Home ಜಿಲ್ಲೆ ಗೇಟ್ ನಿರ್ವಹಣೆ ಮರೆತ ಅಧಿಕಾರಿಗಳಿಗೆ ಮುದ್ನಾಳ್ ತರಾಟೆ

ಗೇಟ್ ನಿರ್ವಹಣೆ ಮರೆತ ಅಧಿಕಾರಿಗಳಿಗೆ ಮುದ್ನಾಳ್ ತರಾಟೆ

ಸೈದಾಪುರ:ಮಹಾರಾಷ್ಟ್ರ ಭಾಗದಿಂದ ಭೀಮಾ ನದಿಗೆ ನೀರಿನ ಹರಿವು ಏಕಾಏಕಿ ಹೆಚ್ಚಾದ ಹಿನ್ನೆಲೆಯಲ್ಲಿ ಗೂಡೂರು-ಜೋಳದಡಗಿ ಬ್ರಿಜ್ ಕಂ ಬ್ಯಾರೇಜ ಗೇಟಗಳನ್ನು ಸರಿಯಾದ ಸಮಯಕ್ಕೆ ತೆರೆಯದ ಪರಿಣಾಮ ಸುಮಾರು 35ರಿಂದ 40 ಎಕರೆ ಕೃಷಿ ಜಮೀನು ಹಾಗೂ ಪಂಪ್‍ಸೆಟ್‍ಗಳು ಜಲಾವೃತಗೊಂಡಿವೆ. ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಅವರು ಹಾನಿಗೊಳಗಾದ ಜಮೀನು ಹಾಗೂ ಪಂಪ್‍ಸೆಟ್‍ಗಳನ್ನು ಪರಿಶೀಲಿಸಿ, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಭತ್ತದ ಬೆಳೆ, ಪಂಪ್‍ಸೆಟ್ ಹಾಗೂ ಕೃಷಿ ಉಪಕರಣಗಳ ಹಾನಿಯನ್ನು ತಕ್ಷಣ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನೀರಿನ ಹರಿವು ಹೆಚ್ಚಾಗುವ ಸಂದರ್ಭದಲ್ಲಿ ಅಧಿಕಾರಿಗಳು ಶಿಫ್ಟ್‍ವೈಸ್ ಕರ್ತವ್ಯ ನಿರ್ವಹಿಸಿ, ಬ್ಯಾರೇಜ್ ನೀರಿನ ಮಟ್ಟವನ್ನು ನಿರಂತರವಾಗಿ ಗಮನಿಸಿ ಅಗತ್ಯವಿದ್ದಾಗ ಗೇಟ್‍ಗಳನ್ನು ತೆರೆಯಬೇಕು. ಪ್ರತಿವರ್ಷ ಎದುರಾಗುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಮುದ್ನಾಳ್ ಅವರ ಮಧ್ಯಸ್ಥಿಕೆಯಿಂದ ಸಂಬಂಧಿಸಿದ ಅಧಿಕಾರಿಗಳು ಬ್ಯಾರೇಜ್‍ನ ಮೂರು ಗೇಟ್‍ಗಳನ್ನು ತೆರೆಯಿಸಿ ನೀರು ಹರಿಬಿಟ್ಟಿದ್ದು, ಹಿನ್ನೀರಿನ ಒತ್ತಡ ಕಡಿಮೆಯಾಗುವ ನಿರೀಕ್ಷೆ ಮೂಡಿದೆ.
ಈ ಸಂದರ್ಭದಲ್ಲಿ ಗೂಡೂರು ಹಾಗೂ ಜೋಳದಡಿಗಿ ಗ್ರಾಮಸ್ಥರಾದ ಸಿದ್ದಲಿಂಗ ಪೂಜಾರಿ, ಆರೀಫ್ ಪಟೇಲ್, ಶಿವಶಂಕರ್, ಉಮರ್, ಬಸ್ಸು, ಯಲ್ಲಾಲಿಂಗ, ಶಮೀರ್, ಇಂದ್ರಕುಮಾರ, ಜಾಮೀರ್, ರಿಯಾಜ್, ಜಿಲಾನಿ, ಅಜ್ಮೀರ್, ಶೇಕಾಪ್ಪ, ಹಣಮಂತ ಮುಲೆಮನಿ, ಶಮೀರ್ ಕೌಳೂರು, ಬೀರಲಿಂಗಪ್ಪ ಕಿಲ್ಲನಕೇರಾ, ಬಸವರಾಜ ಕಿಲ್ಲನಕೇರಾ, ಮಲ್ಲೇಶ, ಹಣಮಂತ ವರ್ಕನಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.