಟ್ಟಿರುವುದು ದೃಢಪಟ್ಟಿದೆ.ರೋಹಿತ್, ಶಲಿನಿ ಅವರನ್ನು ಹಲವು ತಿಂಗಳುಗಳಿಂದ ಹಿಂಬಾಲಿಸುತ್ತಿದ್ದ ಹಾಗೂ ಕಿರುಕುಳ ನೀಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕಿರುಕುಳದ ಪ್ರಕರಣ ಕನಿಷ್ಠ ಜನವರಿ ೨೦೨೬ರಿಂದಲೇ ಮುಂದುವರಿದಿತ್ತು ಎನ್ನಲಾಗಿದೆ.

ಶಲಿನಿ ತಮ್ಮ ಕಾರಿನ ಬಾನೆಟ್ ಕೆಳಗೆ ಆಪಲ್ ಏರ್‌ಟ್ಯಾಗ್ ಪತ್ತೆಹಚ್ಚಿದ್ದರು. ಇದರ ಮೂಲಕ ಅವರ ಚಲನವಲನವನ್ನು ಯಾರೋ ಗಮನಿಸುತ್ತಿದ್ದಾರೆ ಎಂಬುದು ಅವರಿಗೆ ತಿಳಿದುಬಂದಿತ್ತು. ಬಳಿಕ ಅವರ ಕಾರಿನ ಟೈರ್‌ಗಳ ಗಾಳಿ ಬಿಡುವುದು, ಕೆಲಸದ ಸ್ಥಳದವರೆಗೆ ಹಿಂಬಾಲಿಸುವುದು ಸೇರಿದಂತೆ ಹಲವು ಕೃತ್ಯಗಳನ್ನು ರೋಹಿತ್ ನಡೆಸಿದ್ದಾನೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ.ಕೆಲಸದ ಸ್ಥಳಕ್ಕೆ ಹಿಂಬಾಲಿಸಿಕೊಂಡು ಬಂದ ನಂತರ ಸಹಾಯ ಮಾಡುವ ನೆಪದಲ್ಲಿ ಶಲಿನಿ ಅವರೊಂದಿಗೆ ಸಂಪರ್ಕ ಸಾಧಿಸಲು ಆತ ಪ್ರಯತ್ನಿಸುತ್ತಿದ್ದ ಎನ್ನಲಾಗಿದೆ.


ರೋಹಿತ್ ಶಲಿನಿ ಅವರ ಅಪಾರ್ಟ್‌ಮೆಂಟ್‌ನ ಕೀಲಿಯ ಪ್ರತಿಯನ್ನು ಪಡೆದುಕೊಂಡು, ಅವರು ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಮನೆಗೆ ಪ್ರವೇಶಿಸಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.


ಆರೋಪಿಯ ವರ್ತನೆ ಕ್ರಮೇಣ ಆತಂಕಕಾರಿಯಾಗಿ ಬದಲಾಗಿತ್ತು ಎಂದು ಸ್ಯಾಕ್ರಮೆಂಟೊ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಸರ್ಜಂಟ್ ಅಮರ್ ಗಾಂಧಿ ತಿಳಿಸಿದ್ದಾರೆ. ಇಬ್ಬರೂ ಸುಮಾರು ಎರಡು ವರ್ಷಗಳಿಂದ ಪರಿಚಿತರಾಗಿದ್ದು, ಬೇರೆ ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು. ಶಲಿನಿ ಅವರನ್ನು ರೋಹಿತ್ ಡೋರ್‌ಡ್ಯಾಶ್ ಡೆಲಿವರಿ ಚಾಲಕನಾಗಿ ಪರಿಚಯಿಸಿಕೊಂಡಿದ್ದರು ಎನ್ನಲಾಗಿದೆ.


ಶಲಿನಿ ವಿರುದ್ಧದ ಕಿರುಕುಳದ ಬಗ್ಗೆ ಮಾರ್ಚ್‌ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಆರಂಭದಲ್ಲಿ ಅವರು ಕ್ರಿಮಿನಲ್ ಪ್ರಕರಣ ದಾಖಲಿಸಲು ಅಥವಾ ನಿರ್ಬಂಧಾಜ್ಞೆ ಪಡೆಯಲು ಮುಂದಾಗಿರಲಿಲ್ಲ. ಆದರೆ ಮೇ ತಿಂಗಳಲ್ಲಿ ಪೊಲೀಸರು ನಿರ್ಬಂಧಾಜ್ಞೆ ಪಡೆಯುವಂತೆ ಸಲಹೆ ನೀಡಿದ್ದರು. ಬಳಿಕ ಶಲಿನಿ ನ್ಯಾಯಾಲಯದಿಂದ ರೋಹಿತ್ ವಿರುದ್ಧ ನಿರ್ಬಂಧಾಜ್ಞೆ ಪಡೆದುಕೊಂಡಿದ್ದರು.

ನಿರ್ಬಂಧಾಜ್ಞೆ ಜಾರಿಯಲ್ಲಿದ್ದರೂ ಜುಲೈವರೆಗೂ ರೋಹಿತ್ ಹಿಂಬಾಲಿಕೆ ಮುಂದುವರಿಸಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಶಲಿನಿ, ರೋಹಿತ್ ತಮ್ಮ ಮನೆಯ ಹೊರಗೆ ಗಂಟೆಗಟ್ಟಲೆ ವಾಹನ ನಿಲ್ಲಿಸಿಕೊಂಡು ಇರುತ್ತಿದ್ದ ಹಾಗೂ ಪ್ರತಿದಿನ ತಮ್ಮೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದ ಎಂದು ಆರೋಪಿಸಿದ್ದರು.

ಶಲಿನಿ ಅವರ ತಾಯಿ ಸುಧೇಶ್ ಕುಮಾರಿ ಅವರು ಸೆಪ್ಟೆಂಬರ್ ೮ರಂದು ಮಧ್ಯಾಹ್ನ ಸುಮಾರು ೨ ಗಂಟೆಗೆ ಮಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು. ಇನ್ನೂ ೧೫ ನಿಮಿಷಗಳಲ್ಲಿ ಮತ್ತೆ ಕರೆ ಮಾಡುವುದಾಗಿ ಶಲಿನಿ ಹೇಳಿದ್ದರು. ಆದರೆ ಆ ಕರೆ ಮತ್ತೆ ಬರಲಿಲ್ಲ.ಇದಾದ ಸುಮಾರು ಒಂದು ಗಂಟೆಯೊಳಗೆ ಶಾಪಿಂಗ್ ಸೆಂಟರ್‌ನಲ್ಲಿ ಶಲಿನಿ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.