Home ಜಿಲ್ಲೆ ಕಲಬುರಗಿ ಬಸವ ತತ್ವವೇ ವಿಶ್ವಶಾಂತಿಯ ಮಾರ್ಗ; ಬುದ್ಧ-ಬಸವ-ಭಾರತ ಸಮನ್ವಯಕ್ಕೆ ಜಯಮೃತ್ಯುಂಜಯ ಶ್ರೀ ಕರೆ

ಬಸವ ತತ್ವವೇ ವಿಶ್ವಶಾಂತಿಯ ಮಾರ್ಗ; ಬುದ್ಧ-ಬಸವ-ಭಾರತ ಸಮನ್ವಯಕ್ಕೆ ಜಯಮೃತ್ಯುಂಜಯ ಶ್ರೀ ಕರೆ

ಆಳಂದ್:ಜೂ.26: ಬಸವಣ್ಣನವರು ಕಟ್ಟಿದ ಕಲ್ಯಾಣ ರಾಜ್ಯದ ಮಾದರಿ ಇಂದಿಗೂ ಜಗತ್ತಿನ ಮೆಚ್ಚುಗೆಗೆ ಪಾತ್ರವಾಗಿದ್ದು, ಕಾಯಕ-ದಾಸೋಹ-ಸಮಾನತೆ ಹಾಗೂ ಬಂಧುತ್ವದ ಮೌಲ್ಯಗಳ ಮೂಲಕ ಅವರು ನಿರ್ಮಿಸಿದ ಮಾನವೀಯ ನಾಗರಿಕತೆ ಇಂದಿನ ಯುದ್ಧ ಮತ್ತು ಅಶಾಂತಿಗ್ರಸ್ತ ವಿಶ್ವಕ್ಕೆ ದಾರಿದೀಪವಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಪಟ್ಟಣದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಲಾದ ಬಸವ ಸಂಗಮ ಶೋಭಾಯಾತ್ರೆ ಹಾಗೂ ಶ್ರೀರಾಮ್ ಮಾರುಕಟ್ಟೆ ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ವಚನ ಸಾಹಿತ್ಯ ಕೇವಲ ಧಾರ್ಮಿಕ ಪಠ್ಯವಲ್ಲ; ಅದು ಮಾನವ ಜನಾಂಗದ ಅಂತರಂಗ ಶುದ್ಧಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
‘371(ಜೆ) ಭೌತಿಕ ಕಲಂ; 770 ಶರಣರ ವಚನ ಆತ್ಮದ ಕಲಂ’
ಕಲ್ಯಾಣ ಕರ್ನಾಟಕದ ಭೌತಿಕ ಅಭಿವೃದ್ಧಿಗೆ ಸಂವಿಧಾನದ 371(ಜೆ) ವಿಧಿ ಆಧಾರವಾಗಿದ್ದರೆ, ಅಂತರಂಗದ ಅಭಿವೃದ್ಧಿಗೆ 770 ಶರಣರ ವಚನ ಸಾಹಿತ್ಯವೇ ಆತ್ಮದ ಕಲಂ ಎಂದು ಮಹಾಸ್ವಾಮಿಗಳು ಅರ್ಥಪೂರ್ಣವಾಗಿ ಹೇಳಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಎ.ವಿ. ಪಾಟೀಲ್, ಭೀಮಣ್ಣ ಖಂಡ್ರೆ ಮೊದಲಾದ ಮಹನೀಯರ ತ್ಯಾಗ-ಬಲಿದಾನವನ್ನು ಸ್ಮರಿಸಿದ ಅವರು, ಈ ನೆಲದ ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಎರಡೂ ಅಗತ್ಯವೆಂದು ತಿಳಿಸಿದರು.
