
ಚಿಕ್ಕಬಳ್ಳಾಪುರ.ಜೂ.೨೭ : ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನನ್ನ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ರಾಜಕೀಯವಾಗಿ ನನಗೆ ಸೆಡ್ಡು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಯಲಹಂಕ ಶಾಸಕ ವಿಶ್ವನಾಥ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಡಾ.ಕೆ.ಸುಧಾಕರ್ ಯಾರೊಂದಿಗೆ ಏನು ಮಾತನಾಡುತ್ತಾರೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ,ಅವರ ಈ ನಡೆಯನ್ನು ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸುವ ಅಗತ್ಯವಿದೆ. ಜೊತೆಗೆ ಸುಧಾಕರ್ ನನ್ನ ತಂಟೆಗೆ ಬಂದರೆ ನಾನು ಅವರ ಬುಡಕ್ಕೆ ಕೈ ಇಡುತ್ತೇನೆ ಎಂದು ಎಚ್ಚರಿಸಿದರು.
ಯಲಹಂಕದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದ ಮುನ್ನಡೆ ತಂದುಕೊಟ್ಟಿದ್ದೇವೆ.ಹೀಗಿದ್ದರೂ ನಮ್ಮ ವಿರುದ್ಧವೇ ಪಿತೂರಿ ನಡೆಸಲಾಗುತ್ತಿದೆ.ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ, ಹೈಕಮಾಂಡ್ ಯಾರನ್ನು ಮುಂದಿನ ಅಭ್ಯರ್ಥಿಯನ್ನಾಗಿ ಸೂಚಿಸುತ್ತದೆ.ಅವರ ಪರವಾಗಿ ಕೆಲಸ ಮಾಡುತ್ತೇವೆ ಹೊರತು ಹೈಕಮಾಂಡ್ ವಿರುದ್ಧವಾಗಿ ನಾವು ಎಂದಿಗೂ ಹೋಗುವುದಿಲ್ಲವೆಂದು ತಿಳಿಸಿದರು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯಿಂದ ಶಾಸಕ ಸ್ಥಾನಕ್ಕೆ ಸಂದೀಪ್ ರೆಡ್ಡಿ ಅವರನ್ನು ಆಯ್ಕೆ ಮಾಡಬೇಕೆಂದು ಹೈಕಮಾಂಡ್ ವರಿಷ್ಠರ ಜೊತೆ ಚರ್ಚಿಸುತ್ತೇನೆ.ಕ್ಷೇತ್ರದಲ್ಲಿ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂದೀಪ್ ರೆಡ್ಡಿ ಅವರಂತಹ ಯುವಕರಿಗೆ ಶಾಸಕರಾಗುವ ಅರ್ಹತೆಯಿದೆ. ಪಕ್ಷ ಒಮ್ಮೆ ತೀರ್ಮಾನ ಕೈಗೊಂಡರೆ ನಾವು ಯಾರೂ ಅದರ ವಿರುದ್ಧ ಮಾತನಾಡುವುದಿಲ್ಲ ಎಂದರು
ಈ ಸಂದರ್ಭದಲ್ಲಿ ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡರುಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಮುಖಂಡ ಹಾಗೂ ಭಗತ್ ಸಿಂಗ್ ಚಾರ್ಟಬಲ್ ಟ್ರಸ್ಟ್ ಸಂಸ್ಥೆಯ ಅಧ್ಯಕ್ಷ ಸಂದೀಪ ಅವರ ಹಿತೈಷಿಗಳು ಹಾಜರಿದ್ದರು.































