
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.24: ಶಾಸಕ ಹೆಚ್.ಟಿ.ಮಂಜು ಕಾರ್ಯಕ್ರಮಗಳನ್ನು ನೋಡಿ ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಅವರ ಜತೆಯಲ್ಲಿ ನಿಲ್ಲುತ್ತೀರಿ ಎಂಬ ಆತ್ಮವಿಶ್ವಾಸವಿರುವುದಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಶಾಸಕ ಹೆಚ್.ಟಿ.ಮಂಜು ಅವರ 51 ನೇ ಹುಟ್ಟು ಹಬ್ಬದ ಅಂಗವಾಗಿ ಮಂಗಳವಾರ ಜೆಡಿಎಸ್ ಕಾರ್ಯಕರ್ತರಿಂದ ಹೆಚ್.ಟಿ.ಮಂಜು ಅದ್ದೂರಿ ಅಭಿಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಪರ, ವಿರೋಧ ಸಾಮಾನ್ಯ. ಕಾರ್ಯಕರ್ತರು 2028 ಕ್ಕೆ ರಾಜ್ಯದಲ್ಲಿ ಜನಪರ ಸರ್ಕಾರ ಮಾಡಲು ಕುಮಾರಣ್ಣ ಹಾಗೂ ಮಂಜಣ್ಣನ ಪರವಾಗಿ ಕಾರ್ಯಕರ್ತರು ಸಂಘಟನೆಗೆ ಕಾರ್ಯೋನ್ಮುಖರಾಗಬೇಕು. ಯುವ ಕಾರ್ಯಕರ್ತನಾಗಿ ನಾನು ನಿಮ್ಮ ಜತೆ ಇರುತ್ತೇನೆ. ಮುಂದಿನ ಚುನಾವಣೆ ಹೆಚ್.ಟಿ.ಮಂಜು ಮುಂದಾಳತ್ವದಲ್ಲಿ ನಡೆಯಲಿದೆ. ಅವರಿಗಾಗಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಕ್ಷೇತ್ರದಲ್ಲಿ ಮನೆಯ ಮಗನಾಗಿ ಶಾಸಕ ಹೆಚ್.ಟಿ.ಮಂಜು ಕೆಲಸ ಮಾಡುತ್ತಿದ್ದಾರೆ. ಮುಂದಿನ 2028ರ ಚುನಾವಣೆ ಜೆಡಿಎಸ್ನ ಭವಿಷ್ಯದ ಚುನಾವಣೆಯಲ್ಲ, ಕರ್ನಾಟಕದ 7.5 ಕೋಟಿ ಕನ್ನಡಿಗರ ಭವಿಷ್ಯ ನಿರ್ಧಾರವಾಗುವ ಚುನಾವಣೆ. ಅಪಪ್ರಚಾರಕ್ಕೆ ಕಾರ್ಯಕರ್ತರು ಕಿವಿಗೊಡೋದು ಬೇಡ. ನನ್ನ ಮನಸಲ್ಲಿ ಮಂಜಣ್ಣ ಇದ್ದಾರೆ. ಮಂಜಣ್ಣನ ಮನಸಲ್ಲಿ ನಾನು ಇದ್ದೀನಿ. ಮಾಧ್ಯಮಗಳಲ್ಲಿ ಅಪಪ್ರಚಾರ ಆಯಿತು. ಆ ಬಗ್ಗೆ ನಾನು ಏನು ಅಂತಾ ಹೇಳುವುದಿಲ್ಲ. ಕಾರ್ಯಕರ್ತರು ಆ ವಿಷಯಕ್ಕೆ ಕಿವಿಗೊಡುವ ಅವಶ್ಯಕತೆಯಿಲ್ಲ. ನಿಮ್ಮೆಲ್ಲರಿಗಿಂತ ಹೆಚ್ಚಾಗಿ ಶಾಸಕ ಹೆಚ್.ಟಿ.ಮಂಜು ಏನು ಎಂಬುದು ನನಗೆ ಚನ್ನಾಗಿ ಗೊತ್ತಿದೆ.
