
ನವದೆಹಲಿ. ಜು. ೧೨- ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ದೇಶದ ವ್ಯೂಹಾತ್ಮಕ ಕ್ಷಿಪಣಿ ಉತ್ಪಾದನಾ ವಲಯವನ್ನು ಖಾಸಗಿ ರಂಗಕ್ಕೆ ಮುಕ್ತಗೊಳಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ.
ಅತ್ಯಾಧುನಿಕ ಅಸ್ತ್ರ ಮಾರ್ಕ್-೨ ಕ್ಷಿಪಣಿಗಳ ಜಂಟಿ ಅಭಿವೃದ್ಧಿ ಮತ್ತು ಮುಕ್ತ ಉತ್ಪಾದನೆಗಾಗಿ ಖಾಸಗಿ ಕಂಪನಿಗಳು ಹಾಗೂ ಪ್ರಮುಖ ಕೈಗಾರಿಕಾ ಒಕ್ಕೂಟಗಳನ್ನು ಆಹ್ವಾನಿಸಲು ಸಚಿವಾಲಯವು ಶೀಘ್ರದಲ್ಲೇ ಪ್ರಸ್ತಾವನೆ ವಿನಂತಿ ಪತ್ರವನ್ನು ಹೊರಡಿಸಲಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾ ಸೇರಿದಂತೆ ಹಲವು ಸ್ನೇಹಪರ ರಾಷ್ಟ್ರಗಳು ಭಾರತೀಯ ಕ್ಷಿಪಣಿಗಳನ್ನು ಖರೀದಿಸಲು ತೀವ್ರ ಆಸಕ್ತಿ ತೋರಿಸುತ್ತಿರುವುದು ಹಾಗೂ ಸಾರ್ವಜನಿಕ ವಲಯದ ಏಕೈಕ ಉತ್ಪಾದನಾ ಸಂಸ್ಥೆಯಾದ ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡುವುದು ಈ ನಿರ್ಧಾರದ ಹಿಂದಿನ ಮುಖ್ಯ ಉದ್ದೇಶವಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿರುವ, ದೃಷ್ಟಿಗೋಚರ ವ್ಯಾಪ್ತಿಯ ಆಚೆಗಿನ ೧೮೦ ಕಿಲೋಮೀಟರ್ಗೂ ಅಧಿಕ ದೂರದ ಗುರಿ ಧ್ವಂಸ ಮಾಡುವ ಅಸ್ತ್ರ ಮಾರ್ಕ್-೨ ಕ್ಷಿಪಣಿ ತಯಾರಿಕೆಗೆ ಟಾಟಾ ಗ್ರೂಪ್, ಮಹೀಂದ್ರಾ ಗ್ರೂಪ್, ಅದಾನಿ, ಭಾರತ್ ಫೋರ್ಜ್ ಮತ್ತು ಐಕಾಮ್ ನಂತಹ ಪ್ರಮುಖ ಖಾಸಗಿ ರಕ್ಷಣಾ ವಲಯದ ದೈತ್ಯ ಸಂಸ್ಥೆಗಳು ರೇಸ್ನಲ್ಲಿವೆ. ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ್ ಅವಧಿಯಲ್ಲಿ ಚೀನಾ ದೇಶವು ಪಾಕಿಸ್ತಾನಕ್ಕೆ ಪೂರೈಸಿದ್ದ ಪಿಎಲ್-೧೫ ಇ (ಪಿಎಲ್-೧೫ ಇ) ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಿಗೆ ಪ್ರತಿಯಾಗಿ ಈ ಅಸ್ತ್ರ ಮಾರ್ಕ್-೨ ಅನ್ನು ಸಜ್ಜುಗೊಳಿಸಲಾಗುತ್ತಿದೆ. ಇದನ್ನು ತೇಜಸ್ ಮಾರ್ಕ್ ೧-ಎ, ಮಿಗ್-೨೯, ಸುಖೋಯ್-೩೦ ಎಂಕೆಯಿ ಹಾಗೂ ರಫೇಲ್ ಮೆರಿನ್ ಯುದ್ಧವಿಮಾನಗಳಲ್ಲಿ ಅಳವಡಿಸಲಾಗುವುದು.
