
ಅಥಣಿ :ಏ.24: ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ 625 ಅಂಕಗಳಿಗೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆಯುವ ಮೂಲಕ ಅಪೂರ್ವ ಸಾಧನೆ ಮಾಡಿದ್ದಾಳೆ. ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದ ಪ್ರಾರ್ಥನಾ ತನ್ನ ಶ್ರಮ, ಏಕಾಗ್ರತೆ ಮತ್ತು ನಿಯಮಿತ ವಿದ್ಯಾಭ್ಯಾಸದ ಮೂಲಕ ಈ ಸಾಧನೆ ಸಾಧಿಸಿರುವುದು ವಿಶೇಷವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ ಹೇಳಿದರು
ಅಥಣಿ ಪಟ್ಟಣದ ಗುಡ್ಡದ ಲಕ್ಷ್ಮಿ ನಗರದಲ್ಲಿರುವ ಪ್ರಾರ್ಥನಾ ಬಿರಾದಾರ ಪಾಟೀಲ ಅವರ ನಿವಾಸದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ ಅವರ ನೇತೃತ್ವದ ತಂಡ ಬೇಟಿ ನೀಡಿ ಪ್ರಾರ್ಥನಾ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿರುವ ಅವರಿಗೆ ಗೌರವ ಸತ್ಕಾರ ನೆರವೇರಿಸಿ ಸಿಹಿ ತಿನಿಸುವ ಮೂಲಕ ಶುಭಾಶಯಗಳನ್ನು ಕೋರಿದರು.
ಈ ವೇಳ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ ಮಾತನಾಡಿ ಸರಕಾರಿ ಶಾಲೆಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. ಪ್ರಾರ್ಥನಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದು, ಕಠಿಣ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಯಾವ ಗುರಿಯನ್ನಾದರೂ ಸಾಧಿಸಬಹುದು ಎಂಬ ಸಂದೇಶವನ್ನು ಕೊಟ್ಟಿದ್ದಾಳೆ. ಅದರ ಜೊತೆಗೆ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ನುರಿತ ಶಿಕ್ಷಕರಿಂದ ಪಾಠ ಮಾಡುತ್ತಿರುವದರಿಂದ ಉತ್ತಮ ಫಲಿತಾಂಶ ಬರುತ್ತಿದೆ. ಈ ಬಾರಿ ಪ್ರಥಮ ಮತ್ತು ದ್ವೀತಿಯ ಸ್ಥಾನಗಳನ್ನು ನಮ್ಮ ವ್ಯಾಪ್ತಿಯ ಸರಕಾರಿ ಶಾಲೆಗಳ ಮಕ್ಕಳು ಪಡೆದಿರುವದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಹೇಳಿದರು
ಈ ವೇಳೆ ವಿದ್ಯಾರ್ಥಿನಿ ಪ್ರಾರ್ಥನಾ ನಾಗಪ್ಪ ಬಿರಾದಾರ ಪಾಟೀಲ ಮಾತನಾಡಿ ಪ್ರತಿದಿನ ನಿಯಮಿತವಾಗಿ ಅಧ್ಯಯನ ಮಾಡುತ್ತಿದ್ದೇ, ಶಾಲೆಯಲ್ಲಿ ಮಾಡುವ ಪಾಠವನ್ನು ಸರಿಯಾದ ಕ್ರಮದಲ್ಲಿ ಸ್ಮರಣೆ ಮಾಡಿಕೊಂಡು ಮನೆಯಲ್ಲಿ ಬಂದ ಮೇಲೆ ಅರ್ಥವಾಗದ ಕೆಲವು ವಿಷಯಗಳನ್ನು ಅಧ್ಯಯನ ಮಾಡಿ ಕಲಿಯುತ್ತಿದ್ದೆ, ಶಿಕ್ಷಕರ ಮಾರ್ಗದರ್ಶನವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡಿದ್ದೆ ಅವರ ಮಾರ್ಗದರ್ಶನ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಕಾರಿಯಾಗಿದೆ. ಕುಟುಂಬದ ಸಹಕಾರವೂ ನನ್ನ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಹಲವು ಸವಾಲುಗಳ ನಡುವೆಯೂ ನನ್ನ ದೃಢ ಸಂಕಲ್ಪ ಮತ್ತು ಆತ್ಮವಿಶ್ವಾಸ ಈ ಸಾಧನೆಗೆ ದಾರಿ ಮಾಡಿಕೊಟ್ಟಿದೆ, ರ್ಯಾಂಕ್ ಬರಲು ಸಹಕರಿಸಿದ ಎಲ್ಲ ಶಿಕ್ಷಕರಿಗೂ, ತಂದೆ ತಾಯಿಗಳಿಗೂ ಧನ್ಯವಾದಗಳು ಎಂದು ಹೇಳಿದರು
