
ಸಂಜೆವಾಣಿ ವಾರ್ತೆ
ಬಳ್ಳಾರಿ, ಜೂ.16: ನಾಟಕಗಳು ಆಯಾ ಕಾಲಘಟ್ಟದ ಸಾಮಾಜಿಕ ಪರಿಸ್ಥಿತಿಯ ಕನ್ನಡಿ ಹಿಡಿಯುವ ಕೆಲಸ ಮಾಡುತ್ತಿದ್ದು ವರ್ತಮಾನದಲ್ಲಿ ಪ್ರಭಾವ ಬೀರುತ್ತವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು. ತಾಲೂಕಿನ ಕಪ್ಪಗಲ್ಲು ಗ್ರಾಮದಲ್ಲಿ ರಂಗತೋರಣ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ಕಪ್ಪಗಲ್ಲು ನಾಟಕೋತ್ಸವದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಆದವಾನಿ ವೀಣಾ ಹಾಗೂ ಶ್ರೀಧರ ಹೆಗಡೆ ಅವರಿಗೆ ರಾಜ್ಯಮಟ್ಟದ “ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರ” ಪ್ರದಾನ ಮಾಡಿ ಅವರು ಮಾತನಾಡಿದರು.
ಮಹಾತ್ಮಗಾಂಧೀಜಿಯವರ ಮೇಲೆ ಹರಿಶ್ಚಂದ್ರ ನಾಟಕ ಪ್ರಭಾವ ಬೀರಿತ್ತು. ವ್ಯಕ್ತಿ ಅಥವಾ ಜನಸಮುದಾಯದ ಮೇಲೆ ಪ್ರಭಾವ ಬೀರುವ ಶಕ್ತಿ ರಂಗಭೂಮಿಗಿದೆ. ನಿರಂತರ ನಾಟಕೋತ್ಸವಗಳ ಮೂಲಕ ಜನರ ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತಿರುವ ರಂಗತೋರಣ ಕಾರ್ಯ ಶ್ಲಾಘನೀಯ. ಗ್ರಾಮೀಣ ಪರಿಸರದಲ್ಲಿ ರಂಗಚಟುವಟಿಕೆಗಳು ನಿರಂತರವಾಗಿ ನಡೆಯುವಂತಾಗಬೇಕು. ಆಗ ಮಾತ್ರ ಸಾಂಸ್ಕೃತಿಕ ವಾತಾವರಣವನ್ನು ಎಲ್ಲೆಡೆ ಜೀವಂತವಾಗಿಡಲು ಸಾಧ್ಯವಾಗಲಿದೆ ಎಂದರು. ಸಮಾಜದ ಅಭಿವೃದ್ಧಿಯನ್ನು ಕೇವಲ ಆರ್ಥಿಕ ಮಾನದಂಡಗಳಿಂದ ಅಳೆಯಲು ಸಾಧ್ಯವಿಲ್ಲ. ಹಣ, ಆಸ್ತಿ, ಅಧಿಕಾರ ಮತ್ತು ಭೌತಿಕ ಸೌಲಭ್ಯಗಳು ಕಾಲಕ್ರಮೇಣ ಕಳೆದುಹೋಗಬಹುದು. ಆರ್ಥಿಕ ಶ್ರೀಮಂತಿಕೆ ಏರಿಳಿತಗಳಿಗೆ ಒಳಗಾಗುವುದು ಸಹಜ. ಆದರೆ ಒಂದು ಸಮಾಜದ ನಿಜವಾದ ಗುರುತು ಅದರ ಸಂಸ್ಕೃತಿ, ಪರಂಪರೆ, ಕಲೆ, ಸಾಹಿತ್ಯ ಮತ್ತು ಮೌಲ್ಯಗಳಲ್ಲಿ ಅಡಗಿದೆ. ಇವುಗಳೇ ಆ ಸಮಾಜದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತವೆ. ಈ ಸಾಂಸ್ಕೃತಿಕ ಸಂಪತ್ತು ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಾ ಸಮಾಜವನ್ನು ಜೀವಂತವಾಗಿರಿಸುತ್ತದೆ ಎಂದು ತಿಳಿಸಿದರು.
