
ಕಲಬುರಗಿ,ಸೆ.2: ಬಚಾವತ್ ಆಯೋಗದ ಐತೀರ್ಪಿನ ಪ್ರಕಾರ ಭೀಮಾ ಸಬ್ ಬೇಸಿನ್ನಲ್ಲಿ ರಾಜ್ಯಕ್ಕೆ ಹಂಚಿಕೆಯಾದ 15 ಟಿ.ಎಂ.ಸಿ. ನೀರು ಮಹಾರಾಷ್ಟ್ರದಿಂದ ನಿಯಮಿತವಾಗಿ ಹರಿಸದ ಕಾರಣ ಇಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದ್ದು, ಇದಕ್ಕೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ನಿಯಮಿತವಾಗಿ ನೀರು ಹಂಚಿಕೆಗೆ ಕೂಲಂಕುಷವಾಗಿ ಅಧ್ಯಯನ ಮಾಡಲು ಕೂಡಲೆ ನೀರಾವರಿ ಅಧಿಕಾರಿಗಳ ಒಂದು ತಂಡ ರಚಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯದ ಗೃಹ, ಐ.ಟಿ.-ಬಿ.ಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ ನೀಡಿದರು.
ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭೀಮಾ ಪ್ರದೇಶದಲ್ಲಿನ ಯೋಜನೆಗಳ ಕುರಿತು ನೀರಾವರಿ ಅಧಿಕಾರಿಗಳು, ರೈತ ಮುಖಂಡರು ಮತು ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬಚಾವತ್ ಆಯೋಗದ ಪ್ರಕಾರ ಮಜಹಾರಾಷ್ಟ್ರಕ್ಕೆ 95 ಟಿ.ಎಂ.ಸಿ. ಮತ್ತು ಕರ್ನಾಟಕಕ್ಕೆ 15 ಟಿ.ಎಂ.ಸಿ ನೀರು ಹಂಚಿಕೆ ಮಾಡಿದೆ. ನಮ್ಮ ಪಾಲಿನ ನೀರು ನಿಯಮಿತವಾಗಿ ಹಂಚಿಕೆ ಮಾಡದೆ ಮಹಾರಾಷ್ಟ್ರ ರಾಜ್ಯವು ಐತೀರ್ಪಿಕ್ಕಿಂತ ಹೆಚ್ಚಿನ ನೀರು ಬಳಕೆ ಮಾಡುತ್ತಿದ್ದು, ಇದೇ ಸಮಸ್ಯೆ ಉಂಟು ಮಾಡುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಇನ್ನು ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಡ್ಯಾಂ, ಟನಲ್ ನಿರ್ಮಾಣ ಮಾಡಿ ನೀರು ಸಂಗ್ರಹಣೆ ಮತ್ತು ಸ್ಥಳೀಯವಾಗಿ ಡ್ಯಾಂಗೆ ನೀರು ತಿರುವು ಮಾಡುವ ಯೋಜನೆ ಕೈಗೊಳ್ಳುತ್ತಿದ್ದು, ಇದು ನೈಸರ್ಗಿಕವಾಗಿ ಕೆಳ ಪ್ರದೇಶದಲ್ಲಿರುವ ಕಲಬುರಗಿ, ವಿಜಯಪುರ, ಯಾದಗಿರಿಗೆ ನೀರು ಹರಿವಿಗೆ ತೊಂದರೆ ಉಂಟು ಮಾಡುವುದಲ್ಲದೆ ಕುಡಿಯುವ ನೀರಿನ ಹಾಹಾಕಾರ ಉಂಟು ಮಾಡುತ್ತಿದೆ. ಅಲ್ಲದೆ ಮಹಾರಾಷ್ಟ್ರ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ನೀರು ಸಹ ಆ ರಾಜ್ಯ ಬಳಸುತ್ತಿದೆ ಎಂಬ ಆರೋಪ ಇದ್ದು, ಹೀಗಾಗಿ ಈ ಎಲ್ಲ ಅಂಶಗಳು ಮತ್ತು ಪರಿಸ್ಥಿತಿಯನ್ನು ಅಧ್ಯಯನ ಮಾಡಿ ವರದಿ ನೀಡಲು ಶೀಘ್ರವೇ ಅಧಿಕಾರಿಗಳ ತಂಡ ರಚನೆ ಮಾಡುವಂತೆ ಸೂಚನೆ ನೀಡಿದರು.
