
ಸಂಜೆವಾಣಿ ವಾರ್ತೆ
ಹೊಸಪೇಟೆ.ಜು.5 ದ್ವಿಚಕ್ರ ವಾಹನ ಸವಾರರಿಗೆ ಕೇಸ್ ಹಾಕುವ ನೆಪದಲ್ಲಿ ಪೊಲೀಸರು ಅನಗತ್ಯ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ, ದ್ವಿಚಕ್ರ ವಾಹನ ಸವಾರನ ಸಂಬಂಧಿಕರು ದಿಡೀರ್ ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಜರುಗಿದೆ.
ನಗರದ ಪುಣ್ಯಮೂರ್ತಿ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಜರುಗಿದ ಘಟನೆಯಲ್ಲಿ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಬೈಕ್ ತಡೆದು ಫೈನ್ ಹಾಕಿದ್ದಾರೆ ಎಂದು ಆರೋಪಿಸಿ, ಬೈಕ್ ಸವಾರನ ಸಂಬಂಧಿಕರು ರಸ್ತೆ ಮಧ್ಯೆ ಕುಳಿತು ದಿಡೀರ್ ಪ್ರತಿಭಟನೆ ನಡೆಸಿದರು.
ದಿಡೀರ್ ಪ್ರತಿಭಟನೆ ಹಿನ್ನಲೆಯಲ್ಲಿ ಕೆಲ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ದ್ವಿಚಕ್ರ ವಾಹನ ಸವಾರನ ಸಂಬಂಧಿಕರ ನಡುವೆ ಮಾತಿನ ಚಕಮಕಿ ಜರುಗಿತು. ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆ ಪಿಐ ಫೈಜುಲ್ಲಾ ಹಾಗೂ ಪಟ್ಟಣ ಠಾಣೆ ಮತ್ತು ಸಂಚಾರಿ ಠಾಣೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ, ಆಸ್ಪತ್ರೆಗೆ ಕಳುಹಿಸಿಕೊಟ್ಟರು.





























