Home ಜಿಲ್ಲೆ ಶ್ರಾವಣ ಮಾಸದ ಪ್ರವಚನಕ್ಕೆ ತಹಸೀಲ್ದಾರ ಮಹೇಶ ಪಾಟೀಲ ಚಾಲನೆ

ಶ್ರಾವಣ ಮಾಸದ ಪ್ರವಚನಕ್ಕೆ ತಹಸೀಲ್ದಾರ ಮಹೇಶ ಪಾಟೀಲ ಚಾಲನೆ

ಔರಾದ: ಶ್ರಾವಣ ಮಾಸದ ಅಂಗವಾಗಿ ಶ್ರೀ ಉದ್ಭವಲಿಂಗ ಅಮರೇಶ್ವರ ದೇವಸ್ಥಾನದಲ್ಲಿ ಆಯೋಜಿಸಲಾದ ಒಂದು ತಿಂಗಳ ಕಾಲ ನಡೆಯಲಿರುವ ಶ್ರೀ ಯಡಿಯೂರು ಸಿದ್ದಲಿಂಗೇಶ್ವರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ತಹಸೀಲ್ದಾರ ಮಹೇಶ ಪಾಟೀಲ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರಾವಣ ಮಾಸವು ಧಾರ್ಮಿಕ ಆಚರಣೆಗಳ ಜೊತೆಗೆ ಆತ್ಮಚಿಂತನೆ, ಸತ್ಕಾರ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುವ ಪವಿತ್ರ ಕಾಲವಾಗಿದೆ. ಪ್ರವಚನಗಳು ಕೇವಲ ಧಾರ್ಮಿಕ ವಿಚಾರಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೈತಿಕತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರುವ ಪ್ರವಚನ ಎಲ್ಲರೂ ಆಲಿಸಬೇಕು ಎಂದರು.

ಪ್ರವಚನಕಾರರಾದ ವೇದಮೂರ್ತಿ ಗುರುಪಾದಯ್ಯ ಶಾಸ್ತ್ರಿಗಳು ಮಾತನಾಡಿ ಶ್ರಾವಣ ಮಾಸದ ಮಹತ್ವ, ಶಿವಭಕ್ತಿ, ಸಂತ ಶರಣರ ಜೀವನ ಸಾರ ಹಾಗೂ ಅಧ್ಯಾತ್ಮದ ಸಾರ ಹಾಗೂ ಉತ್ತಮ ಜೀವನದ ಮೌಲ್ಯಗಳ ಕುರಿತು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು. ಪ್ರತಿಯೊಬ್ಬರೂ ಧಾರ್ಮಿಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದ ಒಳಿತಿಗೆ ಮನದಲ್ಲಿನ ಮಲಿನತೆಯ ಶುದ್ಧೀಕರಣಕ್ಕೆ ಪ್ರವಚನಗಳು ಸಹಕಾರಿ ಎಂದು ತಿಳಿಸಿದರು.

ಪ್ರವಚನ ಸಮಿತಿ ಅಧ್ಯಕ್ಷ ಬಸವರಾಜ ದೇಶಮುಖ ಅವರು ಮಾತನಾಡಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿದಿನ ವಿಶೇಷ ಪೂಜೆ, ಭಜನೆ, ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಚಿಂತನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಗೀತ ಕಲಾವಿದರಾದ ಪುರುಷೋತ್ತಮ ದೇಸಾಯಿ, ತಬಲಾ ವಾದಕ ಮಾಣಿಕರಾವ ಗುಡುರೆ ಸಂಗೀತ ಸೇವೆ ನೀಡಿದರು.

ಈ ಸಂಧರ್ಭದಲ್ಲಿ ಹಿರಿಯರಾದ ರೇವಣ್ಣಪ್ಪ ಕೇದಾರೆ, ಬಸವರಾಜ ಚ್ಯಾರೆ, ಕಲ್ಯಾಣರಾವ ಶೆಂಬೆಳ್ಳೆ, ಡಾ.ಧನರಾಜ ರಾಗಾ, ಸೂರ್ಯಕಾಂತ ಬುಟ್ಟೆ, ಅಮೃತರಾವ ಬಿರಾದಾರ, ಶೇಷೆರಾವ ಬಂಡೆ, ಪ್ರಕಾಶ ಅಲ್ಮಾಜೆ, ಶ್ರೀಕಾಂತ ಅಲ್ಮಾಜೆ, ಸರುಬಾಯಿ ರಾಗಾ, ನಿಲಮ್ಮ ಚ್ಯಾರೆ, ಪತ್ರಕರ್ತ ಮನ್ಮಥ ಸ್ವಾಮಿ, ಅಮರಸ್ವಾಮಿ ಸ್ಥಾವರಮಠ ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.