ಅಧಿಕಾರಿಗಳ ತಂಡ ವರದಿ ಆಧರಿಸಿ ರಾಜ್ಯದ ನೀರಾವರಿ ಸಚಿವರು ಮತ್ತು ಪ್ರದೇಶದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮುಖ್ಯಮಂತ್ರಿಗಳ ಬಳಿ ಈ ಸಮಸ್ಯೆ ಪರಿಹಾರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಮೂಲಸೌಕರ್ಯ ನಿರ್ಮಾಣಕ್ಕೂ ಆದ್ಯತೆ:ಬಚಾವತ್ ಆಯೋದ ತೀರ್ಪಿನ ಪ್ರಕಾರ ರಾಜ್ಯಕ್ಕೆ ಬರಬೇಕಾದ 15 ಟಿ.ಎಂ.ಸಿ. ನೀರನ್ನು ಹಿಡಿದಿಟ್ಟುಕೊಳ್ಳಲು ಅಗತ್ಯವಿರುವ ಮೂಲಸೌರ್ಯ ಸಹ ನಾವು ಸೃಷ್ಠಿಸಿರಬೇಕಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಈ ಕುರಿತು ಸಹ ವರದಿಯಲ್ಲಿ ಬೆಳಕು ಚೆಲ್ಲಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದರು.
ಕಾನೂನಿನ ಮೂಲಕ ನ್ಯಾಯ ಪಡೆಯಬೇಕಿದೆ: ಸಭೆಯಲ್ಲಿ ಭಾಗವಹಿಸಿದ ನೀರಾವರಿ ಹೋರಾಟ ಸಮಿತಿಯ ಪಂಚಪ್ಪ ಕಲಬುರಗಿ ಮಾತನಾಡಿ, ಬಚಾವತ್ ಆಯೋಗದ ತೀರ್ಪಿನ ಪ್ರಕಾರ ಭೀಮಾ ಸಬ್ ಬೇಸಿನ್ನಲ್ಲಿ ಮಹಾರಾಷ್ಟ್ರಕ್ಕೆ 95 ಟಿ.ಎಂ.ಸಿ., ಕರ್ನಾಟಕಕ್ಕೆ 15 ಟಿ.ಎಂ.ಸಿ. ಮತ್ತು ಅವಿಭಜಿತ ಆಂಧ್ರಪ್ರದೇಶ ರಾಜ್ಯಕ್ಕೆ 6 ಟಿ.ಎಂ.ಸಿ. ನೀರು ಹಂಚಿಕೆ ಮಾಡಿದೆ. ಆದರೆ ಮಹಾರಾಷ್ಟ್ರ ಸರ್ಕಾರ ನಮಗೆ ನೀಡಬೇಕಾದ 15 ಟಿ.ಎಂ.ಸಿ. ನೀರನ್ನು ಅವಶ್ಯವಿದ್ದಾಗ ನಿಯಮಿತವಾಗಿ ಬಿಡುತ್ತಿಲ್ಲ. ಅಲ್ಲದೆ ಅಕ್ರಮವಾಗಿ ಸುರಂಗ ಕೊರೆದು ಸೀನಾ ನದಿಗೆ ನೀರು ತಿರುವು ಮಾಡಿಕೊಂಡಿದ್ದಾರೆ. ಅನಿಯಂತ್ರಿತವಾಗಿ ನೀರು ಬಿಡುವುದರಿಂದ ಇಲ್ಲಿನ ನದಿ ದಂಡೆಯಲ್ಲಿ ಪ್ರವಾಹ ಸೃಷ್ಠಿಯಾಗಿ ಇನ್ನಷ್ಟು ಸಮಸ್ಯಗೆ ಎಡೆ ಮಾಡಿಕೊಡುತ್ತಿದೆ. ಇದರಿಂದ ವಿಜಯಪುರ, ಕಲಬುರಗಿ, ಯಾದಗಿರಿ ಜಿಲ್ಲೆಯ ಸಾರ್ವಜನಿಕರು ಕುಡಿಯುವ ನೀರಿನ ಪರಿತಪಿಸುವಂತ ಪರಿಸ್ಥಿತಿ ನಿರ್ಮಾಣವಾದೆ. ಹೀಗಾಗಿ ಮಹಾರಾಷ್ಟ್ರ ನಿಯಮಿತವಾಗಿ ನೀರು ನಮಗೆ ಹರಿಸುವ ನಿಟ್ಟಿನಲ್ಲಿ ಎರಡು ರಾಜ್ಯಗಳ ಉಸ್ತುವಾರಿಯಲ್ಲಿ ಮಾನಿಟರಿಂಗ್ ಕಮಿಟಿ ರಚನೆ ಮಾಡಬೇಕು. ಇಲ್ಲವೇ ಸೂಕ್ತ ಕಾನೂನಿನ ಮೂಲಕವೇ ಈ ಮಸ್ಯೆ ಬಗೆಹರಿಸಿ ನ್ಯಾಯ ಪಡೆಯಬೇಕಿದೆ. ಪ್ರತಿ ವರ್ಷ ಕಲಬುರಗಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾದಾಗ ನಾರಾಯಣಪುರ ಜಲಾಶಯದಿಂದ 1, 2 ಟಿ.ಎಂ.ಸಿ ನೀರು ಹರಿಸಲಾಗುತ್ತಿದೆ. ಇದು ತಾತ್ಕಲಿಕ ಪರಿಹಾರ ಅμÉ್ಟ. ಮಹಾರಾಷ್ಟ್ರದಿಂದ ನಮಗೆ ಬರಬೇಕಾದ ನೀರು ನಿಯಮಿತವಾಗಿ ಬಂದಲ್ಲಿ ಅದು ಶಾಶ್ವತ ಪರಿಹಾರ ಸಿಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಲಬುರಗಿಯ ರೈತ ಮುಖಂಡ ಶ್ರೀಮಂತ ಬಿರಾದಾರ ಮಾತನಾಡಿ ಕಾವೇರಿ ಮಾದರಿಯಲ್ಲಿ ಭೀಮಾ ಚಳುವಳಿ ನಡೆಸಬೇಕಿದೆ. ನಮ್ಮ ಪಾಲಿನ ನೀರು ಪಡೆಯಲು ಕಾನೂನು ಮೊರೆ ಹೋಗಬೇಕಿದ್ದು,. ರಾಜ್ಯ ಸರ್ಕಾರ ದೃಢ ನಿಲುವು ತಾಳಬೇಕು ಎಂದರು.
ಸಭೆಯಲ್ಲಿ ಅಫಜಲಪೂರ ಶಾಸಕ ಎಂ.ವೈ.ಪಾಟೀಲ, ಸಿಂದಗಿ ಶಾಸಕ ಅಶೋಕ ಎಂ. ಮನಗುಳಿ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಐ.ಜಿ.ಪಿ. ಶಾಂತನು ಸಿನ್ಹಾ, ಕಲಬುರಗಿ ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ. ಅಡ್ಡೂರು ಶ್ರೀನಿವಾಸುಲು, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರಭುರೆಡ್ಡಿ, ಕೆ.ಎನ್.ಎನ್.ಎಲ್. ಕಲಬುರಗಿ ವೃತ್ತದ ಅಧೀಕ್ಷಕ ಅಭಿಯಂತ ಸತ್ಯಪ್ರಕಾಶ ಮೂಲಗೆ, ಬಿ.ಎಲ್.ಐ.ಎಸ್. ಯೋಜನೆಯ ಇ.ಇ. ಶಿವಕುಮಾರ ಸ್ವಾಮಿ, ಎ.ಇ.ಇ. ಸಂತೋಷ ಕುಮಾರ, ತಾಂತ್ರಿಕ ಸಹಾಯಕ ಪ್ರಸಾದ, ಸೆಕ್ಷನ್ ಆಫೀಸರ್ ಗುರು ಸೇರಿದಂತೆ ಮತ್ತಿತರ ಅಧಿಕಾರಿಗಳು, ರೈತ ಮುಖಂಡರು ಭಾಗವಹಿಸಿದ್ದರು.































