
ಕಲಬುರಗಿ,ಜು.30-ಚಿತ್ತಾಪುರ ತಾಲ್ಲೂಕಿನ ದಿಗ್ಗಾಂವ ಮತ್ತು ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ಪೊಲೀಸರು ಇಬ್ಬರನ್ನು ಬಂಧಿಸಿ 1,55,700 ರೂ.ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಿಗ್ಗಾಂವ ಗ್ರಾಮದ ನಾಗರಾಜ ತಂದೆ ಸಾಬಣ್ಣ ಭಜಂತ್ರಿ (19) ಮತ್ತು ಅಭಿಷೇಕ ತಂದೆ ಅಮೃತ ಮಡಿವಾಳ (19) ಎಂಬುವವರನ್ನು ಬಂಧಿಸಿ 10 ಸಾವಿರ ರೂ.ಮೌಲ್ಯದ 3 ಮೊಬೈಲ್, 35 ಸಾವಿರ ರೂ.ಮೌಲ್ಯದ 6 ಗ್ರಾಂ.ಬಂಗಾರದ ಕರಳ್ಳಿ ಸರ, 47,700 ರೂ.ಮೌಲ್ಯದ 9 ತೊಗರಿ ಚೀಲಗಳು, 20 ಸಾವಿರ ರೂ.ಮೌಲ್ಯದ ಹೆಚ್.ಪಿ. ನೀರಿನ ಮೋಟಾರ್ ಪಂಪ್, 3 ಸಾವಿರ ರೂ.ಮೌಲ್ಯದ 6 ಕಬ್ಬಿಣದ ಅಂಗಲ್ ಪೈಪ್ಗಳು, ಕೃತ್ಯಕ್ಕೆ ಬಳಸಿದ 40 ಸಾವಿರ ರೂ.ಮೌಲ್ಯದ ಬೈಕ್ ಸೇರಿ 1,55,700 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮನೆಯಲ್ಲಿದ್ದ ವಿವಿಧ ಕಂಪನಿಯ 3 ಮೊಬೈಲ್, 6 ಗ್ರಾಂ.ಬಂಗಾರದ ಕರಳ್ಳಿ ಸರವನ್ನು ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದಿಗ್ಗಾಂವ ಗ್ರಾಮದ ಶಿವಬಸಮ್ಮ ಕರದಳ್ಳಿ ಅವರು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಆರೋಪಿಗಳ ಪತ್ತೆಗೆ ಎಸ್ಪಿ ಅವರು ಶಹಾಬಾದ ಉಪ ವಿಭಾಗದ ಡಿಎಸ್ಪಿ ಶಂಕರಗೌಡ ಪಾಟೀಲ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಎಸ್.ಸಿ.ಪಾಟೀಲ ಅವರ ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ ರೆಡ್ಡಿ, ಸಿಬ್ಬಂದಿಗಳಾದ ಬಸವರಾಜ, ಅಜರುದ್ದಿನ್, ಅನೀಲ, ಅಯ್ಯಣ್ಣ, ದತ್ತಾತ್ರೇಯ ಮತ್ತು ಈರೇಶ್ ಅವರನ್ನು ಒಳಗೊಂಡ ತಂಡ ರಚಿಸಿದ್ದರು.
ಈ ತಂಡ ತನಿಖೆ ನಡೆಸಿ ದಿಗ್ಗಾಂ ಕ್ರಾಸ್ ಹತ್ತಿರ ಆರೋಪಿಗಳಾದ ನಾಗರಾಜ ಭಜಂತ್ರಿ ಮತ್ತು ಅಭಿಷೇಕ ಮಡಿವಾಳ ಅವರನ್ನು ಬಂಧಿಸಿ 1.55 ಲಕ್ಷ ರೂ.ಮೌಲ್ಯದ ಬೆಳೆಬಾಳುವ ವಸ್ತುಗಳನ್ನು ಜಪ್ತಿ ಮಾಡಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಈ ಕಾರ್ಯವನ್ನು ಎಸ್ಪಿ ಅಡ್ಡೂರು ಶ್ರೀನಿವಾಸಲು ಅವರು ಶ್ಲಾಘಿಸಿದ್ದಾರೆ.































