
ಕೋಲಾರ,ಜೂ.೧೭- ಬಡತನದ ಬೇಗೆಯಲ್ಲಿ ಬೆಂದಿರುವ ಅಲೆಮಾರಿ ಬುಡ್ಗ ಜಂಗಮ್ ಹಾಗು ಚನ್ನದಾಸರ್ ಸಮುದಾಯದ ಮಕ್ಕಳ ಉನ್ನತ ವ್ಯಾಸಂಗ ಹಾಗೂ ಉಜ್ವಲ ಭವಿಷ್ಯಕ್ಕೆ ಕೂಡಲೇ ಜಾತಿ ಪ್ರಮಾಣ ಪತ್ರ ವಿತರಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯಲಿದೆ ಎಂದು ಸಮುದಾಯದ ಯುವ ಮುಖಂಡ ಅಭಿಜಿತ್ ಗೌಡ ತಿಳಿಸಿದರು.
ಸದರಿ ಸಮುದಾಯದವರೇ ಹೆಚ್ಚಿರುವ ಜಿಲ್ಲೆಯ ಮಾಲೂರು ತಾಲೂಕು ಲಕ್ಷ್ಮೀಸಾಗರದ ಶಾಲಾ ಆವರಣದಲ್ಲಿ ಬುಡ್ಗ ಜಂಗಮ್ ಮತ್ತು ಚನ್ನದಾಸರ ಕ್ಷೇಮಾಭಿವೃದ್ದಿ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಶಾಸಕ ಕೊತ್ತೂರು ಮಂಜುನಾಥ್ ಅವರು ಬುಡ್ಗ ಜಂಗಮ ಜಾತಿಯಲ್ಲದಿದ್ದರೂ ಪ್ರಮಾಣ ಪತ್ರ ಪಡೆದಿದ್ದ ಹಿನ್ನಲೆಯಲ್ಲಿ ವಿವಾದ ಕೋರ್ಟ್ ಮೆಟ್ಟಿಲೇರಿದೆ. ಸದರಿ ಜಾತಿ ಪ್ರಮಾಣ ಪತ್ರ ವಿವಾದವೇ ಈ ಸಮುದಾಯ ಪ್ರಮಾಣ ಪತ್ರ ಪಡೆದುಕೊಳ್ಳಲು ಅಡ್ಡಿಯಾಗಿದ್ದು, ಕಳೆದ ೨೦೧೨ ರಿಂದಲೂ ಜಾತಿ ಪ್ರಮಾಣ ಪತ್ರ ಸಿಗದೇ ಸಮುದಾಯ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.
ಕೊತ್ತೂರು ಮಂಜುನಾಥ್ ಅವರು ಮಾಡಿದ ತಪ್ಪಿಗೆ ಜಿಲ್ಲಾಡಳಿತ ಇಡೀ ಬುಡ್ಗ ಜಂಗಮ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡದೇ ರದ್ದುಗೊಳಿಸಿದೆ, ಇದರಿಂದ ನಮಗೂ ಜಾತಿ ಪ್ರಮಾಣಪತ್ರವಿಲ್ಲ, ನಮ್ಮ ಮಕ್ಕಳಿಗೂ ಇಲ್ಲ, ಹೀಗಾಗಿ ಅವರ ಭವಿಷ್ಯದ ದೃಷ್ಟಿಯಿಂದ ಹೋರಾಟ ಅನಿವಾರ್ಯವಾಗಿದೆ ಎಂದರು.
ಕೋರ್ಟ್ನಲ್ಲಿ ೨೦೧೨ ರಿಂದಲೂ ಶಾಸಕರ ಜಾತಿ ಪ್ರಮಾಣಪತ್ರದ ಕೇಸ್ ಮುಂದುವರೆದಿದ್ದು, ಇಡೀ ಸಮುದಾಯಕ್ಕೆ ಪ್ರಮಾಣ ಪತ್ರ ಸಿಗುತ್ತಿಲ್ಲ ಯಾರೋ ಒಬ್ಬರು ಮಾಡಿರುವ ತಪ್ಪಿಗೆ ಇಡೀ ಸಮುದಾಯ ತೊಂದರೆಗೆ ಒಳಗಾಗಿದೆ, ಕಳೆದ ೧೩ ವರ್ಷಗಳಿಂದ ಸರ್ಕಾರದ ವಸತಿ ಯೋಜನೆಗಳು ಸೇರಿದಂತೆ ಯಾವುದೇ ಸೌಲಭ್ಯಗಳು ನಮಗೆ ಸಿಕ್ಕಿಲ್ಲ ಎಂದು ಕಿಡಿಕಾರಿದರು.
