
ಬೆಂಗಳೂರು,ಸೆ. ೩-“ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ವೇಳೆ ದೆಹಲಿ ಮೂಲಕ ತಮಿಳುನಾಡಿಗೆ ನೀರು ಹರಿಸುತ್ತಿದ್ದರೆನೋ? ನಾನು ರಾಜ್ಯದ ನೀರಾವರಿ ಸಮಸ್ಯೆಗಳನ್ನು ಚರ್ಚಿಸಲು ಎರಡು ದಿನಗಳ ಕಾಲ ದೆಹಲಿ ಪ್ರವಾಸದಲ್ಲಿದ್ದೆ” ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಟಾಂಗ್ ನೀಡಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ಕೇಂದ್ರ ಮಂತ್ರಿಯಾಗಿದ್ದರೂ ಸದಾ ಕಾಲ ರಾಜ್ಯದಲ್ಲೇ ಇರುವವರಿಗೆ ಏನು ಗೊತ್ತಿದೆ? ಎರಡೂವರೆ ವರ್ಷದಿಂದ ಕೇಂದ್ರ ಮಂತ್ರಿಯಾಗಿ ಅವರೇನು ಕೆಲಸ ಮಾಡಿದ್ದಾರೆ ಎಂಬುದನ್ನು ಮಾಧ್ಯಮಗಳೇ ಹೇಳಲಿ. ಅವರಿಗೆ ಉತ್ತರ ನೀಡಲು ನನಗೆ ಅಸಹ್ಯ ಎನಿಸುತ್ತದೆ” ಎಂದು ವಾಗ್ದಾಳಿ ನಡೆಸಿದರು.
“ಮಾಜಿ ಮುಖ್ಯ ಮಂತ್ರಿಯಾಗಿದ್ದವರಿಗೆ ನಾಲಿಗೆ ಹಿಡಿತದಲ್ಲಿರಬೇಕು. ಅವರು ಹೇಗೆ ಮಾತನಾಡಬೇಕು ಎಂಬುದು ಅವರಿಗೂ ಗೊತ್ತಿಲ್ಲ. ದೇಶದ ಅತೀ ದೊಡ್ಡ ಎರಡು ಖಾತೆಗಳನ್ನು ಇಟ್ಟುಕೊಂಡು, ರಾಜ್ಯದಲ್ಲಿ ಸುದ್ದಿಗೋಷ್ಠಿ ನಡೆಸುವುದನ್ನು ಬಿಟ್ಟು ಇನ್ನೇನು ಮಾಡಿದ್ದಾರೆ? ಅಮರಾವತಿ ಚಂದ್ರಬಾಬು ನಾಯ್ಡು ಅವರ ಕೊಡುಗೆ. ಹೀಗಾಗಿ ಪ್ರಧಾನಿಗಳು ಅಲ್ಲಿ ಕುಳಿತಿದ್ದಾರೆ. ಇಲ್ಲಿ ಚಂದ್ರಬಾಬು ನಾಯ್ಡು ಅವರ ಕೊಡುಗೆ ಇದೆ. ಆದರೆ, ಕುಮಾರಸ್ವಾಮಿ ಅವರ ಕೊಡುಗೆ ಏನು ? ಎಂದು ಪ್ರಶ್ನೆಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆಗೆ ೫ ಸಾವಿರ ಕೋಟಿ ರೂಪಾಯಿ ನೀಡಲು ಕೇಂದ್ರದ ಕೈಯಲ್ಲಿ ಆಗಿಲ್ಲ. ಮೊದಲು ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನವನ್ನು ಕೊಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಲಿ” ಎಂದು ಆಶಿಸಿದರು.
” ಎಚ್ ಡಿಕೆಗೆ ಅವರಿಗೆ ರಾತ್ರಿ ಹೊತ್ತು ನಿದ್ರೆ ಬರುತ್ತಿಲ್ಲ. ಒಂದು ಕಡೆ ಮಗ್ಗಲು ಬದಲಿಸಿದರೆ ಸಿಎಂ ಡಿ.ಕೆ. ಶಿವಕುಮಾರ್ ಕಾಣಿಸುತ್ತಾರೆ, ಮತ್ತೊಂದು ಕಡೆ ಹೊರಳಿದರೆ ನಾನು ಮತ್ತು ಬಾಲಕೃಷ್ಣ ಕಾಣುತ್ತೇವೆ. ನಾನು ನೀರಾವರಿ ಸಚಿವನಾಗಿರುವುದು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅವರ ಹೊಟ್ಟೆನೋವಿಗೆ ನಾನು ಔಷಧಿ ನೀಡಲು ಆಗುವುದಿಲ್ಲ” ಎಂದರು.*
“ನಾನು ಕುಮಾರಸ್ವಾಮಿ ಬಗ್ಗೆ ಹೇಳಲು ಶುರು ಮಾಡಿದರೆ, ಅವರಿಗೆ ತಡೆದುಕೊಳ್ಳುವಷ್ಟು ತಾಕತ್ತಿಲ್ಲ. ಅವರಿಗೆ ತಾಕತ್ತಿದ್ದರೆ ವಿಧಾನಸೌಧ ಇಲ್ಲವೇ ಯಾವುದೇ ಟಿವಿ ಚಾನೆಲ್ಗಾದರೂ ಸರಿ ಬರಲಿ, ನಾನು ಚರ್ಚೆ ಮಾಡುತ್ತೇನೆ. ನಾನು ಬೆಳಿಗ್ಗೆ ಐದು ಗಂಟೆಗೆ ಯಾಕೆ ಬಾಗಿಲು ಬಡಿದಿದ್ದೆ ಎಂದು ವಿವರಿಸಿದರೆ ಅವರು ತಡೆದುಕೊಳ್ಳುವುದಿಲ್ಲ.