ದೇವೇಗೌಡರು, ಕುಮಾರಣ್ಣನಿಗೆ ಶಾಸಕರ ಮೇಲೆ ವಿಶ್ವಾಸವಿದೆ. ನಾನು ಆ ಪಕ್ಷ, ಈ ಪಕ್ಷ ಅಂತಾ ಹೇಳೋಕೆ ಹೋಗೋದಿಲ್ಲ. ಇತ್ತೀಚಿನ ಪ್ರಸ್ತುತ ರಾಜಕಾರಣದಲ್ಲಿ ನಿಷ್ಠಾವಂತರು, ಪ್ರಾಮಾಣಿಕರು ಸಿಗುವುದು ತುಂಬಾ ಕಷ್ಟ. ಶಾಸಕ ಹೆಚ್.ಟಿ.ಮಂಜು ಪಕ್ಷಕ್ಕೆ, ನಾಯಕರಿಗೆ ನಿಷ್ಠೆ ಆಗಿದ್ದಾರೆ. ಪಕ್ಷದಲ್ಲಿ ಹೆಚ್.ಟಿ.ಮಂಜು ಶಾಸಕರಾಗಿರೋದು ಪ್ರಾಮಾಣಿಕರಾಗಿರುವುದಕ್ಕೆ ಸಾಕ್ಷಿ. ಹೆಚ್.ಟಿ.ಮಂಜು ಪ್ರಾಮಾಣಿಕರು. ನಿಷ್ಠಾವಂತ, ಪ್ರಾಮಾಣಿಕ ಹೆಚ್.ಟಿ.ಮಂಜು ಅಂತಹ ಯುವನಾಯಕರಿಗೆ ರಾಜ್ಯದಲ್ಲಿ 2028ರ ಚುನಾವಣೆಗೆ ಆದ್ಯತೆ ನೀಡಲಾಗುತ್ತದೆ. ಜತಗೆ ಸ್ಥಳೀಯ ಚುನಾವಣೆಯಲ್ಲೂ ಯುವಕರಿಗೆ ಆದ್ಯತೆ ನೀಡಲು ಕುಮಾರಣ್ಣ ತೀರ್ಮಾನಿಸಿದ್ದಾರೆ.
ಮೂರು ವರ್ಷದಿಂದ ಸರ್ಕಾರದಿಂದ ಅನುದಾನದ ಕೊರತೆಯಿದ್ದು ಗ್ಯಾರಂಟಿಗಳ ನೆಪಗಳನ್ನು ಹೇಳಿಕೊಂಡು ಗ್ರಾಮೀಣ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಸ್ಥಗಿತಗೊಂಡಿದೆ. ಮೊದಲ ಬಾರಿಗೆ ಶಾಸಕ ಹೆಚ್.ಟಿ.ಮಂಜು ಮೇಲೆ ನಿರೀಕ್ಷೆಯನ್ನು ಇರಿಸಿದ್ದೀರಿ. ಜತಗೆ ಒತ್ತಡವನ್ನು ಹಾಕಿದ್ದೀರಿ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ, ಅಭಿವೃದ್ಧಿ ಮಾಡಲು ಸಾಧ್ಯ. ಈ ನಡುವೆ ಹೆಚ್.ಟಿ.ಮಂಜು ಪಕ್ಷಕ್ಕಾಗಿ ಕ್ಷೇತ್ರಕ್ಕಾಗಿ ಅವರಿಗೆ ಸಿಕ್ಕಿರುವ ಅವಕಾಶವನ್ನು ಕ್ಷೇತ್ರದ ಜನತೆ ಜತೆ ನಿಂತು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವೈಯಕ್ತಿಕವಾಗಿ ಕೂಡ ಮನೆ ಮಗನಾಗಿ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕ ಹೆಚ್.ಟಿ.ಮಂಜು ಮಾತನಾಡಿ, ಕಾರ್ಯಕ್ರಮದಲ್ಲಿ ಸಮಾರು 800 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪೌರ ಕಾರ್ಮಿಕರು, ಆಟೋ ಚಾಲಕರು, ಪ್ರಗತಿ ಪರ ರೈತರಿಗೆ ಸನ್ಮಾನಿಸಿದ್ದೇವೆ. ಮಹಿಳೆಯರಿಗೆ ಹೊಲಿಗೆ ಯಂತ್ರ, ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳಿಗೆ ಸಲಕರಣೆಗಳ ವಿತರಿಸಿದ್ದೇವೆ. ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಹುಟ್ಟು ಹಬ್ಬ ಆಚರಣೆ ಆಯೋಜಿಸಿದ್ದೀರಿ. ನಿಮಗೆ ಚಿರೃಣಿಯಾಗಿದ್ದೇನೆ. ನಾನು ಸಾಮಾನ್ಯ ರೈತನ ಮಗ. 1975 ರಲ್ಲಿ ಮುನಿಯಪ್ಪನ ಹಬ್ಬದ ದಿನ ಜನಿಸಿರುವುದಾಗಿ ನಮ್ಮ ತಂದೆ ಹೇಳಿದ್ದರು. ನಮ್ಮ ತಂದೆ ತಾಯಿ ಕೂಡ ಅನಕ್ಷರಸ್ಥರು. ಅವರು ನಮ್ಮ ಜನ್ಮ ದಿನ ಬರದಿಡುವ ಸ್ಥಿತಿಯಲ್ಲೂ ಇರಲಿಲ್ಲ ಎಂದರು.
ನಮ್ಮ ಪಕ್ಷ ಮುಖಂಡರ ಪಕ್ಷವಲ್ಲ. ಕಾರ್ಯಕರ್ತರ ಪಕ್ಷ ಎಂಬುದನ್ನು ಸಾಭೀತು ಪಡಿಸಿದ್ದೀರಿ. ಕುಮಾರಣ್ಣ ಮಂಡ್ಯಕ್ಕೆ ಕಾರ್ಖಾನೆಗಳನ್ನು ತಂದು ಅಭಿವೃದ್ಧಿ ಪಡಿಸಬೇಕು ಎಂಬ ಕನಸು ಕಂಡಿದ್ದರು.
