Home ಜಿಲ್ಲೆ ಕಲಬುರಗಿ ಗಡಿಗಳನ್ನು ಮೀರಿದ ಕಲೆ: ಭಾರತ ಮತ್ತು ಇಟಲಿ ನಡುವಿನ ಸೃಜನಶೀಲ ಸಂವಾದ

ಗಡಿಗಳನ್ನು ಮೀರಿದ ಕಲೆ: ಭಾರತ ಮತ್ತು ಇಟಲಿ ನಡುವಿನ ಸೃಜನಶೀಲ ಸಂವಾದ

ಕಲಬುರಗಿ: ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದ ಮತ್ತು ಛಾಯಾಗ್ರಾಹಕ ಮೊಹಮ್ಮದ್ ಅಯಾಜೋದ್ದೀನ್ ಪಟೇಲ್ ಅವರನ್ನು, ಇಟಲಿಯ ವೆನಿಸ್‍ನಲ್ಲಿ ಸೆಪ್ಟೆಂಬರ್ 17 ರಿಂದ 20 ರವರೆಗೆ ನಡೆಯಲಿರುವ “ಅಂತರರಾಷ್ಟ್ರೀಯ ಸಹಯೋಗದ ಕಲಾ ಪ್ರದರ್ಶನ ಮತ್ತು ಶಿಲ್ಪಕಲಾ ಕಾರ್ಯಾಗಾರ”ದಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
ಎಸ್. ಎಂ. ಡಿ. ಫೌಂಡೇಶನ್ ಮತ್ತು ಹೆಚ್. ಯು. ವೆನೆಜಿಯಾ ಇವುಗಳ ಜಂಟಿ ಆಶ್ರಯದಲ್ಲಿ, ವೆನಿಸ್‍ನ ‘ಹೆಚ್. ಯು. ವೆನೆಜಿಯಾ ಕ್ಯಾಂಪಿಂಗ್ ಇನ್ ಟೌನ್’ನಲ್ಲಿ “ಆರ್ಟ್ ಬಿಯಾಂಡ್ ಬಾರ್ಡರ್ಸ್: ಭಾರತ ಮತ್ತು ಇಟಲಿ ನಡುವಿನ ಸೃಜನಶೀಲ ಸಂವಾದ” ಎಂಬ ವಿಶೇಷ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಈ ಉಪಕ್ರಮವು ಕರ್ನಾಟಕ, ಅಸ್ಸಾಂ, ಕೋಲ್ಕತ್ತಾ, ಮುಂಬೈ, ದೆಹಲಿ, ಮಧ್ಯಪ್ರದೇಶ ಮತ್ತು ಬರೋಡಾ ಸೇರಿದಂತೆ ಭಾರತದ ವಿವಿಧ ಭಾಗಗಳ 11 ಮಂದಿ ಗಣ್ಯ ಕಲಾವಿದರನ್ನು ಹಾಗೂ ಪ್ರಮುಖ ಯುರೋಪಿಯನ್ ಕಲಾವಿದರನ್ನು ಒಗ್ಗೂಡಿಸುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವವರ ಪೈಕಿ ಕಲಬುರಗಿಯ ಖ್ಯಾತ ಕಲಾವಿದ ಮೊಹಮ್ಮದ್ ಅಯಾಜೋದ್ದೀನ್ ಪಟೇಲ್ ಕೂಡ ಒಬ್ಬರು.
ಭಾರತೀಯ ಮತ್ತು ಯುರೋಪಿಯನ್ ಕಲಾ ಸಮುದಾಯಗಳ ನಡುವೆ ಸಂಬಂಧಗಳನ್ನು ಬೆಳೆಸುವ ಉದ್ದೇಶದಿಂದ, ವೈವಿಧ್ಯಮಯ ಕಲಾತ್ಮಕ ದೃಷ್ಟಿಕೋನಗಳನ್ನು ಅನ್ವೇಷಿಸುವ ಸಂವಾದಗಳು, ಸಹಯೋಗದ ಸಭೆಗಳು ಮತ್ತು ಮುಕ್ತ ಚರ್ಚೆಗಳನ್ನು ಒಳಗೊಂಡಿರುವ ಈ ಕಾರ್ಯಾಗಾರವನ್ನು ಸೃಜನಶೀಲತೆ, ಸ್ನೇಹ ಮತ್ತು ಅರ್ಥಪೂರ್ಣ ಸಾಂಸ್ಕೃತಿಕ ವಿನಿಮಯದ ಸಂಬಂಧಗಳನ್ನು ಸಂಭ್ರಮಿಸಲು ರೂಪಿಸಲಾಗಿದೆ.
ವೆನಿಸ್‍ನಲ್ಲಿ ನಡೆಯುವ ಮೂರು ದಿನಗಳ ಕಾರ್ಯಾಗಾರದ ಜೊತೆಗೆ, ಈ ನಿಯೋಗವು ಸೆಪ್ಟೆಂಬರ್ 9 ರಿಂದ 23 ರವರೆಗೆ ಫ್ರಾನ್ಸ್, ಜರ್ಮನಿ, ನೆದರ್‍ಲ್ಯಾಂಡ್ಸ್, ಬೆಲ್ಜಿಯಂ, ಸ್ವಿಜಲ್ಯಾರ್ಂಡ್, ಇಟಲಿಯ ಫ್ಲಾರೆನ್ಸ್ ಮತ್ತು ವ್ಯಾಟಿಕನ್ ಸಿಟಿ ಸೇರಿದಂತೆ ಯುರೋಪ್‍ನ ಸಾಂಸ್ಕೃತಿಕ ರಾಜಧಾನಿಗಳಲ್ಲಿ 15 ದಿನಗಳ ಆಳವಾದ ಅಧ್ಯಯನ ಪ್ರವಾಸವನ್ನು ಕೈಗೊಳ್ಳುತ್ತಿದೆ.