೨೦೦೬ರಲ್ಲಿ ಸಿಎಂ ಆಗಿದ್ದ ಅವರು ಎರಡು ದಿನ ನಾಪತ್ತೆಯಾಗಿದ್ದರು. ಅವರನ್ನು ಹುಡುಕಿ ಬೆಳಿಗ್ಗೆ ಕ್ಯಾಬಿನೆಟ್ಗೆ ಕರೆತರುವ ಟಾಸ್ಕ್ ಅನ್ನು ದೇವೇಗೌಡರು ನನಗೆ ನೀಡಿದ್ದರು. ಅವರು ನೀಡಿದ್ದ ಟಾಸ್ಕ್ಗಾಗಿ ನಾನು ಬೆಳಿಗ್ಗೆ ಐದು ಗಂಟೆಗೆ ಮನೆ ಬಾಗಿಲು ಬಡಿದಿದ್ದೆ. ನಾನು ಆಗ ಯಾರ ಮನೆ ಬಾಗಿಲು ಬಡಿದಿದ್ದೆ ಎಂಬುದನ್ನು ವಿವರವಾಗಿ ಕೇಳಲು ಅವರಿಗೆ ಆಸೆ ಇದ್ದರೆ ಹೇಳುತ್ತೇನೆ. ನಾನು ಅವರಂತೆ ’ಹಿಟ್ ಅಂಡ್ ರನ್’ ಕೆಲಸ ಮಾಡುವುದಿಲ್ಲ. ಅವರಿಗೆ ಗುಂಡಿಗೆ ಇದ್ದರೆ ಬರಲಿ. ನನ್ನ ಬಗ್ಗೆ ಹೇಳಲು ಅವರಿಗೆ ಏನೂ ಇಲ್ಲ, ಬರಿ ಹಿಟ್ ಅಂಡ್ ರನ್ ಅಷ್ಟೇ. ಅವರ ಬಗ್ಗೆ ನಾನು ಸಾವಿರ ಹೇಳುತ್ತೇನೆ” ಎಂದು ಬಹಿರಂಗ ಚರ್ಚೆಗೆ ಆಹ್ವಾನಿಸಿದರು.
“ಕೆಪಿಎಸ್ಸಿಯಲ್ಲಿ ಅಕ್ರಮ ನಡೆದಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಲಿ. ಇದಕ್ಕೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಇದರೊಂದಿಗೆ ನೀಟ್ ಸೇರಿದಂತೆ ಎಲ್ಲವೂ ತನಿಖೆಯಾಗಲಿ.
ಆದರೆ, ಕೆಪಿಎಸ್ಸಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದವರು ಈಗ ಅಮಾನತುಗೊಂಡಿದ್ದಾರೆ. ಈಗ ಅಮಾನತುಗೊಂಡ ಅಧ್ಯಕ್ಷರನ್ನು ನೇಮಿಸಿದ್ದು ಯಾರು? ಚೇರ್ಮನ್, ಸದಸ್ಯರ ನೇಮಕಾತಿಯಲ್ಲಿ ಪಾರದರ್ಶಕತೆ ಕಾಪಾಡಬೇಕಿತ್ತು. ಅಂದಿನ ಎಲ್ಲ ನೇಮಕಗಳ ಹೊಣೆಯನ್ನು ಈಗ ಬಿಜೆಪಿ – ಜೆಡಿಎಸ್ ಹೊರಬೇಕು. ಪ್ರಸ್ತುತ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ದಲ್ಲಿ ಯಾವುದೇ ಅಕ್ರಮಗಳಿಲ್ಲ. ಇರುವವರೆಲ್ಲ ಉತ್ತಮ ಅಧಿಕಾರಿಗಳು, ಇಂತಹ ಅಧಿಕಾರಿಗಳನ್ನು ನೇಮಿಸಿದ್ದು ನಮ್ಮ ಸರ್ಕಾರ” ಎಂದರು.
