
ಸುಳ್ಯ:ಧ್ಯಾನವು ಮನಸ್ಸಿಗೆ, ಯೋಗವು ದೇಹಕ್ಕೆ ಸಂಬಂಧಿಸಿದ್ದು, ಮನಸ್ಸು ಮತ್ತು ದೇಹ ಎರಡೂ ಸಮತೋಲನದಲ್ಲಿದ್ದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಬೆಳ್ಳಾರೆ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಯ್ಯ ದೂಂತೂರು ಹೇಳಿದರು.
ಮುಕ್ಕೂರು ನೇಸರ ಯುವಕ ಮಂಡಲ ಹಾಗೂ ನೇಸರ ಯುವತಿ ಮಂಡಲದ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಒಂದು ವಾರ ಕಾಲ ನಡೆದ ಉಚಿತ ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪತಂಜಲಿ ಯೋಗ ಶಿಕ್ಷಣ ಕೇಂದ್ರ ಬೆಳ್ಳಾರೆ ಇದರ ಯೋಗ ಶಿಕ್ಷಕರಾದ ಕೆ. ಗಣಪಯ್ಯ ವನಶ್ರೀ ಮಾತನಾಡಿ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವರು ಮಾಧವರಾಗುತ್ತಾರೆ. ಯೋಗದಿಂದ ಜೀವನ ಪ್ರಕಾಶಮಾನವಾಗುತ್ತದೆ. ಪ್ರತಿಯೊಬ್ಬರೂ ನಿರಂತರವಾಗಿ ಯೋಗಾಭ್ಯಾಸ ನಡೆಸಬೇಕು ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಕ್ಕೂರು ನೇಸರ ದಶಪ್ರಣತಿ ಸಮಿತಿ-೨೦೨೬ರ ಅಧ್ಯಕ್ಷ ಡಾ. ನರಸಿಂಹ ಶರ್ಮ ಕಾನಾವು ಮಾತನಾಡಿ, ಯೋಗವು ದೇಹ ಮತ್ತು ಮನಸ್ಸನ್ನು ಸಮತೋಲನಗೊಳಿಸುವ ಜೀವನ ಪದ್ಧತಿಯಾಗಿದ್ದು, ಶಿಬಿರ ಮುಕ್ತಾಯಗೊಂಡರೂ ಇಲ್ಲಿ ಕಲಿತ ಯೋಗಾಸನ ಹಾಗೂ ಪ್ರಾಣಾಯಾಮವನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹಾಗೂ ನೇಸರ ದಶಪ್ರಣತಿ ಸಮಿತಿ-೨೦೨೬ರ ಸಂಚಾಲಕ ಕುಂಬ್ರ ದಯಾಕರ ಆಳ್ವ ಮಾತನಾಡಿದರು.
ಒಂದು ವಾರ ಕಾಲ ಶಿಬಿರಾರ್ಥಿಗಳಿಗೆ ಯೋಗ ತರಬೇತಿ ನೀಡಿದ ಯೋಗ ಶಿಕ್ಷಕ ಕೆ. ಗಣಪಯ್ಯ ವನಶ್ರೀ ಅವರನ್ನು ನೇಸರ ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು. ಶಿಬಿರಾರ್ಥಿಗಳಾದ ಶ್ರೀಧರ ಗೌಡ ಕೊಂಡೆಪ್ಪಾಡಿ ಹಾಗೂ ಜಯಂತ ಕುಂಡಡ್ಕ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಮುಕ್ಕೂರು ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಘುನಾಥ ಶೆಟ್ಟಿ ಬರಮೇಲು, ನೇಸರ ಯುವಕ ಮಂಡಲದ ಅಧ್ಯಕ್ಷ ರಕ್ಷಿತ್ ಗೌಡ ಕಾನಾವು, ಊರ ಪ್ರಮುಖರಾದ ನರಸಿಂಹ ತೇಜಸ್ವಿ ಕಾನಾವು, ಗೋಪಾಲಕೃಷ್ಣ ಭಟ್ ಮನವಳಿಕೆ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಜಯಂತ ಪೂಜಾರಿ ಕೊಡಂಗೆ, ಬೆಳ್ಳಾರೆ ಪತಂಜಲಿ ಯೋಗ ಸಮಿತಿಯ ಹೊನ್ನಪ್ಪ, ಪ್ರಸಾದ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ತೇಜಸ್ವಿತ್ ಅಡ್ಯತಕಂಡ ಸ್ವಾಗತಿಸಿ, ನೇಸರ ಯುವತಿ ಮಂಡಲದ ಅಧ್ಯಕ್ಷೆ ಬೃಂದಾ ಪೂಜಾರಿ ಮುಕ್ಕೂರು ನಿರೂಪಿಸಿ, ಸದಸ್ಯೆ ಪೃಥ್ವಿ ಅಡ್ಯತಕಂಡ ವಂದಿಸಿದರು.


