ಕಾಂಗ್ರೆಸ್ ಸರ್ಕಾರ ಕುಮಾರಣ್ಣನಿಗೆ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಕಾರ್ಖಾನೆಗೆ ಜಾಗ ಕೊಡುತ್ತಿಲ್ಲ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಹೊಸ ಕಾರ್ಖಾನೆಗಳಿಗೆ ಮೂಲಸೌಕರ್ಯ ನೀಡಬೇಕು. ಆದರೆ ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿಲ್ಲ. ಸದನದಲ್ಲಿ, ಮುಖ್ಯಂಮತ್ರಿಗಳಿಗೆ ಅಭಿವೃದ್ಧಿ ಅನುದಾನಕ್ಕೆ ಮನವಿ ಮಾಡಿದರೂ ಜೆಡಿಎಸ್ ಶಾಸಕ ಎಂಬ ಕಾರಣಕ್ಕೆ ಅನುದಾನ ನೀಡುತ್ತಿಲ್ಲ. 2028ಕ್ಕೆ ನಮ್ಮ ಸರ್ಕಾರ ಬರುವುದು ಸೂರ್ಯ, ಚಂದ್ರ ಇರುವಷ್ಟು ಸತ್ಯ. ಆ ಸಮಯದಲ್ಲಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕನಸು ನೆನಸಾಗಲಿದೆ.
ಕಷ್ಟದ ಸಮಯದಲ್ಲಿ ಶಾಸಕ ಆಗಿದ್ದೀನಿ. ನಾನು ದೃತಗೆಟ್ಟಿಲ್ಲ. ಮೂರು ಬಾರಿ ಶಾಸಕನಾಗಿಲ್ಲ, ಸಚಿವನಾಗಿಲ್ಲ. ಮೂರು ವರ್ಷದಲ್ಲಿ ಪ್ರಾಮಾಣಿಕವಾಗಿ ಅಭಿವೃದ್ಧಿ ಮಾಡಿದ್ದೀನಿ. ಜಿಲ್ಲೆಯಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕನಿದ್ದೀನಿ. ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ನನ್ನ ಹೊರತಪಡಿಸಿ ಜಿಲ್ಲೆಯ ಶಾಸಕರು ಸಭೆ ನಡೆಸಿ ನನ್ನ ಕಡೆಗಣಿಸಿರುವುದಾಗಿ ಬೇಸರ ಹೊರಹಾಕಿದರು.
ಶಾಸಕ ಹೆಚ್.ಟಿ. ಮಂಜು ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ ತಾಲೂಕಿನ ಪ್ರಮುಖ ಸ್ಥಳಗಳು, ಗ್ರಾಮಾಂತರ ಪ್ರದೇಶಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುಭಾಶಯ ಬ್ಯಾನರ್ಗಳು ರಾರಾಜಿಸುತ್ತಿದ್ದವು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಮಾಂಸಹಾರಿ, ಸಸ್ಯಹಾರಿ ಊಟವನ್ನು ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಸಾವಿರಾರು ಜನರು ಊಟ ಸವಿದರು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ. ಹುಣಸೂರು ಶಾಸಕ ಹರೀಶ್ಗೌಡ. ಹಾಸನ ಶಾಸಕ ಸ್ವರೂಪ್ ಪ್ರಕಾಶ್. ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ. ಮನ್ ಮುಲ್ ಮಾಜಿ ಅಧ್ಯಕ್ಷ ರಾಮಚಂದ್ರ. ಜೆಡಿಎಸ್ ಜಿಲ್ಲಾದ್ಯಕ್ಷ ಡಿ.ರಮೇಶ್. ಕಡೂರು ಜೆಡಿಎಸ್ ಮುಖಂಡ ಶೇಖರ್ಗೌಡ. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮೋಹನ್. ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷ ರೇಖಾಲೋಕೇಶ್. ಟಿಎಪಿಸಿಎಂಎಸ್ ಅಧ್ಯಕ್ಷ ಬಲದೇವ್.ನಿರ್ದೇಶಕ ಕಿಕ್ಕೇರಿ ಮಧು,ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಎ.ಆರ್.ರಘು, ದಿಶಾ ಸಮಿತಿ ಸದಸ್ಯ ನರಸನಾಯಕ,ಐನೋರಹಳ್ಳಿ ಮಲ್ಲೇಶ್,ಹೆಚ್.ಕೆ.ಅಶೋಕ್ ಹುಬ್ಬನಹಳ್ಳಿಬಲರಾಮು, ತಾಲ್ಲೂಕಿನ ಜೆಡಿಎಸ್ ಮುಖಂಡರುಗಳು. ಸೇರಿದಂತೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.
























