
ಹೊಸಪೇಟೆ.ಮೇ.೨೮ – ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೂ, ಕಾಂಗ್ರೆಸ್ ನಲ್ಲಿನ ಅಧಿಕಾರ ಸಂಘರ್ಷ ಅಷ್ಟು ಬೇಗ ಮುಗಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ತಾಲೂಕಿನ ಕಮಲಾಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆಯೋಜಿಸಲಾಗರುವ ಪಂ.ದೀನ ದಯಾಳು ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿನ ಆಂತರೀಕ ಕಚ್ಚಾಟದಿಂದ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಬಿದ್ದಿದೆ. ಕಳೆದ ೨-೩ ದಿನಗಳಿಂದ ನಡೆಯುತ್ತಿರುವ ಬೆಳೆವಣಿಗೆಗಗಳನ್ನು ಗಮನಿಸಿದರೆ, ಸಿಎಂ ರಾಜೀನಾಮೆ ನೀಡುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತೆಗೆದುಕೊಂಡ ನಂತರ ಇಂದು ಅಥವಾ ನಾಳೆ ರಾಜೀರಾಮೆ ಕೊಟ್ಟ ನಂತರ ರಾಜ್ಯದಲ್ಲಿ ಏನೇನು ಬೆಳವಣಿಗೆಗಳು ಆಗುತ್ತವೆ ಎಂಬುದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಯಾರಾಗಬೇಕು ಎಂಬ ಗೊಂದಲ ಮುಂದುವರೆಯಲಿದೆ. ಅಷ್ಟು ಬೇಗ ಉತ್ತರ ಕಂಡು ಕೊಳ್ಳುವ ಶಕ್ತಿ ಕಾಂಗ್ರೇಸ್ ಪಕ್ಷಕ್ಕೆ ಹಾಗೂ ಹೈಕಮಾಂಡ್ ಗೆ ಇದೆ ಅಂತ ನನಗೆ ಅನ್ನಿಸುತ್ತಿಲ್ಲ.
ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ವೈಖರಿ ಹೇಗಿದೆ ಎಂದರೆ ರಾಜ್ಯದಲ್ಲಿ ಆಡಳಿತಾತ್ಮಕವಾಗಿ ಹಾಗೂ ಆರ್ಥಿಕವಾಗಿ ನೆಲಕಚ್ಚಿದೆ. ಅರಾಜಕತೆ ಸೃಷ್ಟಿಯಾಗಿದೆ. ಆರ್ಥಿಕ ದಿವಾಳಿಯತ್ತ ಕರ್ನಾಟಕ ಸಾಗುತ್ತಿದೆ. ಭ್ರಷ್ಟಾಚಾರ ಹಾಗೂ ಆಡಳಿತದ ಕುಸಿತದಿಂದ ಸಾಮಾನ್ಯ ಜನ ಬೇಸತ್ತಿದ್ದಾರೆ. ರೈತರ ಸಮಸ್ಯೆ ಕೇಳಲು ಆಗುತ್ತಿಲ್ಲ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ರಸಗೊಬ್ಬರ ಸಮಸ್ಯೆ ಉಂಟು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಉಸ್ತುವಾರಿ ಸಚಿವರು, ಶಾಸಕರು ರೈತರ ಸಮಸ್ಯೆ ಕೇಳದೆ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಶಾಪವಾಗಿ ಪರಿಣಮಿಸಿದೆ.
ಜನರು ರಾಜ್ಯ ಸರ್ಕಾರದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಯಾರು ಮುಖ್ಯಮಂತ್ರಿ ಆದರೂ ರಾಜ್ಯದ ಪರಿಸ್ಥಿತಿ ಸುಧಾರಣೆ ಮಾಡುತ್ತಾರೆ ಎಂಬ ವಿಶ್ವಾಸ ನಮಗೂ ಇಲ್ಲ, ರಾಜ್ಯದ ಜನತೆಗೂ ಇಲ್ಲ ಎಂದರು.
ರಾಜ್ಯಪಾಲರ ಇಂದೂರು ಭೇಟಿ ವಿಚಾರ: ರಾಜ್ಯಪಾಲರನ್ನು ಭೇಟಿ ಮಾಡಲು ಸಿಎಂ ಸಮಯ ಕೇಳಿದ್ದರೆ ಅದು ಸಿಎಂ ಟಿಪಿ ಯಲ್ಲಿ ಉಲ್ಲೇಖವಾಗಿರುತ್ತದೆ. ಆದರೆ ಸಿಎಂ ಟಿಪಿ ಯಲ್ಲಿ ರಾಜ್ಯಪಾಲರ ಭೇಟಿ ವಿಚಾರ ಉಲ್ಲೇಖ ಆಗಿಲ್ಲ. ರಾಜ್ಯಪಾಲರು ಎಲ್ಲಿ ಹೋಗಿದ್ದರೆ ಎಂಬುದರ ಕುರಿತು ಮಾಹಿತಿ ಇಲ್ಲ.
ಹಸ್ತಕ್ಷೇಪ ಇಲ್ಲ: ಕಾಂಗ್ರೆಸ್ ಪಕ್ಷದಲ್ಲಿ ಆಗುತ್ತಿರುವ ಅಧಿಕಾರ ಕಿಚ್ಚಾಟದಲ್ಲಿ ಬಿಜೆಪಿ ಹಸ್ತಕ್ಷೇಪ ಮಾಡಲ್ಲ. ಆಡಳಿತ ಪಕ್ಷ ಕಾಂಗ್ರೆಸ್ ಗೆ ೧೩೮ ಶಾಸಕರ ಸ್ಪಷ್ಟ ಬೆಂಬಲ ಇದೆ. ಇದರಲ್ಲಿ ಬಿಜೆಪಿ ಎನು ರಾಜಕೀಯ ಮಾಡಲು ಸಾಧ್ಯವಿದೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. ನಮಗೆ ವಿರೋಧ ಪಕ್ಷದ ಸ್ಥಾನ ನೀಡಿದ್ದಾರೆ, ವಿರೋಧ ಪಕ್ಷವಾಗಿ ಬಿಜೆಪಿ ಎನು ಮಾಡಬೇಕೋ ಅದನ್ನು ನಾವು ಮಾಡುತ್ತೇವೆ. ಇದರಲ್ಲಿ ಮೂಗು ತೂರಿಸುವ ಪ್ರಶ್ನೆ ಇಲ್ಲ ಎಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಹಡಗಲಿ ಶಾಸಕ ಕೃಷ್ಣ ನಾಯಕ್, ಮುಖಂಡರಾದ ಚನ್ನಬಸವನಗೌಡ ಪಾಟೀಲ್, ಅಯ್ಯಾಳಿ ತಿಮ್ಮಪ್ಪ ಇದ್ದರು.


