ಅಜ್ಞಾನದಿಂದ ಸುಜ್ಞಾನದೆಡೆಗೆ, ಮೌಢ್ಯದಿಂದ ವೈಚಾರಿಕತೆಯೆಡೆಗೆ ಸಾಗುವ ಪ್ರಕ್ರಿಯೆಯೇ ನಿಜವಾದ ಅಂತರಂಗ ಕ್ರಾಂತಿ ಎಂದು ಹೇಳಿದ ಅವರು, ಬಸವಣ್ಣನವರು ಜನಸಾಮಾನ್ಯರ ಭಾμÉಯಲ್ಲಿ ವಚನ ಧರ್ಮವನ್ನು ನೀಡಿದ್ದು ಆತ್ಮಾವಲೋಕನಕ್ಕೆ ದಾರಿ ತೋರಲು ಎಂದರು.
‘ಯುದ್ಧಪೀಡಿತ ವಿಶ್ವಕ್ಕೆ ಬಸವ ಮಾರ್ಗವೇ ಉತ್ತರ’
ಇಂದು ವಿಶ್ವದಾದ್ಯಂತ ಯುದ್ಧದ ಕಾರ್ಮೋಡ ಆವರಿಸಿದೆ. ಪ್ರಬಲ ರಾಷ್ಟ್ರಗಳು ದುರ್ಬಲ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡುತ್ತಿವೆ. ಧರ್ಮ ಮತ್ತು ಮತದ ಹೆಸರಿನಲ್ಲಿ ಅಶಾಂತಿ ತಾಂಡವಾಡುತ್ತಿದೆ. ಇಂತಹ ಸಂದರ್ಭಕ್ಕೆ ಬಸವ ತತ್ವವೇ ಸಮಂಜಸ ಉತ್ತರ ಎಂದು ಜಯಮೃತ್ಯುಂಜಯ ಶ್ರೀ ದಿಟ್ಟವಾಗಿ ಹೇಳಿದರು.
ಜಗತ್ತಿನ ಅನೇಕ ರಾಷ್ಟ್ರಗಳು ಬಸವ ತತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಬಸವಣ್ಣನವರು ನಿಜವಾದ ವಿಶ್ವನಾಯಕ ಎಂದು ಬಣ್ಣಿಸಿದ ಅವರು, ಒಟ್ಟಾಗಿ ಬದುಕುವ ಪಾಠವನ್ನು ಶತಮಾನಗಳ ಹಿಂದೆಯೇ ಬಸವಣ್ಣ ಜಗತ್ತಿಗೆ ಕಲಿಸಿದ್ದಾರೆ ಎಂದರು.
‘ಬುದ್ಧ-ಬಸವ-ಭಾರತ’ ಸಮನ್ವಯದಿಂದ ಬಲಿಷ್ಠ ಭಾರತ
ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಸಕಾಲದಲ್ಲಿ ಬಸವ ತತ್ವ ಸಮರ್ಪಕವಾಗಿ ತಲುಪಿದ್ದರೆ, ಬುದ್ಧ ತತ್ವ ಮತ್ತು ಬಸವ ತತ್ವ ಒಂದಾಗಿ ಭಾರತ ಇನ್ನಷ್ಟು ಶಕ್ತಿಶಾಲಿಯಾಗುತ್ತಿತ್ತು ಎಂದು ಅಭಿಪ್ರಾಯಪಟ್ಟ ಮಹಾಸ್ವಾಮಿಗಳು, ಇನ್ನೂ ಕಾಲ ಮಿಂಚಿಲ್ಲ; “ಬುದ್ಧ-ಬಸವ-ಭಾರತ” ಸಮನ್ವಯದ ಮೂಲಕ ಬಲಿಷ್ಠ ಭಾರತ ನಿರ್ಮಿಸೋಣ ಎಂದು ಕರೆ ನೀಡಿದರು.
ಕೃಷಿಕನ ಜೀವನ ಹಸನಾಗಿಸಲು ಕಾಯಕ-ದಾಸೋಹ ತತ್ವವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ದೈನಂದಿನ ಬದುಕಿನಲ್ಲಿ ಅನುμÁ್ಠನಗೊಳಿಸಬೇಕೆಂದು ಅವರು ಹೇಳಿದರು.
