
ಕೋಲಾರ,೧೭- ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳು ಈಡೇರಬೇಕಾದರೆ ಸಂಘಟಿತರಾಗಬೇಕು ಇಲ್ಲದೇ ಹೋದರೆ ಸರ್ಕಾರದ ಗಮನ ಸೆಳೆಯಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷ ಜೆ.ರಾಮಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ನೌಕರರ ಜಿಲ್ಲಾ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಕನಿಷ್ಠ ವೇತನ ನೀಡುವ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸವಲತ್ತು ನೀಡಲಾಗುವುದು ಎಂದು ಸರ್ಕಾರ ತಿಳಿಸಿದರೆ, ಮತ್ತೊಂದು ಕಡೆ ಕಾರ್ಮಿಕ ಇಲಾಖೆ ಇವುಗಳ ಕಾನೂನು ಪರಿಶೀಲನೆ ನಡೆಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದೆ. ಈ ರೀತಿಯಾದಲ್ಲಿ ಬೇಡಿಕೆ ಈಡೇರಲು ಸಾಧ್ಯವಿಲ್ಲ ನೌಕರರು ಸಂಘಟಿತ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕಾಗಿದೆ ಎಂದರು.
ಅಸಮರ್ಪಕ ಆರ್ಥಿಕ ನೀತಿಗಳಿಂದ ಆರ್ಥಿಕ ಅಸಮಾನತೆ ಉಂಟಾಗುತ್ತದೆ. ನೌಕರರ ವೇತನ ಹೆಚ್ಚಳವಾಗದಿರುವುದಕ್ಕೆ ಸರ್ಕಾರದ ನೀತಿ ಕಾರಣ. ನೌಕರರ ನ್ಯಾಯಬದ್ದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ನೌಕರರ ಮನವಿಗೆ ಪುರಸ್ಕಾರ ದೊರಕಬೇಕು ಎಂದರು.
ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿಗಳಲ್ಲಿ ನೌಕರರ ಬಾಕಿ ವೇತನ ಪಾವತಿಸಿಲ್ಲ. ಗ್ರಾಚ್ಯುಯಿಟಿ ಸೌಲಭ್ಯ ದೊರಕುತ್ತಿಲ್ಲ. ಈ ಹಿಂದೆ ಭರವಸೆ ನೀಡಿದಂತೆ ಬಾಕಿ ವೇತನ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ನೌಕರ ಸಮಸ್ಯೆಗಳನ್ನು ಚರ್ಚಿಸಿ ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು
ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರರು, ವಾಟರ್ಮೆನ್, ಸಿಪಾಯಿ ಹಾಗೂ ಸ್ವಚ್ಛತಾಗಾರರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ, ಸೇವಾ ಜ್ಯೇಷ್ಠತಾಯಲ್ಲಿ ಅನ್ಯಾಯ ನಡೆಯುತ್ತಿದೆ. ಹಿರಿಯ ಸಿಬ್ಬಂದಿ ಕಡೆಗಣಿಸಿ, ಹೊಸದಾಗಿ ಬಂದವರಿಗೆ ಜ್ಯೇಷ್ಠತಾ ಪಟ್ಟಿಯಲ್ಲಿ ಆದ್ಯತೆ ನೀಡಲಾಗುತ್ತಿದೆ ೧೦ನೇ ತರಗತಿ ಪಾಸಾದ ವಾಟರ್ಮೆನ್ ಸಿಬ್ಬಂದಿಗೆ ಕರವಸೂಲಿಗಾರರು ಹಾಗೂ ಡಿಇಒ ಹುದ್ದೆಗಳಿಗೆ ಮುಂಬಡ್ತಿ ನೀಡಬೇಕು, ಸ್ವಚ್ಛ ವಾಹಿನಿ ಸಿಬ್ಬಂದಿಗೆ ಪ್ರತಿ ತಿಂಗಳು ವೇತನ ಪಾವತಿಸಬೇಕು, ಮರಣ ಹೊಂದಿದ ಅಥವಾ ನಿವೃತ್ತಿ ಪಡೆದ ಸಿಬ್ಬಂದಿ ಕುಟುಂಬ ಸದಸ್ಯರಿಗೆ ಅನುಕಂಪ ಆಧಾರಿತ ನೇಮಕಾತಿ ನೀಡಬೇಕು. ನಿವೃತ್ತಿ ಹೊಂದಿದ ಸಿಬ್ಬಂದಿಗೆ ಉಪದಾನ ವ್ಯವಸ್ಥೆ ಕಲ್ಪಿಸಬೇಕು ಸರ್ಕಾರವನ್ನು ಒತ್ತಾಯಿಸಿದರು.
ಸಮಾವೇಶದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಅಮರನಾರಾಯಣ, ಖಜಾಂಚಿ ಕೇಶವರಾವ್ ಪದಾಧಿಕಾರಿಗಳಾದ ವೆಂಕಟರಾಮೇಗೌಡ, ರಾಮಕೃಷ್ಣಪ್ಪ, ಮೋಹನ್ ರೆಡ್ಡಿಯಪ್ಪ, ಪವಿತ್ರ, ಆನಂದ್, ರಾಮನ್ ಭೋವಿ, ಶ್ರೀನಿವಾಸ್, ಶೈಲಜಾ, ರಾಧಮ್ಮ, ಭಾಗ್ಯಲಕ್ಷ್ಮಿ, ಮುಂತಾದವರು ಇದ್ದರು.


























