Home ಜಿಲ್ಲೆ ಕಲಬುರಗಿ ಮೌಲಾನಾ ತೌಸಿಫ್ ರಜಾ ಹತ್ಯೆ ಪ್ರಕರಣನ್ಯಾಯಕ್ಕಾಗಿ ಆಳಂದ್‌ನಲ್ಲಿ ತೀವ್ರ ಪ್ರತಿಭಟನೆ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಮೌಲಾನಾ ತೌಸಿಫ್ ರಜಾ ಹತ್ಯೆ ಪ್ರಕರಣನ್ಯಾಯಕ್ಕಾಗಿ ಆಳಂದ್‌ನಲ್ಲಿ ತೀವ್ರ ಪ್ರತಿಭಟನೆ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಕೆ

ಆಳಂದ:ಮೇ.೭: ಉತ್ತರ ಪ್ರದೇಶದ ಬರೇಲಿಯಲ್ಲಿ ಚಲಿಸುವ ರೈಲಿನಿಂದ ಎಸೆದು ಹತ್ಯೆ ಮಾಡಲಾಗಿದೆ ಎನ್ನಲಾದ ಮದರಸಾ ಶಿಕ್ಷಕ ಮೌಲಾನಾ ತೌಸಿಫ್ ರಜಾ ಮರ್ಹಾರಿ ಅವರ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ, ತಾಲೂಕ ಆಡಳಿತ ಸೌಧದ ಮುಂದೆ ಸುನಿ ಉಲ್ಮಾ ಈ ಕೌನ್ಸಿಲ್ ಸಂಘಟನೆಯ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಹೆಸರಿಗೆ ಸಂಬೋಧಿಸಿದ ಮನವಿಪತ್ರವನ್ನು ತಹಶೀಲ್ದಾರ್ ಅಣ್ಣಾರಾವ್ ಪಾಟೀಲ್ ಅವರ ಮೂಲಕ ನ್ಯಾಯ ಒದಗಿಸುವಂತೆ ಸಲ್ಲಿಸಿದರು.
ಬಿಹಾರದ ಕಿಶನ್‌ಗಂಜ್‌ನ ಮದರಸಾ ಶಿಕ್ಷಕ ಮತ್ತು ಇಮಾಮ್ ಆಗಿದ್ದ ಮೌಲಾನಾ ತೌಸಿಫ್ ರಜಾ ಮರ್ಹಾರಿ ಅವರ ಶವ ಏಪ್ರಿಲ್ ೨೬, ೨೦೨೬ ರಂದು ಉತ್ತರ ಪ್ರದೇಶದ ಬರೇಲಿ ರೈಲು ನಿಲ್ದಾಣದ ಬಳಿ ರೈಲು ಹಳಿಗಳ ಮೇಲೆ ಪತ್ತೆಯಾಯಿತು. ಸ್ಥಳೀಯ ಪೊಲೀಸರು ಇದನ್ನು ಆಕಸ್ಮಿಕ ಘಟನೆ ಎಂದು ಹೇಳಿದ್ದರೂ, ಮೃತರ ಕುಟುಂಬ ಇದನ್ನು ತೀವ್ರವಾಗಿ ಅಲ್ಲಗಳೆದಿದೆ.
ಮೃತರು ಕೊನೆಯ ಬಾರಿ ದೂರವಾಣಿ ಕರೆ ಮಾಡಿದಾಗ ತಮ್ಮ ಮೇಲೆ ಅಪರಿಚಿತರು ಗುಂಪು ಹಲ್ಲೆ ನಡೆಸುತ್ತಿದ್ದಾರೆ ಎಂದು ಭಯಭೀತರಾಗಿ ತಿಳಿಸಿದ್ದಾರೆ ಎಂದು ಕುಟುಂಬದವರು ಹೇಳಿದ್ದಾರೆ. ಚಲಿಸುವ ರೈಲಿನಿಂದ ಉದ್ದೇಶಪೂರ್ವಕವಾಗಿ ಎಸೆದು ಹತ್ಯೆ ಮಾಡಲಾಗಿದೆ ಎಂಬುದು ಕುಟುಂಬದ ಗಂಭೀರ ಆರೋಪವಾಗಿದೆ ಎಂದು ಮುಖಂಡರು ಹೇಳಿದರು.
ಪ್ರಕರಣದ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು. ದೋಷಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಮೃತರ ಕುಟುಂಬಕ್ಕೆ ೫೦ಲಕ್ಷ ರೂಪಾಯಿ ಸೂಕ್ತ ಪರಿಹಾರ ಮತ್ತು ರಕ್ಷಣೆ ನೀಡಬೇಕು. ದೇಶದಲ್ಲಿ ಕೋಮು ಸಾಮರಸ್ಯ ಕಾಪಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಘಟನೆ ಇಡೀ ದೇಶದ ನಾಗರಿಕರಲ್ಲಿ ಭಯ ಮತ್ತು ಆತಂಕ ಮೂಡಿಸಿದೆ. ಇಂತಹ ಘಟನೆಗಳು ನಡೆಯುತ್ತಲೇ ಇದ್ದರೆ ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆ ಬರಲಿದೆ. ರಾಷ್ಟ್ರಪತಿಗಳು ಸ್ವತಃ ಮಧ್ಯಪ್ರವೇಶಿಸಿ ತ್ವರಿತ ನ್ಯಾಯ ದೊರಕಿಸಿಕೊಡಬೇಕೆಂದು ಸಂಘಟನೆಯ ನಾಯಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡರು ಸೇರಿದಂತೆ ಅಬ್ದುಲ್ ಸಲಾಂ ಸಗರಿ, ಭಾಕರ್‌ಅಲಿ ಜಮಾದಾರ, ಮೌಲಾ ಮುಲ್ಲಾ ಸೇರಿದಂತೆ ಸಮುದಾಯ ಅನೇಕರು ಭಾಗವಹಿಸಿದ್ದರು.