
ಕಲಬುರಗಿ,ಏ.28-ಬಸವ ಸಮಿತಿ ಅನುಭಾವ ಮಂಟಪ , ಡಾ.ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ವಿಶ್ವ ಬಸವ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಜಗತ್ತಿನ 38 ಭಾಷೆಗಳಿಗೆ ಅನುವಾದ ಗೊಂಡಿರುವ 2500 ವಚನಗಳ ಕನ್ನಡ ಆವೃತ್ತಿಯ ಎರಡು ಸಂಪುಟಗಳ ನೈಜ ಗದ್ಯಾನುವಾದ ಕೃತಿಯನ್ನು ಬೆಂಗಳೂರು ಕೇಂದ್ರ ಬಸವ ಸಮಿತಿಯ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ ಅವರು ಬಿಡುಗಡೆಗೊಳಿಸಿದರು.
ಬೆಂಗಳೂರು ಕೇಂದ್ರ ಬಸವ ಸಮಿತಿಗೆ ಸತತವಾಗಿ 6ನೇ ಅವಧಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಡಾ.ಅರವಿಂದ್ ಜತ್ತಿ ಅವರಿಗೆ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು ಅಧಿಕಾರ ಮತ್ತು ಹಣದ ಆಮಿಷವನ್ನು ತೊರೆದು ತಂದೆಯ ಅಪೇಕ್ಷೆಯಂತೆ ಬಸವ ತತ್ವದ ಪ್ರಚಾರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದೇನೆ. ಜಗತ್ತಿನ 38 ಭಾಷೆಗಳಿಗೆ ವಚನಗಳನ್ನು ಅನುವಾದಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬಸವ ಸಮಿತಿಯು ವಿಶ್ವದಾದ್ಯಂತ ಬಸವ ಅಭಿಮಾನಿ ಸಂಘಟನೆಗಳನ್ನು ಒಟ್ಟುಗೂಡಿಸಿ ಅಮೆರಿಕ ಇಂಗ್ಲೆಂಡ್-ಆಸ್ಟ್ರೇಲಿಯಾ ಫ್ರಾನ್ಸ್ ಸೇರಿದಂತೆ ಒಂದು ಸೂತ್ರದಡಿ ಬಸವ ಜಯಂತಿಯನ್ನು ಆಚರಿಸಲಾಗುತ್ತಿದೆ. ಪ್ರತಿಯೊಬ್ಬರೂ ಪ್ರತಿದಿನ ಲಿಂಗಪೂಜೆ ಮಾಡಿಕೊಂಡು ವಚನಗಳನ್ನು ಅಧ್ಯಯನ ಮಾಡಲು ಅವರು ವಿನಂತಿಸಿಕೊಂಡರು.
ವಚನಗಳ ನೈಜ ಗದ್ಯಾನುವಾದ ಕೃತಿಯ ಪ್ರಧಾನ ಸಂಪಾದಕರಾದ ಡಾ.ವೀರಣ್ಣ ದಂಡೆ ಅವರು ಮಾತನಾಡಿ ನೈಜ ಗದ್ಯ ಅನುವಾದ ಗ್ರಂಥವು ಕಲಬುರ್ಗಿ ಬಸವ ಸಮಿತಿಯ ಶ್ರಮದ ಫಲವಾಗಿದೆ. ವಚನಕಾರರು ಯಾವ ಭಾವದಲ್ಲಿ ವಚನ ರಚಿಸಿದ್ದಾರೆಯೋ ಅದರ ನಿಜವಾದ ಅರ್ಥವನ್ನು ನೇರವಾಗಿ ಜನರಿಗೆ ಮುಟ್ಟಿಸುವಲ್ಲಿ ನೈಜ ಗದ್ಯಾನವಾದ ಗ್ರಂಥ ಉಪಯುಕ್ತವಾಗಿದೆ .ಈ ಗ್ರಂಥದಲ್ಲಿ ಅನುವಾದಕರ ಯಾವುದೇ ವಿವರಣೆ ನೀಡಿಲ್ಲ . ನೇರವಾಗಿ ವಚನಗಳ ಮೂಲ ಆಶಯ ತಿಳಿಸಲಾಗಿದೆ . ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸ ಬಸವ ಸಮಿತಿ ಮಾಡುತ್ತಿದೆ ಎಂದರು .
ಡಾ.ವಿಲಾಸ್ವತಿ ಕೋಬಾ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು .
ಡಾ. ಜಯಶ್ರೀ ದಂಡೆಯವರು ಸ್ವಾಗತಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನು ಆಡಿದರು . ನೈಜ ಗದ್ಯಾನುವಾದ ಕೃತಿಯ ಗದ್ಯ ಅನುವಾದಕರಾದ ಡಾ. ಶ್ರೀಕಾಂತ್ ಪಾಟೀಲ್ ಮತ್ತು ಡಾ.ಚಿತ್ಕಳ ಮಠಪತಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿ ರಾಜೇಂದ್ರ ಕೂಬಾ, ಅಮರನಾಥ ಪಾಟೀಲ ಕಾರ್ಯದರ್ಶಿ ಡಾ.ಆನಂದ ಪಾಟೀಲ ಸಿದ್ಧಾಮಣಿ , ಡಾ.ಕೆ.ಎಸ್. ವಾಲಿ, ಶರಣಗೌಡ ಪಾಟೀಲ್ ಪಾಳ, ಉದ್ದಂಡಯ್ಯ ಭಾಗವಹಿಸಿದರು.






