“ನೀರಾವರಿ ಸಮಸ್ಯೆಗಳನ್ನು ಚರ್ಚಿಸುವ ಉದ್ದೇಶದಿಂದ ನಾನು ಎರಡು ದಿನಗಳ ಕಾಲ ದೆಹಲಿಗೆ ಹೋಗಿದ್ದೆ. ಪ್ರಧಾನಿಗಳಿಗೂ ಸಹ ರಾಜ್ಯದ ನೀರಾವರಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡಲಾಗಿದೆ. ರಾಷ್ಟ್ರೀಯ ಜಲ ಇಲಾಖೆಯ ಸಮಾವೇಶದ ಅಂತಿಮದಲ್ಲಿ ಪ್ರಧಾನಿಗಳೇ ಭಾಷಣ ಮಾಡಿದ್ದಾರೆ.
ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ವಾಟರ್ ಕಮಿಷನ್ ಜೊತೆಗೆ ಒಂದು ಗಂಟೆಗೂ ಅಧಿಕ ಕಾಲ ನಮ್ಮ ಎಸಿಎಸ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದರು
ಮಹದಾಯಿ ಯೋಜನೆಗಾಗಿ ಪ್ರಲ್ಹಾದ್ ಜೋಶಿ ಅವರ ಬಳಿಯೂ ಪ್ರತ್ಯೇಕವಾಗಿ ಮಾತನಾಡುತ್ತೇನೆ. ಅವರೇ ಉಸ್ತುವಾರಿ ವಹಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಿದರೆ, ಅದಕ್ಕೂ ಸಹ ಸಂಪೂರ್ಣ ಸಹಕಾರ ನೀಡಲಾಗುವುದು. ಮೇಕೆದಾಟು ಯೋಜನೆಯಿಂದಾಗಿ ತಮಿಳುನಾಡಿಗೆ ಯಾವುದೇ ತೊಂದರೆಯಿಲ್ಲ. ಕಬಿನಿ, ಕೆಆರ್ಎಸ್ ಮೇಲಿನ ಹೊರೆ ಕಡಿಮೆಯಾಗುವುದು ಮಾತ್ರವಲ್ಲದೇ, ಕಾವೇರಿಯ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಅಗತ್ಯದ ವೇಳೆ ತಮಿಳುನಾಡಿಗೆ ಹರಿಸಲಾಗುವುದು. ಇದರಿಂದ ಅವರಿಗೇ ಹೆಚ್ಚು ಪ್ರಯೋಜನ. ಈ ಎಲ್ಲವನ್ನೂ ತಮಿಳುನಾಡಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ” ಎಂದರು.
ಈ ಹಿಂದೆ ಸಿಎಂ ಆಗಿದ್ದವರೂ ಸಹ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಆದರೆ, ನಾವು ಕಾನೂನಿನ ಹೋರಾಟದ ಮೂಲಕ ೧೨ ಸಾವಿರ ಕ್ಯೂಸೆಕ್ ಬದಲಿಗೆ ೯ ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಆದೇಶ ಪಡೆದಿದ್ದೇವೆ. ನ್ಯಾಯಾಲಯದ ಮುಂದಿನ ಕಲಾಪದಲ್ಲಿ ತಮಿಳುನಾಡಿಗೆ ನೀರು ನಿಲ್ಲಿಸಲು ಅವಿರತ ಶ್ರಮಿಸುತ್ತೇವೆ” ಎಂದರು.
ಸೈಬರ್ ದೂರು ದಾಖಲು
“ರಾಜ್ಯದ ಡ್ಯಾಂಗಳ ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ಈಗಾಗಲೇ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಲಾಖೆಯ ಸೂಪರ್ವೈಸರ್ ಅವರನ್ನು ಮೇಕೆದಾಟು ವಿಚಾರಕ್ಕೆ ದೆಹಲಿಗೆ ಕಳುಹಿಸಿದ್ದೇನೆ. ಕಾವೇರಿ ನೀರಾವರಿ ನಿಗಮದ ಎಂಡಿ ಅವರಿಗೂ ಈ ಸೂಚನೆ ನೀಡಿದ್ದು, ಅವರೊಟ್ಟಿಗೆ ಮತ್ತೊಮ್ಮೆ ಚರ್ಚಿಸಿ ಮಾಹಿತಿ ನೀಡಲಾಗುವುದು” ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಆಗಸ್ಟ್ ೨೨ ರಂದು ಮಾಜಿ ಯೋಧರೊಬ್ಬರು ನಿವೇಶನಕ್ಕಾಗಿ ಸಿಎಂ ಅವರನ್ನು ಭೇಟಿಯಾಗಲು ಹೋದಾಗ ಪೊಲೀಸರು ಅವರನ್ನು ಎಳೆದಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, “ಮುಖ್ಯಮಂತ್ರಿಗಳು ಈ ರೀತಿ ನಡೆದುಕೊಳ್ಳುವವರಲ್ಲ. ಯಾರೇ ಆದರೂ ಅವರನ್ನು ಭೇಟಿ ಮಾಡಬಹುದು. ಇದು ಪೊಲೀಸರ ನಡೆ, ಹೀಗಾಗಿ ಅವರ ಮೇಲೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಲಿದೆ” ಎಂದರು.