ಜಾತಿ ಪ್ರಮಾಣಪತ್ರವಿಲ್ಲದ ಕಾರಣ ನಮ್ಮ ಮಕ್ಕಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಯಾವುದೇ ಸೌಲಭ್ಯಗಳು ಸಿಗದ ಕಾರಣ ಮಕ್ಕಳನ್ನು ಶಾಲೆಗೆ ದಾಖಲಿಸುತ್ತಿಲ್ಲ, ಅವರು ಓದಿದರೆ ನಂತರ ಕೂಲಿ ಮಾಡುವುದು ತಪ್ಪಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು, ಜಾತಿ ಪ್ರಮಾಣಪತ್ರ ನೀಡುವವರೆಗೂ ಶಾಲೆಗೆ ದಾಖಲಿಸಲ್ಲ ಎಂದು ತಿಳಿಸಿದರು.
ಬುಡ್ಗ ಜಂಗಮ್ ಮತ್ತು ಚನ್ನದಾಸರ ಕ್ಷೇಮಾಭಿವೃದ್ದಿ ಸಂಘದ ಪ್ರಧಾನ ಕಾರ್ಯದರ್ಶಿ ಮರುಗೇಶ್ ಮಾತನಾಡಿ, ಜಾತಿ ಪ್ರಮಾಣ ಪತ್ರ ಸಿಗದ ಹಿನ್ನಲೆಯಲ್ಲಿ ನೊಂದಿರುವ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ ಇದರಿಂದಾಗಿ ಕಳೆದ ವರ್ಷ ೧೯ ಮಕ್ಕಳಿದ್ದು, ಈ ಬಾರಿ ೬ ಮಕ್ಕಳು ದಾಖಲಾಗಿ ಶಾಲೆಯಲ್ಲಿ ೨೫ ಮಕ್ಕಳಿರಬೇಕಾಗಿತ್ತು ಹಾಗೆಯೇ ಅಂಗನವಾಡಿಗೂ ೧೦ ಮಕ್ಕಳು ದಾಖಲಾಗಬೇಕಾಗಿತ್ತು.
ಆದರೆ ತಮ್ಮ ಮಕ್ಕಳಿಗೆ ಜಾತಿ ಪ್ರಮಾಣಪತ್ರ ಸಿಗದ ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದ ಕಾರಣ ಶಾಲೆಯಲ್ಲಿ ಮಕ್ಕಳಿಲ್ಲದೇ ಬಿಕೋ ಎನ್ನುವಂತಾಗಿದೆ. ಶಿಕ್ಷಕರು ಶಾಲೆಗೆ ಬಂದು ವೃಥಾ ವಾಪಸ್ಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದ್ದು, ಸಮಸ್ಯೆ ಪರಿಹಾರವಾಗುವವರೆಗೂ ಶಾಲೆಗೆ ದಾಖಲಾತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗೇಶ್, ಯುವ ಮುಖಂಡ ಅಭಿಜಿತ್ಗೌಡ, ಮೇಘರಾಜ್, ಗೋವಿಂದಪ್ಪ, ಶ್ರೀರಾಮ್, ಡಿಎಂಸಿ ಶ್ರೀರಾಮ್, ಐ.ಎಂ.ವೆಂಕಟೇಶ್, ವೆಂಕಟೇಶ್ ಮಾಜಿ ಗ್ರಾಪಂ ಸದಸ್ಯ ಮುನಿಯಪ್ಪ, ಯಲ್ಲಪ್ಪ,ಶಶಿ ಗಂಗರಾಜು, ಬಾಬು, ರಾಜಪ್ಪ, ಅಭಿ, ನಾಗರಾಜ್, ಮೂರ್ತಿ, ಮಂಜುನಾಥ್,ವೆಂಕಟೇಶ್ ಮತ್ತಿತರರಿದ್ದರು.


























