
ಚಮೋಲಿ,ಅ.14-ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್ಕೋಟಿ ಪ್ರದೇಶದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 9 ಕಾರ್ಮಿಕರು ದುರಂತ ಅಂತ್ಯ ಕಂಡಿದ್ದಾರೆ. ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾಪೆರ್Çರೇಷನ್ ವತಿಯಿಂದ ಕೈಗೆತ್ತಿಕೊಳ್ಳಲಾಗಿದ್ದ ವಿಶ್ಣುಗಾಡ್ ಪೀಪಲ್ಕೋಟಿ ಜಲವಿದ್ಯುತ್ ಯೋಜನೆಯ ‘ಟೇಲ್ ರೇಸ್’ ಸುರಂಗದಲ್ಲಿ ನಿಯಮಿತ ಕಾಮಗಾರಿ ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಭಾರಿ ಪ್ರಮಾಣದ ನೀರು ಮತ್ತು ಮಣ್ಣಿನ ಅವಶೇಷಗಳು ಧುಮುಕಿ ಈ ಅನಾಹುತ ಸಂಭವಿಸಿದೆ. ಈ ವೇಳೆ ಸುರಂಗದೊಳಗೆ ಕರ್ತವ್ಯದಲ್ಲಿದ್ದ 20ಕ್ಕೂ ಹೆಚ್ಚು ಕಾರ್ಮಿಕರು ದಿಢೀರ್ ಹರಿದುಬಂದ ನೀರಿನ ರಭಸಕ್ಕೆ ಸಿಲುಕಿಕೊಂಡಿದ್ದು, ಕೆಲವರು ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದಾರೆ.
ಗುರುವಾರ ತಡರಾತ್ರಿ ಚಮೋಲಿಯಲ್ಲಿ ನಿರ್ಮಾಣ ಹಂತದಲ್ಲಿರುವ ಟಿಎಚ್ಡಿಸಿ ಸುರಂಗದಲ್ಲಿ ನೀರು ಮತ್ತು ಅವಶೇಷಗಳು ತುಂಬಿದ ನಂತರ ಇದುವರೆಗೆ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು ಸ್ಥಳಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಸುರಂಗವು ಸುಮಾರು 3 ಕಿಲೋಮೀಟರ್ ಉದ್ದವಾಗಿದೆ. ಸುರಂಗದ ಸುಮಾರು 1.50 ಕಿಲೋಮೀಟರ್ಗಳಷ್ಟು ಭೂಕುಸಿತ ಸಂಭವಿಸಿದ್ದು, ಇದರಿಂದಾಗಿ ಶಿಲಾಖಂಡರಾಶಿಗಳು ಮತ್ತು ನೀರು ಒಳಗೆ ಹರಿದಿದೆ.
ಸ್ಥಳಕ್ಕೆ ಧಾವಿಸಿರುವ ಎನ್ ಡಿ ಆರ್ ಎಫ್ , ಎಸ್.ಡಿ ಆರ್ ಎಫ್ ಹಾಗೂ ಭಾರತೀಯ ಸೇನೆಯ ತಂಡಗಳು ತೀವ್ರ ಸ್ವರೂಪದ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಸುರಂಗದೊಳಗೆ ಭಾರಿ ಪ್ರಮಾಣದಲ್ಲಿ ನೀರು ಮತ್ತು ಕೆಸರು ತುಂಬಿಕೊಂಡಿರುವುದು ರಕ್ಷಣಾ ಸಿಬ್ಬಂದಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಪ್ರಬಲ ಮೋಟಾರ್ ಪಂಪ್ಗಳ ಮೂಲಕ ನೀರನ್ನು ಹೊರಹಾಕುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆಸ್ಪತ್ರೆಗೆ ರವಾನಿಸಲಾದ ಗಾಯಾಳುಗಳಿಗೆ ಗೋಪೇಶ್ವರ ಮತ್ತು ಶ್ರೀನಗರದ ಬೇಸ್ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ದುರಂತದ ಕುರಿತು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹಿರಿಯ ಅಧಿಕಾರಿಗಳಿಂದ ನಿರಂತರ ಮಾಹಿತಿ ಪಡೆಯುತ್ತಾ, ಸುರಂಗದೊಳಗೆ ಯಾರಾದರೂ ಸಿಲುಕಿದ್ದರೆ ಅವರನ್ನು ತಕ್ಷಣವೇ ಸುರಕ್ಷಿತವಾಗಿ ಹೊರತರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಚಮೋಲಿ ಅಪಘಾತದಲ್ಲಿ ಮೃತಪಟ್ಟವರಲ್ಲಿ ತೆಹ್ರಿಯ ಪ್ರದೀಪ್ ಸಿಂಗ್ ಪವಾರ್, ಚಮೋಲಿಯ ಮುಖೇಶ್, ಬಿಹಾರದ ದುರ್ಲಭ್ ಶರ್ಮಾ, ಜಾರ್ಖಂಡ್ನ ವಿಜಯ್ ಮತ್ತು ಜಿತೇಂದ್ರ ಸೇರಿದ್ದಾರೆ. ಲೋಕೇಶ್ವರ್ ಮತ್ತು ಭುವನೇಶ್ವರ್ ಕೂಡ ಸೇರಿದ್ದಾರೆ. ಇನ್ನಿಬ್ಬರು ಸಾವನ್ನಪ್ಪಿದ್ದಾರೆ.ಚಮೋಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಮಾರ್ಗದಲ್ಲಿ ಕೆಲಸ ಮಾಡುತ್ತಿರುವ ಹೆಚ್ಚಿನ ಕಾರ್ಮಿಕರು ಬಿಹಾರ, ಜಾರ್ಖಂಡ್ ಮತ್ತು ಛತ್ತೀಸ್ಗಢದವರಾಗಿದ್ದಾರೆ ಎಂದು ಹೇಳಲಾಗುತ್ತದೆ. ಟಿಎಚ್ಡಿಸಿ- ಎನ್ ಟಿಪಿಸಿ ನಿರ್ಮಿಸುತ್ತಿರುವ ಈ 444 ಮೆಗಾವ್ಯಾಟ್ ಯೋಜನೆಯ ಸುಮಾರು 70 ಪ್ರತಿಶತದಷ್ಟು ಕೆಲಸ ಪೂರ್ಣಗೊಂಡಿದೆ.ಸಮರೋಪಾದಿಯಲ್ಲಿ ನಡೆದ ರಕ್ಷಣಾ ಕಾರ್ಯಾಚರಣೆಯ ಫಲವಾಗಿ ಆರಂಭದಲ್ಲಿ ಎಂಟು ಕಾರ್ಮಿಕರನ್ನು ರಕ್ಷಿಸಲಾಯಿತು. ತದನಂತರ ಕಾರ್ಯಾಚರಣೆಯನ್ನು ಚುರುಕುಗೊಳಿಸಿ, ಸುರಂಗದಲ್ಲಿದ್ದ ಮತ್ತಷ್ಟು ಕಾರ್ಮಿಕರ ಪೈಕಿ ಇನ್ನು ಎಂಟು ಜನರನ್ನು ಸುರಕ್ಷಿತವಾಗಿ ಹೊರತರಲಾಗಿದೆ.
ಪ್ರಸ್ತುತ ರಕ್ಷಿಸಲ್ಪಟ್ಟ ಎಲ್ಲಾ 16 ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಪರಿಹಾರ ಮತ್ತು ಸುರಕ್ಷತಾ ತಪಾಸಣೆ ಮುಂದುವರಿದಿದೆ.
































