
(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 11: ಭಾಷೆ ಎನ್ನುವುದು ನಮ್ಮಲ್ಲಿ ಇರುವುದಿಲ್ಲ.ಅದು ನಮ್ಮ ಸುತ್ತಲಿನ ಚಲನೆಯಲ್ಲಿ ಜೀವಂತವಾಗಿರುತ್ತದೆ. ನಾನು ನೋಡಿದ ಪ್ರಸಂಗ ಗ್ರಹಿಸಿ ಅದಕ್ಕೆ ಒಂದು ತಾತ್ವಿಕ ಚೌಕಟ್ಟನ್ನು ಹಾಕಿಕೊಂಡು ಕಥೆಗಳನ್ನು ಬರೆಯುತ್ತೇನೆ ಎಂದು 2025ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಅಮರೇಶ ನುಗುಡೋಣಿ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ನಗರದ ಜ್ಞಾನಾಮೃತ ಕಾಲೇಜಿನಲ್ಲಿ ಸಂಗಂ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪುರಸ್ಕಾರ ಪ್ರದಾನ ಸಮಾರಂಭದ ಸಂ ವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೋಕ ದೃಷ್ಠಿ ಎನ್ನುವುದು ನನ್ನ ಕಥೆಗಳಿಗೆ ಒಂದೊಂದು ಸಲ ನಾನು ಓದುವ ಕವಿತೆ, ವೈಚಾರಿಕ ಲೇಖನ, ಮಾತುಕತೆಯಿಂದಲೂ ಸಿಕ್ಕಿದೆ. ಪ್ರತಿ ಕಥೆಯಲ್ಲೂ ಒಂದು ತಾತ್ವಿಕತೆಯನ್ನು ವಿಸ್ತರಿಸುತ್ತ ಕಥೆಗಳನ್ನು ಕಟ್ಟಿರುವೆ. ಆರಂಭದಲ್ಲಿ ನನ್ನ ಓದಿಗೆ ದಕ್ಕಿದ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಓದಿದಾಗ ಇಂತಹ ಬದುಕು ನನ್ನ ಪರಿಸರದಲ್ಲೂ ಇದೆ. ನಾನೇಕೆ ಬರೆಯಬಾರದು ಎನ್ನುವ ಒಳತುಡಿತ ಕಾಡಿ ಕಥೆಗಳನ್ನು ಬರೆಯಲು ತೊಡಗಿದೆ ಎಂದು ತಮ್ಮ ಕಥೆಗಳ ಯಾನವನ್ನು ನೆನಪಿಸಿಕೊಂಡರು.
ಈ ಹೊತ್ತು ಬರೆಯುತ್ತಿರುವ ಹೊಸ ತಲೆಮಾರಿನ ಕತೆಗಾರರಲ್ಲಿ ಧ್ಯಾನಸ್ಥ ಸ್ಥಿತಿ ಕಡಿಮೆ ಇದೆ. ಕಲಾತ್ಮಕವಾಗಿ ಬರೆಯುವವರು ಸಂಖ್ಯೆ ಕಡಿಮೆ ಇದೆ. ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ ಕೂಡುದನಿ ಇರುವುದು ಗಮನಕ್ಕೆ ಬರುತ್ತದೆ. ಇಂದಿನ ಕೇಡುಗಾಲದಲ್ಲಿ ಒಂಟಿದನಿಯೇ ಮುನ್ನೆಲೆಗೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಗೋಷ್ಠಿಯ ಸಮನ್ವಯಕಾರರಾಗಿ ಪಲ್ಲವ ವೆಂಕಟೇಶ್ ನಡೆಸಿಕೊಟ್ಟರೆ, ಸಂವಾದದಲ್ಲಿ ಟಿ ಎಸ್ ಗೊರವರ ಚೈತ್ರಾ ಶಿವಯೋಗಿಮಠ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಓ ಎಲ್ ನಾಗಭೂಷಣ ಸ್ವಾಮಿ, ಜಿ ಪಿ ಬಸವರಾಜ್, ವೈ ಸಿ ಯೋಗಾನಂದ ರೆಡ್ಡಿ,ಅಬ್ದುಲ್ ತೋರಣಗಲ್, ಮಧುಸೂದನ ಕಾರಿಗನೂರು, ಪುಷ್ಪಲತಾ, ದಸ್ತಗೀರಸಾಬ್ ದಿನ್ನಿ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳು, ನಾಗರಾಜ ಬಸರಕೋಡು,ವೀಣಾ ಆರ್, ಸದಾಶಿವ ಸೊರಟೂರು ಉಪಸ್ಥಿತರಿದ್ದರು.





