ಈ ಸಂದರ್ಬದಲ್ಲಿ ಪ್ರಾರ್ಥನಾಳ ತಂದೆ ನಾಗಪ್ಪ ಬಿರಾದರ್ ಪಾಟೀಲ್, ತಾಯಿ ವಿನೋದಾ ಬಿರಾದರ್ ಪಾಟೀಲ್, ಶಿಕ್ಷಕರಾದ ಮುತ್ತಪ್ಪ ದೇವರು, ಕಲ್ಲಪ್ಪ ನಂದಗಾಂವ, ಮುಖ್ಯ ಶಿಕ್ಷಕ ಜಿ ಎ ಖೋತ, ಶಿಕ್ಷಣ ಸಂಯೋಜಕ ಎಸ್ ವೈ ಗಸ್ತಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
#
ಶಾಲೆಯಲ್ಲಿ ಹೇಳುತ್ತಿದ್ದ ಪಾಠವನ್ನು ಏಕಾಗೃತೆಯಿಂದ ಕೇಳುತ್ತಿದ್ದೆ, ಮನೆಗೆ ಬಂದ ಮೇಲೆ ಅದನ್ನೆ ಪೂರ್ಣ ಪಠಣ ಮಾಡುತ್ತಿದ್ದೇ, ಶಾಲೆಯ ದಿನಗಳಲ್ಲಿ ಮನೆಯಲ್ಲಿ 3 ರಿಂದ 5 ಗಂಟೆಗಳ ಕಾಲ ಅದ್ಯಯನ ಮಾಡುತ್ತಿದ್ದೆ, ಶಾಲೆಯಲ್ಲಿ ಹಲವು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಲು ಹೇಳುತ್ತಿದ್ದರು, ಅದರ ಜೊತೆಗೆ ಎಲ್ ಬಿ ಎಸ್ ಸರಣಿ ಪರೀಕ್ಷೆಗಳನ್ನು ಮಾಡುತ್ತಿದ್ದರು, ಅಲ್ಲದೆ ಪ್ರಶ್ನೆಗಳನ್ನು ಹೇಗೆಲ್ಲ ತಿರುಚಿ ಕೇಳಬಹುದು ಅನ್ನುವ ಮಾಹಿತಿಯನ್ನು ಶಿಕ್ಷಕರು ನೀಡಿದ್ದರು ಈ ಎಲ್ಲರ ಸಹಕಾರದಿಂದಾಗಿ ಮತ್ತು ತಂದೆ ತಾಯಿಗಳ ಪೆÇ್ರೀತ್ಸಾಹ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದರಿಂದ ನನಗೆ ಸಾಧನೆ ಮಾಡಲು ಸಾದ್ಯವಾಗಿದೆ. ಮುಂದಿನ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆದು ನೀಟ್ ಮೂಲಕ ವೈದ್ಯಕೀಯ ವಿದ್ಯಾಭ್ಯಾಸ ಮಾಡುವ ಯೋಜನೆ ಇದೆ
ಪ್ರಾರ್ಥನಾ ಬಿರಾದಾರ ಪಾಟೀಲ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ#
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಷ್ಟಪಟ್ಟು ಓದಿ ಅಥಣಿ ಮತಕ್ಷೇತ್ರದ ಕಟಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಬಿರಾದಾರಪಾಟೀಲ ರಾಜ್ಯಕ್ಕೆ ಪ್ರಥಮ ಹಾಗೂ ಐಗಳಿ ಗ್ರಾಮದ ಆದರ್ಶ ಶಾಲೆಯ ವಿದ್ಯಾರ್ಥಿ ದಶರಥ ಭೋಸಲೆ ರಾಜ್ಯಕ್ಕೆ 2ನೇ ರ್ಯಾಂಕ ತಂದಿರುವದು ಅತ್ಯಂತ ಹೆಮ್ಮೆಯ ವಿಷಯ ಎರಡೂ ಶಾಲೆಗಳ ಶಿಕ್ಷಕರಿಗೂ ಹಾಗೂ ಇಬ್ಬರು ವಿದ್ಯಾರ್ಥಿಗಳ ಪಾಲಕರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ನಾವು ಮೂಲಭೂತ ಸೌಕರ್ಯಗಳನ್ನು ಒದಗಿಸಬಹುದು ಆದರೆ ಅಲ್ಲಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಸತತ ಪರಿಶ್ರಮದ ಫಲವಾಗಿ ಇಂತಹ ಫಲಿತಾಂಶ ಬಂದಿದೆ. ಗ್ರಾಮೀಣ ಭಾಗದ ಪ್ರತಿಭೆಗಳು ರಾಜ್ಯ ಮಟ್ಟಕ್ಕೆ ಬೆಳೆಯುತ್ತಿರುವುದು ಅಥಣಿ ತಾಲೂಕಿಗೆ ಹೆಮ್ಮೆಯ ವಿಷಯ. ಪ್ರಾರ್ಥನಾ ಅವರ ಈ ಸಾಧನೆ ಉಳಿದ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿ ಪ್ರಾರ್ಥನಾಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ಲಕ್ಷ್ಮಣ ಸವದಿ, ಅಥಣಿ ಶಾಸಕರು






















