Home ಮುಖಪುಟ ಸುದ್ದಿ ಕಿದ್ವಾಯಿ ಕರ್ಮಕಾಂಡ ಬಯಲಿಗೆಳೆದ ಆಶಾ ಪರ್ವಿನ್‌ಗೆ ವರ್ಗಾವಣೆ ಶಿಕ್ಷೆ

ಕಿದ್ವಾಯಿ ಕರ್ಮಕಾಂಡ ಬಯಲಿಗೆಳೆದ ಆಶಾ ಪರ್ವಿನ್‌ಗೆ ವರ್ಗಾವಣೆ ಶಿಕ್ಷೆ

ಬೆಂಗಳೂರು,ಜು.೧೧: ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯ ಕರ್ಮಕಾಂಡ ಬಯಲಿಗೆಳೆದಿದ್ದ ಹಿರಿಯ ಕೆಎಎಸ್ ಅಧಿಕಾರಿ ಆಶಾ ಪರ್ವಿನ್ ಮತ್ತೆ ಎತ್ತಂಗಡಿಯಾಗಿದ್ದಾರೆ.


ಸದ್ಯ ಕಿದ್ವಾಯಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿದ್ದ ಆಶಾ ಪರ್ವಿನ್‌ರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು,ಹಿರಿಯ ಕೆಎಎಸ್ ಅಧಿಕಾರಿ ವರ್ಗಾವಣೆಗೊಳಿಸಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿದೆ.


ಇನ್ನು ಆಶಾ ಪರ್ವಿನ್ ಅವರನ್ನು ಕಿದ್ವಾಯಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿ ಕಳೆದ ಎರಡು ತಿಂಗಳ ಹಿಂದಷ್ಟೇ ಸರ್ಕಾರ ನೇಮಿಸಿತ್ತು.ಹೀಗಾಗಿ ಮುಖ್ಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ಅಲ್ಲಿನ ಅಕ್ರಮಗಳು, ಅವ್ಯವಸ್ಥೆಗಳು ಮತ್ತು ಭ್ರಷ್ಟಾಚಾರದ ಜಾಲವನ್ನು ಪತ್ತೆಹಚ್ಚಿ, ಸಾಕ್ಷ್ಯಾಧಾರಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಬೆನ್ನಲ್ಲೇ ಆಶಾ ಪರ್ವಿನ್ ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಈ ಹಿಂದೆ ವಿಕ್ಟೋರಿಯಾ ಆಸ್ಪತ್ರೆಯ ನೆಫ್ರಾಲಜಿ ವಿಭಾಗದಲ್ಲಿ ನಡೆದಿರುವ ಭ್ರಷ್ಟಾಚಾರದ ಕುರಿತು ದಾಖಲೆಗಳೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಕಾರಣಕ್ಕೂ ಇದೇ ಆಶಾ ಪರ್ವಿನ್‌ರನ್ನು ವರ್ಗಾವಣೆಗೆ ಒಳಗಾಗಿದ್ದರು ಎನ್ನುವ ಆರೋಪಗಳಿದ್ದವು.ಅದಾದ ಬಳಿಕ ಕಿದ್ವಾಯಿ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿ ಬಂದ ಆಶಾ ಪರ್ವಿನ್ ಇಲ್ಲೂ ಕೂಡ ಆಸ್ಪತ್ರೆಯ ಕರ್ಮಕಾಂಡ ಬಯಲಿಗೆಳೆದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.ಆದರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಈ ವರದಿಯನ್ನು ಗಂಭೀರವಾಗಿ ಪರಿಗಣಿಸದೆ,ಆಶಾ ಪರ್ವಿನ್‌ರಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವುದು,ಸರ್ಕಾರ ಭ್ರಷ್ಟಾಚಾರದ ವಿರುದ್ಧವಲ್ಲ, ಭ್ರಷ್ಟಾಚಾರವನ್ನು ಬಯಲಿಗೆಳೆಯುವವರ ವಿರುದ್ಧ ನಿಂತಿದೆಯೇ ಎಂಬ ಅನುಮಾನಗಳನ್ನು ಹುಟ್ಟಿ ಹಾಕಿದೆ.


ಇತ್ತೀಚಿಗಷ್ಟೆ ೧೦ ರೂಪಾಯಿ ಭ್ರಷ್ಟಾಚಾರವನ್ನೂ ಸಹಿಸಲ್ಲ ಎಂದಿದ್ದ ಸಿಎಂ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಕಿದ್ವಾಯಿ ಆಸ್ಪತ್ರೆಯ ಕೋಟ್ಯಾಂತರ ರೂಪಾಯಿಗಳ ಅಕ್ರಮಗಳ ಬಗ್ಗೆ ವರದಿ ನೀಡಿದ ಅಧಿಕಾರಿ ಆಶಾ ಪರ್ವಿನ್‌ಯನ್ನು ೨ ತಿಂಗಳಲ್ಲೇ ವರ್ಗಾವಣೆಗೊಳಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.


ಕಿದ್ವಾಯಿ ಆಸ್ಪತ್ರೆಯಲ್ಲಿ ೮-೧೦ ವರ್ಷಗಳಿಂದ ಸಾಕಷ್ಟು ಅವ್ಯವಹಾರ, ಅಕ್ರಮಗಳು ನಡೆದಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.ಇದಾದ ಬಳಿಕ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿಯಾಗಿ ಆಶಾ ಪರ್ವಿನ್ ಬಂದ ಬಳಿಕ ಆ ಅಕ್ರಮಗಳು ಒಂದೊದಾಗಿಯೇ ಬೆಳಕಿಗೆ ಬಂದವು.ಹೀಗಾಗಿ ಅದೆಲ್ಲದರ ವರದಿ ತಯಾರಿಸಿ ಆಶಾ ಪರ್ವಿನ್ ಸರ್ಕಾರಕ್ಕೆ ಸಲ್ಲಿಸಿದ್ದರು. ಅಲ್ಲದೆ,ಈ ಹಿಂದಿನ ನಿರ್ದೇಶಕರ ಅವಧಿಯಲ್ಲೂ ಭಾರೀ ಅಕ್ರಮಗಳು ನಡೆದಿದ್ದವು ಎನ್ನಲಾಗಿದೆ.


ಇದೀಗ ಆಶಾ ಪರ್ವಿನ್ ಅಕ್ರಮ ನಡೆದಿರುವ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಿರುವ ವರದಿಯನ್ನು ಗಂಭೀರವಾಗಿ ಪರಿಗಣಿಸುವುದು ಹಾಗೂ ಹಿಂದಿನ ನಿರ್ದೇಶಕರ ಅವಧಿಯಲ್ಲಿ ನಡೆದಿದೆಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.