ಈ ಪ್ರವಾಸದ ಕಾರ್ಯಕ್ರಮವು ವಿಶ್ವವಿಖ್ಯಾತ ವಸ್ತುಸಂಗ್ರಹಾಲಯಗಳು, ಐತಿಹಾಸಿಕ ಸ್ಮಾರಕಗಳು ಮತ್ತು ಕಲಾ ಗ್ಯಾಲರಿಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿದ್ದು, ಲಿಯೊನಾರ್ಡೊ ಡಾ ವಿನ್ಸಿ, ಮೈಕೆಲ್ಯಾಂಜೆಲೊ, ವಿನ್ಸೆಂಟ್ ವ್ಯಾನ್ ಗಾಗ್, ರೆಂಬ್ರಾಂಡ್ ಮತ್ತು ಪಿಕಾಸೊರಂತಹ ದಿಗ್ಗಜರ ಶ್ರೇಷ್ಠ ಕಲಾಕೃತಿಗಳನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಕಲಾವಿದರಿಗೆ ಒದಗಿಸುತ್ತದೆ.
ಪಟೇಲ್ ಅವರು ಪ್ಯಾರಿಸ್‍ನ ಲೌವ್ರೆ ಮ್ಯೂಸಿಯಂ, ನೆದರ್‍ಲ್ಯಾಂಡ್ಸ್‍ನ ಆಮ್‍ಸ್ಟರ್‍ಡ್ಯಾಮ್‍ನಲ್ಲಿರುವ ವ್ಯಾನ್ ಗಾಗ್ ಮ್ಯೂಸಿಯಂ, ಮೈಕೆಲ್ಯಾಂಜೆಲೊ ಅವರ ಪ್ರಸಿದ್ಧವಾದ ಮೇಲ್ಛಾವಣಿಯ ಭಿತ್ತಿಚಿತ್ರಗಳನ್ನು ಹೊಂದಿರುವ ವ್ಯಾಟಿಕನ್ ಸಿಟಿಯ ಸಿಸ್ಟೈನ್ ಚಾಪೆಲ್ ಮ್ಯೂಸಿಯಂ, ಫ್ಲಾರೆನ್ಸ್‍ನ ಅಕಾಡೆಮಿಯಾ ಗ್ಯಾಲರಿ ಮತ್ತು ರೋಮ್‍ನ ಕೊಲೋಸಿಯಮ್‍ನಂತಹ ಪ್ರಮುಖ ಸ್ಥಳಗಳು ಹಾಗೂ ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡಲಿದ್ದಾರೆ.
ಅಯಾಜೋದ್ದೀನ್ ಪಟೇಲ್ ಅವರು ದಖನ್ ರಾಜವಂಶಗಳ ಕಲೆ, ವಾಸ್ತುಶಿಲ್ಪ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಅವರು 2014ರಲ್ಲಿ ರಾಷ್ಟ್ರೀಯ ಲಲಿತಕಲಾ ಪ್ರಶಸ್ತಿ, 2016-17ರಲ್ಲಿ ಸಂಸ್ಕೃತಿ ಸಚಿವಾಲಯದಿಂದ ಸಿ.ಸಿ.ಆರ್.ಟಿ. ರಾಷ್ಟ್ರೀಯ ಫೆಲೋಶಿಪ್ ಮತ್ತು 2018ರಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯ ಹಿರಿಯ ಫೆಲೋಶಿಪ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ತಮ್ಮದೇ ಆದ ಕಲಾ ಗ್ಯಾಲರಿ, ವಸ್ತುಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದಾರೆ.
ಈ ಹಿಂದೆ ಅವರು ಅಮೆರಿಕ ಸಂಯುಕ್ತ ಸಂಸ್ಥಾನ, ಲಂಡನ್, ರμÁ್ಯ, ಟರ್ಕಿ, ಚೀನಾ, ಕೀನ್ಯಾ, ಹಾಂಗ್‍ಕಾಂಗ್, ಮಕಾವು, ಈಜಿಪ್ಟ್, ಜೋರ್ಡಾನ್, ಉಜ್ಬೇಕಿಸ್ತಾನ್, ಕಝಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ಮತ್ತು ಇತರ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ.
ಅವರ ಕಲಾವಿದ ಸ್ನೇಹಿತರಾದ ರಾಜಶೇಖರ್ ಶಮನ್ನಾ, ಟಿ. ದೇವೇಂದ್ರ, ರೆಹಮಾನ್ ಪಟೇಲ್, ನಾರಾಯಣ ಜೋಶಿ ಮತ್ತು ಇತರರು ಅವರ ಯಶಸ್ವಿ ಕಲಾ ಪಯಣಕ್ಕಾಗಿ ಶುಭ ಹಾರೈಸಿದರು.