ಮಾತಾಜಿ, ಶಿವಾಚಾರ್ಯರ ಸಂದೇಶ
ಕಾರವಾರದ ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಮಾತನಾಡಿ, ಬಸವಣ್ಣನವರು ಸಾಮಾಜಿಕ ನ್ಯಾಯವನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ದಾರ್ಶನಿಕರು. ದುಶ್ಚಟಗಳಿಂದ ದೂರವಿದ್ದು ಇಷ್ಟಲಿಂಗ, ಕಾಯಕ ಮತ್ತು ವಚನ ಸಾಹಿತ್ಯದ ಮಾರ್ಗದಲ್ಲಿ ನಡೆಯಬೇಕು ಎಂದರು.
ಪಡಸಾವಳಿ ಡೋಣಗಾಂವ ಮಠದ ಡಾ. ಶಂಭುಲಿಂಗ ಶಿವಾಚಾರ್ಯರು ಬಸವಣ್ಣನವರ ಕಾರ್ಯಗಳನ್ನು ಕೊಂಡಾಡಿದರು.
ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹಾಗೂ ಗೋಳಾ ಮಠದ ಶ್ರೀಗಳು ಸಹ ಮಾತನಾಡಿದರು.
ವೇದಿಕೆಯಲ್ಲಿ ಹೋದಲೂರಿನ ಋಷಬೇಂದ್ರ ಶ್ರೀ, ಮಾಡಿಯಾಳ, ನಿಂಬರಗಾ, ಬಂಗರಗಾ, ಮರೋಣಾ ಸೇರಿದಂತೆ ಅನೇಕ ಶ್ರೀಗಳು ಉಪಸ್ಥಿತರಿದ್ದರು.
ತುಂತುರು ಮಳೆಯಲ್ಲೂ ವೈಭವದ ಶೋಭಾಯಾತ್ರೆ
ಈ ಮೊದಲು ನಡೆದ ಬಸವ ಸಂಗಮ ಶೋಭಾಯಾತ್ರೆ ತುಂತುರು ಮಳೆಯ ನಡುವೆಯೂ ಅಪಾರ ಜನಸಾಗರದೊಂದಿಗೆ ವೈಭವದಿಂದ ನೆರವೇರಿತು.
ಜಿಡಗಾ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಕೂಡಲಸಂಗಮ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳು ಶೋಭಾಯಾತ್ರೆಗೆ ಚಾಲನೆ ನೀಡಿದರು.
ಲಿಂಗಾಯತ ಭವನದಲ್ಲಿನ ಶ್ರೀ ಬಸವೇಶ್ವರ ಪ್ರತಿಮೆಯಿಂದ ಆರಂಭವಾದ ಮೆರವಣಿಗೆ ಬಸ್ ನಿಲ್ದಾಣ ಮುಖ್ಯರಸ್ತೆ ಮೂಲಕ ಶ್ರೀರಾಮ್ ಮಾರುಕಟ್ಟೆ ಮೈದಾನಕ್ಕೆ ತಲುಪಿ ಬೃಹತ್ ಸಮಾರಂಭದಲ್ಲಿ ವಿಲೀನವಾಯಿತು.
ಡೊಳ್ಳು ಕುಣಿತ, ಕಳಶ, ಜಾನಪದ ವೈಭವ
ಕುಂಭ-ಕಳಸ ಹೊತ್ತ ಮಹಿಳೆಯರ ಸಾಲು, ಬಣ್ಣಬಣ್ಣದ ಜಾನಪದ ನೃತ್ಯ ತಂಡಗಳು, ಡೊಳ್ಳು ಕುಣಿತದ ರಣಗರ್ಜನೆ, ಮಂಗಳ ವಾದ್ಯಗಳ ನಿನಾದದಿಂದ ಶೋಭಾಯಾತ್ರೆ ಅನನ್ಯ ಮೆರಗು ಪಡೆದುಕೊಂಡಿತು. ಬೀದಿಬದಿಯಲ್ಲಿ ನಿಂತು ಜನರು ಹೂಮಳೆ ಸುರಿಸಿ “ಶ್ರೀ ಬಸವಣ್ಣನ ಜಯಘೋಷ” ಮೊಳಗಿಸಿದರು.