ಮುಂದಿನ ಸರದಿಯಲ್ಲಿ ಪ್ರಳಯ್ ಕ್ಷಿಪಣಿ
ವಿಶ್ವಾಸನೀಯ ಮೂಲಗಳ ಪ್ರಕಾರ, ಅಸ್ತ್ರ ಕ್ಷಿಪಣಿಯ ನಂತರ ೫೦೦ ಕಿ.ಮೀ ವ್ಯಾಪ್ತಿಯ ದ್ವಿ-ಹಂತದ ತಾಂತ್ರಿಕ ಬ್ಯಾಲಿಸ್ಟಿಕ್ ಕ್ಷಿಪಣಿಯಾದ ಪ್ರಳಯ್ ಅನ್ನು ಸಹ ಖಾಸಗಿ ವಲಯದ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಮತ್ತು ಉತ್ಪಾದಿಸಲು ಸರ್ಕಾರ ಯೋಜಿಸಿದೆ. ಶಬ್ದದ ವೇಗಕ್ಕಿಂತ ೬ ಪಟ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿರುವ ಪ್ರಳಯ್, ಭಾರತದ ಸಮಗ್ರ ರಾಕೆಟ್ ಪಡೆಗಳ ಬಲವನ್ನು ಹೆಚ್ಚಿಸಲಿದೆ.
ಉಪಖಂಡದಲ್ಲಿ ಹೆಚ್ಚುತ್ತಿರುವ ಪ್ರಾದೇಶಿಕ ಉದ್ವಿಗ್ನತೆ ಮತ್ತು ಇರಾನ್-ಅಮೆರಿಕ ಸಂಘರ್ಷದ ಹಿನ್ನೆಲೆಯಲ್ಲಿ ಮೂಲಸೌಕರ್ಯಗಳ ರಕ್ಷಣೆಗೆ ಭಾರತ ಹೆಚ್ಚಿನ ಆದ್ಯತೆ ನೀಡುತ್ತಿದೆ.ಡ್ರೋನ್ ದಾಳಿಗಳನ್ನು ತಡೆಯಲು ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ದೀರ್ಘ ವ್ಯಾಪ್ತಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತಿವೆ.
ಇದೇ ನವೆಂಬರ್ ತಿಂಗಳಿನಲ್ಲಿ ರಷ್ಯಾದಿಂದ ೫ನೇ ಎಸ್-೪೦೦ (ಎಸ್-೪೦೦) ವಾಯು ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬರಲಿದ್ದು, ಗಡಿಯಲ್ಲಿ ಶತ್ರುಗಳ ಕ್ಷಿಪಣಿ ಹಾಗೂ ಕಾಮಿಕಾಜೆ ಡ್ರೋನ್ಗಳನ್ನು ಹೊಡೆದುರುಳಿಸಲು ಹೆಚ್ಚುವರಿಯಾಗಿ ಮತ್ತೂ ೫ ಎಸ್-೪೦೦ ವ್ಯವಸ್ಥೆಗಳನ್ನು ಖರೀದಿಸಲು ಮೋದಿ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಯಿದೆ.
ಖಾಸಗಿ ರಂಗದ ಪ್ರವೇಶದಿಂದಾಗಿ ಭಾರತೀಯ ಸಶಸ್ತ್ರ ಪಡೆಗಳ ಕ್ಷಿಪಣಿ ಅಗತ್ಯತೆಗಳನ್ನು ವೇಗವಾಗಿ ಪೂರೈಸಲು ಮತ್ತು ಜಾಗತಿಕ ರಕ್ಷಣಾ ರಫ್ತು ಮಾರುಕಟ್ಟೆಯಲ್ಲಿ ಭಾರತದ ಪಾಲನ್ನು ಹೆಚ್ಚಿಸಲು ಹೊಸ ಉತ್ತೇಜನ ಸಿಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
