ಜೀವನವೇ ಒಂದು ನಾಟಕ ರಂಗ. ಅವನು ಕರೆದ ಕೂಡಲೇ ಎಲ್ಲವನ್ನೂ ಬಿಟ್ಟು ಹೋಗಿ ಬಿಡಬೇಕಂತೆ. ಆದರೆ, ಈ ಜೀವನ ಎಂಬ ನಾಟಕ ರಂಗದಲ್ಲಿ ನೈತಿಕ ಮೌಲ್ಯಗಳನ್ನು ಉಳಿಸಿಕೊಂಡು ಉತ್ತಮ ಪಾತ್ರಧಾರಿಗಳಾದರೆ ಮಾತ್ರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಹಣ, ಆಸ್ತಿ, ಅಧಿಕಾರ ಮತ್ತು ಸ್ಥಾನಮಾನಗಳು ಶಾಶ್ವತವಲ್ಲ. ಆದರೆ ಸಮಾಜದ ಒಳಿತಿಗಾಗಿ ಬದುಕಿದವರು, ಮಾನವೀಯ ಮೌಲ್ಯಗಳನ್ನು ಉಳಿಸಿದವರು ಮತ್ತು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದವರು ಜನರ ಹೃದಯದಲ್ಲಿ ಸದಾಕಾಲ ಜೀವಂತವಾಗಿರುತ್ತಾರೆ ಎಂದು ಹೇಳಿದರು.
ಆಂಧ್ರಪ್ರದೇಶದ ಉರವಕೊಂಡ ಮಠದ ಡಾ.ಕರಿಬಸವ ರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ರಂಗತೋರಣ ಸಂಸ್ಥೆಯ ಅಧ್ಯಕ್ಷ ಪ್ರೊ.ಭೀಮಸೇನ ಅವರು ಮೂರು ದಿನಗಳ ನಾಟಕೋತ್ಸವದ ಯಶಸ್ವಿಗೆ ಶ್ರಮಿಸಿದ ಗ್ರಾಮಸ್ಥರ ಸಹಕಾರವನ್ನು ಸ್ಮರಿಸಿದರಲ್ಲದೆ, ನಾಟಕ ಬರೀ ಮನರಂಜನೆಯಷ್ಟೇ ಅಲ್ಲ; ಮನೋವಿಕಾಸವೂ ಹೌದ. ನಾಟಕದಲ್ಲಿ ಬರುವ ನೀತಿಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ನಾಟಕೋತ್ಸವ ಶ್ರಮ ಸಾರ್ಥಕವಾಗುತ್ತದೆ ಎಂದು ಹೇಳಿದರು. ಬಳಿಕ ರಾಜ್ಯಮಟ್ಟದ ಸಾಂಸ್ಕೃತಿಕ ಸಾರ್ವಭೌಮ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕೃತರ ಸಾಧನೆಯನ್ನು ಪರಿಚಯಿಸಿದರು. ಲೆಕ್ಕ ಪರಿಶೋಧಕ ಎರಿಸ್ವಾಮಿ ಚಿಲ್ಕರಾಯಿ, ಎಪಿಎಂಸಿ ಉಪಾಧ್ಯಕ್ಷ ರಾಮಣ್ಣ, ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ ಉಪಸ್ಥಿತರಿದ್ದರು. ರಂಗತೋರಣ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಅಧ್ಯಕ್ಷ ಕೆ.ಪೊಂಪನಗೌಡ ಕಾರ್ಯಕ್ರಮ ನಿರ್ವಹಿಸಿದರು. ನಾಟಕೋತ್ಸವದ ಯಶಸ್ಸಿಗಾಗಿ ಶ್ರಮಿಸಿದ ಮೆಹತಾಬ್, ಚಂದ್ರಶೇಖರ ಆಚಾರ್, ಅಡವಿಸ್ವಾಮಿ, ಅರವಿಂದಯೋಗಿ, ಅನಿಲ್ ಅಂಗಡಿ, ಗಿರೀಶ್ ಆಚಾರ್ ಮತ್ತಿತರರಿದ್ದರು. ಕೊನೆಯಲ್ಲಿ ಜೇವರ್ಗಿ ರಾಜಣ್ಣ ರಚನೆ ಹಾಗೂ ನಿರ್ದೇಶನದ “ರೈತ ಮನೆತನ” ನಾಟಕ ಪ್ರದರ್ಶನಗೊಂಡಿತು.


























