Home ಕ್ರೈಂ ಸುದ್ದಿಗಳು ಅರಣ್ಯದಲ್ಲಿ ಬೇಟೆ: ನಾಡಬಂದೂಕುಗಳ ಸಮೇತ 7 ಮಂದಿ ಸೆರೆ

ಅರಣ್ಯದಲ್ಲಿ ಬೇಟೆ: ನಾಡಬಂದೂಕುಗಳ ಸಮೇತ 7 ಮಂದಿ ಸೆರೆ

ಯಾದಗಿರಿ: ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು, ಆರೋಪಿಗಳಿಂದ ಆರು ನಾಡಬಂದೂಕುಗಳು, ನವಿಲಿನ ಮಾಂಸ, ಜೀವಂತ ಆಮೆಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಯಾದಗಿರಿ ಪ್ರಾದೇಶಿಕ ಅರಣ್ಯ ವಲಯದ ಅರಕೇರಾ (ಕೆ) ಶಾಖೆಯ ಮೋಟ್ನಳ್ಳಿ ಗಸ್ತಿನ ಬಗ್ಗಲುಮಡು ಸೆಕ್ಷನ್-4ರ ಸರ್ವೇ ನಂ. 20.300ರ ಅರಣ್ಯ ಪ್ರದೇಶದಲ್ಲಿ ಸೆ.11ರ ರಾತ್ರಿ ಈ ಕಾರ್ಯಾಚರಣೆ ನಡೆದಿದೆ.

ಅರಣ್ಯ ಇಲಾಖೆ ಕಚೇರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಸಿಬ್ಬಂದಿ ಇಲಾಖೆಯ ವಾಹನದಲ್ಲಿ ರಾತ್ರಿ ಗಸ್ತು ನಡೆಸುತ್ತಿದ್ದರು. ಈ ವೇಳೆ ಅರಣ್ಯ ಪ್ರದೇಶದಲ್ಲಿ ಜನರ ಗುಂಪಿನ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಅನುಮಾನಗೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಏಳು ಮಂದಿ ಕಂಡುಬಂದಿದ್ದಾರೆ.

ವಿಚಾರಣೆ ವೇಳೆ ಆರೋಪಿಗಳು ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳನ್ನು ಬೇಟೆಯಾಡಿರುವುದಾಗಿ ತಿಳಿಸಿದ್ದಾರೆ ಎಂದು ಅರಣ್ಯ ಇಲಾಖೆ ದಾಖಲೆಯಲ್ಲಿ ತಿಳಿಸಲಾಗಿದೆ. ಸ್ಥಳದಲ್ಲಿ ಎರಡು ನವಿಲುಗಳನ್ನು ಬೇಟೆಯಾಡಿ ಸುಟ್ಟಿರುವುದು ಹಾಗೂ ಅವುಗಳ ಮಾಂಸ ಪತ್ತೆಯಾಗಿದ್ದು, ಎರಡು ಜೀವಂತ ಆಮೆಗಳು ಸೇರಿದಂತೆ ವನ್ಯಜೀವಿಗಳನ್ನು ಹಿಡಿದಿರುವುದು ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಂಧಿತರನ್ನು ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಬೀಮನಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನಿಂಗಪ್ಪ, ವಾಸುದೇವ, ಕರೇಪ್ಪ, ಕಾಂತಪ್ಪ, ಯಲ್ಲಾಲಿಂಗ, ಬಸವರಾಜ ಹಾಗೂ ಮಲ್ಲಪ್ಪ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಕೂಲಿ ಕಾರ್ಮಿಕರು ಎಂದು ಅರಣ್ಯ ಇಲಾಖೆ ದಾಖಲೆಯಲ್ಲಿ ತಿಳಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಎರಡು ನವಿಲುಗಳ ಮಾಂಸ, 12 ಜೀವಿಗಳು, ಎರಡು ಜೀವಂತ ಆಮೆಗಳು, ಎರಡು ಟಾರ್ಚ್‍ಗಳು, ಒಂದು ಕೊಡಲಿ, ಆರು ನಾಡಬಂದೂಕುಗಳು, ಗನ್‍ಪೌಡರ್‍ಗೆ ಸಂಬಂಧಿಸಿದ ವಸ್ತುಗಳು, ಮಾಂಸ ಬೇಯಿಸಲು ಬಳಸಿದ ಮಣ್ಣಿನ ಮಡಿಕೆ, ಸ್ಟೀಲ್ ಪ್ಲೇಟ್‍ಗಳು ಹಾಗೂ ಏಳು ಮೊಬೈಲ್ ಫೆÇೀನ್‍ಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ.

ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972, ಕರ್ನಾಟಕ ಅರಣ್ಯ ಕಾಯ್ದೆ ಹಾಗೂ ಆಯುಧ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ವಲಯ ಅರಣ್ಯಾಧಿಕಾರಿ ಬುರಾನುದ್ದೀನ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಹಂದ್ರಾಳ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.