
ಚಿಕ್ಕಮಗಳೂರು, ಜು. ೨೭- ನೀಟ್ ಪರೀಕ್ಷೆಗೂ ಮುಲ್ಲಾಗಳಿಗೂ ಏನು ಸಂಬಂಧ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರ ವಿರುದ್ಧ ದಾಖಲಾಗಿದ್ದ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ನೀಡಿದ್ದ ನೋಟಿಸ್ಗೆ ಉತ್ತರಿಸಲು ಎಂಎಲ್ಸಿ ಸಿ.ಟಿ ರವಿ ಒಂದು ವಾರ ಕಾಲಾವಕಾಶ ಕೇಳಿದ್ದಾರೆ.
ಈ ಸಂಬಂಧ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವ ಸಿ.ಟಿ.ರವಿ, ನಾನು ಹಾಲಿ ಪರಿಷತ್ ಸದಸ್ಯ ಆಗಿರುವುದರಿಂದ ಪಕ್ಷದ ಬೇರೆ ಜವಾಬ್ದಾರಿಗಳಿವೆ. ರಾಯಚೂರು-ಕೊಪ್ಪಳ ಜಿಲ್ಲೆಗೆ ಬರ ಪರೀಶಿಲನೆಗೆ ತೆರಳಬೇಕಿದೆ. ಜು.೨೯ ಹಾಗೂ ೩೦ರಂದು ಪಕ್ಷದ ತುರ್ತು ಕೆಲಸಗಳಿಗೆ ತೆರಳಬೇಕಿದೆ. ಆನಂತರ ಕಾನೂನು ಸಲಹೆಗಾರರ ಸಲಹೆ ಪಡೆದು ಸಮಾಜಾಯಿಷಿ ನೀಡುತ್ತೇನೆ. ನನಗೆ ಸಮಾಜಾಯಿಷಿ ನೀಡಲು ೭ ದಿನಗಳ ಕಾಲಾವಕಾಶಬೇಕು ಎಂದು ಪೊಲೀಸರ ಬಳಿ ಕೇಳಿದ್ದಾರೆ.
ಅಲ್ಲದೆ,ಪತ್ರದಲ್ಲಿ ೭ ವರ್ಷಕ್ಕಿಂತ ಕಡಿಮೆ ಶಿಕ್ಷೆಯ ಪ್ರಕರಣದಲ್ಲಿ ನೋಟಿಸ್ ಕಡ್ಡಾಯ. ಪೊಲೀಸರ ನೋಟಿಸ್ಗೆ ಸಮಾಜಾಯಿಷಿ ನೀಡಲು ೭ ದಿನಗಳ ಕಾಲಾವಕಾಶ ಇರುತ್ತಿತ್ತು. ಈಗ ಪೊಲೀಸರು ನೀಡಿರುವ ಸಮಯ ನಿಸ್ಸಂದೇಹವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದ್ದಾರೆ.
ಜು.೨೫ ರಂದು ಚಿಕ್ಕಮಗಳೂರಿನಲ್ಲಿ ನಡೆದ ಯೂತ್ ಫಾರ್ ನೇಷನ್ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಸಂಬಂಧ ಜು.೨೬ ರಂದು ಪೊಲೀಸರು ನೋಟಿಸ್ ಸಹ ನೀಡಲು ಅವರ ಮನೆಗೆ ತೆರಳಿದ್ದರು. ಈ ವೇಳೆ ನೋಟಿಸ್ ಸ್ವೀಕರಿಸದೇ ಪೊಲೀಸರನ್ನು ವಾಪಸ್ ಕಳಿಸಿದ್ದರು.






























