
ಬೀದರ:ಮೇ.27: ಗುರುನಾನಕ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 120 ರೋಗಿಗಳ ಕಿಡ್ನಿ ಡಯಾಲಿಸಿಸ್ ಮಾಡಲಾಗುತ್ತಿದೆ. ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಹೊಂದಿದ್ದು, ನುರಿತ ಮತ್ತು ಅನುಭವಿ ವೈದ್ಯರು ನಮ್ಮಲ್ಲಿದ್ದಾರೆ. ಬೀದರ ಜನತೆಗೆ ಆರೋಗ್ಯ ಸೇವೆ ಒದಗಿಸುವುದೇ ನಮ್ಮ ಮೂಲ ಗುರಿಯಾಗಿದೆ ಎಂದು ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಡಾ. ರೇಷ್ಮಾ ಕೌರ್ ತಿಳಿಸಿದರು.
ನಗರದ ಗುರುನಾನಕ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ನಾಲ್ಕು ಕಿಡ್ನಿ ಡಯಾಲಿಸಿಸ್ ಯಂತ್ರಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಇಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಲು ಬೆಂಗಳೂರಿನ ಕಿಡ್ನಿ ಫೌಂಡೇಶನ್ ಹಾಗೂ ರೋಟರಿ ಕ್ಲಬ್ ಆಫ್ ಸಿಲ್ವರ್ ಸ್ಟಾರ್ ಪ್ರಮುಖವಾಗಿ ಸಹಕರಿಸಿದೆ. ಈ ಹಿಂದೆ ನಮ್ಮ ತಂದೆ ಕಿಡ್ನಿ ಸಮಸ್ಯೆಯಿಂದ ಬಳಲುತಿದ್ದರು. ಅವರೂ ಕೂಡಾ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು. ಅಂದಿನಿಂದ ಬೀದರನಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸುವ ಕನಸು ಕಂಡಿದ್ದೆ. ಅದು ಇದೀಗ ಸಾಕಾರಗೊಂಡಿದೆ ಎಂದರು. ಮೊದಲು ಹೈದರಾಬಾದ ಮತ್ತು ಸೋಲಾಪುರ ಕಡೆಗೆ ಹೋಗಿ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದರು. ಈ ಅನಿವಾರ್ಯತೆಯನ್ನು ಗುರುನಾನಕ ಆಸ್ಪತ್ರೆ ದೂರ ಮಾಡಿದೆ. ನಮ್ಮನ್ನು ನಾವು ಬೆಳೆಯುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆಧುನಿಕ ವೈದ್ಯಕೀಯ ಯಂತ್ರೋಪಕರಣಗಳನ್ನು ತಂದು ಈ ಭಾಗದ ರೋಗಿಗಳ ಚಿಕಿತ್ಸೆಯನ್ನು ಮಾಡಲಾಗುವುದು ಎಂದು ಕೌರ್ ಪ್ರತಿಪಾದಿಸಿದರು.
ಬೆಂಗಳೂರಿನ ಕಿಡ್ನಿ ಫೌಂಡೇಶನ್ ಅಧ್ಯಕ್ಷ ಶ್ರೀರಾಮ್ ಮಾತನಾಡಿ ಬೀದರ ಜಿಲ್ಲೆಯೂ ಇಂದು ಎಲ್ಲಾ ರಂಗಗಳಲ್ಲಿ ಮುಂದಡಿ ಇಡುತ್ತಿದೆ. ಆಧುನಿಕ ಯಂತ್ರೋಪಕರಣ ಬಳಸುವ ಮೂಲಕ ರೋಗಿಗಳಿಗೆ ಗುರುನಾನಕ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಗುರುನಾನಕ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸರ್ದಾರ್ ಡಾ. ಬಲಬೀರಸಿಂಗ್, ರೋಟರಿ ಕ್ಲಬ್ ಗ್ರಾಮೀಣ ಯೋಜನೆಗಳ ಬೆಂಗಳೂರಿನ ವಸಂತ ಚಂದ್ರ, ಕಲ್ಯಾಣ ಝೋನ್ ರೋಟರಿ ಕ್ಲಬ್ನ ಗವರ್ನರ್ ಹಾವಶೆಟ್ಟಿ ಪಾಟೀಲ, ಸರ್ದಾರ್ ಪುನೀತ್ಸಿಂಗ್, ಸರ್ದಾರ ಪವಿತ್ಸಿಂಗ್, ರೋಟರಿ ಪಬ್ಲಿಕ್ ಇಮೇಜ್ನ ಅಧ್ಯಕ್ಷ ಬಸವರಾಜ ಧನ್ನೂರ, ಪೂಜಾ ಸ್ಯಾಮುಯೆಲ್ ಜಾರ್ಜ್, ಗುರುನಾನಕ ಆಸ್ಪತ್ರೆಯ ಸಿಇಓ ಕಾಮೇಶ್ವರರಾವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.























