Home ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ ಮಂಡನೆ:ಬಿ.ಬಿ.ಸಿ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ ಮಂಡನೆ:ಬಿ.ಬಿ.ಸಿ ಕಾರ್ಯಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಶ್ಲಾಘನೆ

ಕಲಬುರಗಿ,ಸೆ.2: ಬೆಂಗಳೂರು ಜೈವಿಕ-ಆರ್ಥಿಕ ಮಿಷನ್ ಕೇಂದ್ರ (ಬಿಬಿಸಿ) ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯದ ಗೃಹ, ಐಟಿ-ಬಿಟಿ, ಇ-ಆಡಳಿತ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಮುಂದೆ ಕಲ್ಯಾಣ ಕರ್ನಾಟಕ ಜೈವಿಕ-ಆರ್ಥಿಕ ಮಿಷನ್ ಮಂಡಿಸಿತ್ತು.
ಕಲ್ಯಾಣ ಕರ್ನಾಟಕ ಪ್ರದೇಶದ ಮೂರು ನಿರ್ದಿಷ್ಟ ಬೆಳೆಗಳಾದ ತೊಗರಿ, ಕೆಂಪು ಬಾಳೆ ಮತ್ತು ಕಬ್ಬುಗಳಲ್ಲಿ ನೆಲೆಗೊಂಡಿರುವ ಪ್ರಾದೇಶಿಕ ಜೈವಿಕ ಆರ್ಥಿಕತೆಯನ್ನು ನಿರ್ಮಿಸಲು ಒಂದು ಮಾರ್ಗಸೂಚಿಯನ್ನು ಸಚಿವರಿಗೆ ವಿವರಿಸಲಾಯಿತು. ಈ ಮಾರ್ಗಸೂಚಿಯು ಅಂಗಾಂಶ ಕೃಷಿ ಮತ್ತು ರೋಗ-ಮುಕ್ತ ನೆಟ್ಟ ವಸ್ತುಗಳು, ಜೈವಿಕ ಗೊಬ್ಬರಗಳು ಮತ್ತು ಸ್ಥಳೀಯ ಮಣ್ಣಿನ ಸೂಕ್ಷ್ಮಜೀವಿಗಳಿಂದ ಅಭಿವೃದ್ಧಿಪಡಿಸಿದ ಜೈವಿಕ ಒಳಹರಿವು, ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ಉಪ-ಉತ್ಪನ್ನಗಳ ಉತ್ಪಾದಕ ಬಳಕೆ, ತಂತ್ರಜ್ಞಾನ ವರ್ಗಾವಣೆ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಳಗೊಂಡಿದೆ.
ಬಿಬಿಸಿ ಕಲಬುರಗಿ ಪಲ್ಸ್ ಮಿಷನ್ ಅನ್ನು ಸಹ ಪ್ರಸ್ತುತಪಡಿಸಿದ್ದು, ಇದು ಜಮೀನಿನಿಂದ ಶೆಲ್ಫ್ಗೆ ಪಲ್ಸ್ ಮೌಲ್ಯ ಸರಪಳಿಯನ್ನು ಬಲಪಡಿಸಲು, ಸ್ಥಳೀಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯನ್ನು ವಿಸ್ತರಿಸಲು ಮತ್ತು ರೈತರು ಮತ್ತು ರೈತ ಉತ್ಪಾದಕ ಸಂಸ್ಥೆಗಳಿಗೆ ಆದಾಯವನ್ನು ಹೆಚ್ಚಿಸಲು ಒಂದು ಸಂಯೋಜಿತ ಕಾರ್ಯಕ್ರಮವಾಗಿದೆ ಎಂದು ಬಿಬಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಆದಿಲ್ ಎ.ಎ. ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಬೆಂಗಳೂರು ಬಯೋ ಇನ್ನೋವೇಶನ್ ಸೆಂಟರ್ ಹಾಗೂ ಕಲಬುರಗಿ ಕೃಷಿ ಇಲಾಖೆ ಸಹಯೋಗದಲ್ಲಿ ಸ್ಥಳೀಯವಾಗಿ ಬೆಳೆಯುವ ತೊಗರಿಬೇಳೆ, ಉದ್ದಿನಬೇಳೆ, ಹೆಸರುಬೇಳೆ ಮತ್ತು ಕಡಲೆಬೇಳೆ ಬಳಸಿ 6 ಬಗೆಯ ರೆಡಿ ಟು ಈಟ್ ಎನರ್ಜಿ ಬಾರ್‍ಗಳನ್ನು ತಯಾರಿಸಿ ಪ್ರಾಯೋಗಿಕವಾಗಿ ಪರಿಚಯಿಸಿ ಶ್ಲಾಘನೀಯವಾಗಿದೆ. ಬಿಬಿಸಿಯು ಮೌಲ್ಯವರ್ಧನೆ, ಅಂಗಾಂಶ ಸಂವರ್ಧನೆ ಮತ್ತು ಜೈವಿಕ ಗೊಬ್ಬರ ತಂತ್ರಜ್ಞಾನಗಳಲ್ಲಿ ಆರಂಭಿಕ ಹಂತದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಸ್ಥೆಯನ್ನು ಕೋಮಡಾಡಿದ ಅವರು, ಕಲಬುರಗಿಯ ಕಾಳುಗಳನ್ನು ಕಚ್ಚಾ ಉತ್ಪನ್ನದಿಂದ ಮೌಲ್ಯವರ್ಧಿತ ಹಾಗೂ ಬ್ರಾಂಡೆಡ್ ಉತ್ಪನ್ನಗಳಾಗಿ ಪರಿವರ್ತಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದರು.
ಇದು ರೈತರಿಗೆ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯ ಪಡೆಯಲು, ಎಫ್.ಪಿ.ಓ ಗಳು, ಎಸ್.ಎಚ್.ಜಿ.ಗಳು, ಎಂ.ಎಸ್.ಎಂ.ಇ. ಗಳಿಗೆ ಹೊಸ ಉದ್ಯಮ ತೆರೆಯಲು ಮತ್ತು ಉತ್ತಮ ಪೌಷ್ಟಿಕತೆ ಹಾಗೂ ಬಲಿಷ್ಠ “ಕಲಬುರಗಿ ಪಲ್ಸಸ್” ಬ್ರ್ಯಾಂಡ್ ರೂಪುಗೊಳ್ಳಲು ಹಾಗೂ ಸುಸ್ಥಿರ ಆರ್ಥಿಕ ಬೆಳವಣಿಗೆಗೆ ಅವಕಾಶ ಹೆಚ್ಚಿಸವೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕರ್ನಾಟಕ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯದ್ ಮಹೆಮೂದ್ ಚಿಸ್ತಿ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಜಿಲ್ಲಾಧಿಕಾರಿ ಇಕ್ರಂ ಶರೀಫ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಶರಣಪ್ಪ ಸಂಕನೂರ್, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಇದ್ದರು.