ಮಾದನಪಹಿಪ್ಪರಗಿ ಮಠದ ಅಭಿನವ ಶಿವಲಿಂಗ ಮಹಾಸ್ವಾಮಿಗಳು, ನರೋಣ ಗುರುಮಾಂತ ಮಹಾ ಶ್ರೀ, ಸಿದ್ದೇಶ್ವರ ಶಿವಾಚಾರ್ಯರು ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.
ಮಾಜಿ ಶಾಸಕ ಸುಭಾμï ಗುತ್ತೇದಾರ್, ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹμರ್Áನಂದ್ ಗುತ್ತೇದಾರ್, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ಅರುಣಕುಮಾರ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡರು.
ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರ ಪಾಲ್ಗೊಳ್ಳಿಕೆ
ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜು ಶೇಗಜಿ, ನ್ಯಾಯವಾದಿ ಬಾಬಾಸಾಹೇಬ್ ಪಾಟೀಲ್, ಶ್ರೀಶೈಲ್ ಖಜೂರಿ, ಮಹೇಶ ಗೌಳಿ, ಮಲ್ಲಪ್ಪ ಹತ್ತರಕ್ಕಿ, ಗೌರಿ ಚಿಟ್ಕೋಟಿ, ಅಶೋಕ ಹತ್ತರಕಿ ತಂಬಕವಾಡಿ, ಗುರುಶರಣ ಪಾಟೀಲ್ ಕೊರಳ್ಳಿ, ಮಲ್ಲಿಕಾರ್ಜುನ ಕಂದಗುಳೆ, ಮಲ್ಲಿಕಾರ್ಜುನ ಸಾರವಾಡ, ದತ್ತ, ರಾಜ್ ಗುತ್ತೇದಾರ್, ರೇವಣಸಿದ್ಧಪ್ಪ ನಾಗೂರೆ, ಲಿಂಗರಾಜ್ ಪಾಟೀಲ್ ಕೆರ್, ಬಸವರಾಜ ಕೆರೂರ, ಉದ್ಯಮಿ ಶ್ರೀಶೈಲ ಸುತಾರ ಮುನ್ನೊಳ್ಳಿ, ರಾಜಶೇಖರ ಯಂಕಚಂಚಿ, ಮಲ್ಲಿಕಾರ್ಜುನ ತಡಕಲ್ ಸೇರಿದಂತೆ ಅನೇಕ ಗಣ್ಯರು, ಕಾರ್ಯಕರ್ತರು, ಮಹಿಳೆಯರು ಮತ್ತು ಅಭಿಮಾನಿಗಳು ಭಾಗವಹಿಸಿದ್ದರು.
ಒಟ್ಟಾರೆ
ತುಂತುರು ಮಳೆಯ ತಂಪಿನ ಮಡಿಲಲ್ಲಿ ನಡೆದ ಈ ಮಹೋತ್ಸವವು ಡೊಳ್ಳಿನ ಡಬ್ಬಳ, ಜಾನಪದ ನೃತ್ಯದ ಲಾಸ್ಯ, ಕಳಶಗಳ ಶೋಭೆ ಮತ್ತು ಸಾವಿರಾರು ಕಂಠಗಳ ಜಯಘೋಷದ ನಡುವೆ ವಿಶ್ವಗುರು ಬಸವಣ್ಣನ ಸಮಾನತೆ ಮತ್ತು ಮಾನವ ಪ್ರೇಮದ ತತ್ವಕ್ಕೆ ಆಳಂದ್ ಮತ್ತೊಮ್ಮೆ ನಮಿಸಿದ ಐತಿಹಾಸಿಕ ಕ್ಷಣವಾಗಿ ದಾಖಲಾಗಿತು.